ADVERTISEMENT

ನರಗುಂದ | ಕಲ್ಲಂಗಡಿ ಹಣ್ಣು: ಕಡಿಮೆ ಬೆಲೆಗೆ ನೇರವಾಗಿ ಗ್ರಾಹಕರಿಗೆ ಮಾರಾಟ

ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ರೈತರಿಂದ ಮಾರಾಟ: ದಲ್ಲಾಳಿಗಳ ಹಾವಳಿ ಕಡಿಮೆ

ಬಸವರಾಜ ಹಲಕುರ್ಕಿ
Published 25 ಮಾರ್ಚ್ 2025, 4:57 IST
Last Updated 25 ಮಾರ್ಚ್ 2025, 4:57 IST
ನರಗುಂದದಲ್ಲಿ ಕಲ್ಲಂಗಡಿ ಮಾರಾಟ ಮಾಡುತ್ತಿರುವ ದೃಶ್ಯ.
ನರಗುಂದದಲ್ಲಿ ಕಲ್ಲಂಗಡಿ ಮಾರಾಟ ಮಾಡುತ್ತಿರುವ ದೃಶ್ಯ.   

ನರಗುಂದ: ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ಜೋರಾಗುತ್ತಿದೆ. ಹೆಚ್ಚಿನ ಜನ ತಂಪು ಪಾನೀಯಗಳು, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಬೇಸಿಗೆಯಲ್ಲಿ ಎಲ್ಲರ ಕಣ್ಣರಳಿಸಿ ದೇಹ ತಂಪು ಮಾಡುವ ಕಲ್ಲಂಗಡಿ ಪಟ್ಟಣದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೂ ರೈತರೇ ಮಾರಾಟ ಮಾಡಲು ತೊಡಗಿದ್ದಾರೆ.

ತಾಲ್ಲೂಕಿನಲ್ಲಿ ಕಲ್ಲಂಗಡಿ ಬೆಳೆಯುವುದು ಕಡಿಮೆ. ಆದ್ದರಿಂದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ರೈತರು ನೇರವಾಗಿ ಪಟ್ಟಣಕ್ಕೆ ಬಂದು ಮಾರಾಟ ಮಾಡುತ್ತಿದ್ದು, ಹೆಚ್ಚಿನ ಕಡೆ ಕಲ್ಲಂಗಡಿ ಮಾರಾಟ ನಡೆದಿದೆ.

ಕಲ್ಲಂಗಡಿಗೆ ಭಾರಿ ಬೇಡಿಕೆ: ಬಿಸಿಲ ಬೇಗೆ ತಡೆಯದಂತಾಗಿದೆ. ಇದರಿಂದ ಈ ಸಂದರ್ಭಕ್ಕೆ ಕಲ್ಲಂಗಡಿ ಹೇಳಿ ಮಾಡಿಸಿದ ಹಣ್ಣಾಗಿದೆ. ಎಷ್ಟೇ ಪ್ರಮಾಣದ ಹಣ್ಣು ಮಾರಾಟಕ್ಕೆ ಬಂದರೂ ಮಾರಾಟವಾಗುತ್ತಿದೆ. ಇದರಿಂದ ಕಲ್ಲಂಗಡಿ ಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. 

ADVERTISEMENT

ಮಾರುಕಟ್ಟೆಗೆ ಇಳಿದ ರೈತರು: ಸದಾ ದಲ್ಲಾಳಿಗಳ ಮೋಸಕ್ಕೆ ಹೈರಾಣಾಗಿದ್ದ ರೈತರು ಇದೀಗ ಸ್ವತಃ ತಾವೇ. ಮಾರುಕಟ್ಟೆ ಅಖಾಡಕ್ಕೆ ಇಳಿದಿದ್ದಾರೆ. ಕೆಮಿಕ‌ಲ್‌ ಹಾವಳಿ ನೆಪವೊಡ್ಡಿ ಕಲ್ಲಂಗಡಿ ಹಣ್ಣುಗಳನ್ನು ರೈತರಿಂದ ಕೇವಲ ಕೆಜಿಗೆ ₹ 4-5ಕ್ಕೆ ದಲ್ಲಾಳಿಗಳು ಖರೀದಿಸಿ ನಂತರ ಅದನ್ನು ಗ್ರಾಹಕರಿಗೆ ₹ 25 ರಿಂದ 50ರವರೆಗೂ ಮಾರಾಟ ಮಾಡುತ್ತಾರೆ. ಇದನ್ನರಿತು ಎಚ್ಚರಗೊಂಡ ರೈತರು ದಲ್ಲಾಳಿಗಳ ಸಹವಾಸವೇ ಬೇಡ ಎಂದು ತಾವೇ ತಂದು ಮಾರಾಟ ಮಾಡುತ್ತಾರೆ.

ಲಾಭದತ್ತ ರೈತರು: ವರ್ಷವಿಡೀ ಕಷ್ಟಪಟ್ಟರೂ ಮಾರಾಟದ ವೇಳೆ ಸದಾ ದಲ್ಲಾಳಿಗಳ ಹೊಡೆತಕ್ಕೆ ನಲುಗಿ ಹೋಗುತ್ತಿದ್ದ ರೈತರಿಗೆ ಈ ವರ್ಷ ತಾವೇ ಮಾರಾಟ ಮಾಡುತ್ತಿರುವುದರಿಂದ ರೈತರು ಲಾಭದತ್ತ ಮುಖ ಮಾಡಿದ್ದಾರೆ.

ಹೊರಜಿಲ್ಲೆಯ ರೈತರದೇ ದರ್ಬಾರ್: ಬೆಳಗಾವಿ ಜಿಲ್ಲೆಯ ಮುನವಳ್ಳಿ, ಸುರೇಬಾನ, ಕುಳಗೇರಿ, ಬಾಗಲಕೋಟ ಜಿಲ್ಲೆಯ ಕಲಾದಗಿ, ಕಮತಗಿಯಿಂದ ಬರುವ ರೈತರು ಕಲ್ಲಂಗಡಿಯನ್ನು ಲಾರಿ ಮೂಲಕ ತರುತ್ತಾರೆ. ಪಟ್ಟಣದ ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲಿರುವುದರಿಂದ ಸಾರಿಗೆ ಸಂಪರ್ಕ ರೈತರಿಗೆ ಅನುಕೂಲವಾಗಿದೆ. ಉತ್ತಮ ಮಾರುಕಟ್ಟೆ ದೊರೆತಂತಾಗಿದೆ.

ಹೆಚ್ಚಿನ ಇಳುವರಿ: ಕಳೆದ ವರ್ಷ ₹50ರಿಂದ 100ರವರೆಗೆ ಕಲ್ಲಂಗಡಿ ಮಾರಾಟವಾಗಿತ್ತು. ಆದ್ದರಿಂದ ಇದನ್ನರಿತ ಕಲ್ಲಂಗಡಿ ಬೆಳೆಯುವ ರೈತರು ಈ ವರ್ಷ ಹೆಚ್ಚಿನ ಪ್ರಮಾಣದ ಕಲ್ಲಂಗಡಿ ಬೆಳೆದಿದ್ದಾರೆ. ಆದ್ದರಿಂದ ಬೇಸಿಗೆಯಲ್ಲಿ ಹೆಚ್ಚಿನ ಲಾಭವಾಗದಿದ್ದರೂ ಅಲ್ಲ ಲಾಭವಾಗುತ್ತಿರುವುದರಿಂದ ಪಟ್ಟಣದಲ್ಲಿ ಕಲ್ಲಂಗಡಿ. ಮಾರಾಟ ಜೋರಾಗಿದೆ.

ಕೆಜಿ ಬದಲು ಇಡಿ ಹಣ್ಣು: ಹಣ್ಣುಗಳ ಅಂಗಡಿಗೆ ತೆರಳಿದಾಗ ಕೆಜಿ ಪ್ರಮಾಣದಲ್ಲಿ ದರ ನಿಗದಿಯಾಗಲಿದೆ. ಆದರೆ ಈ ವರ್ಷ ಕೆಜಿ ಲೆಕ್ಕ ಹಾಕದೇ ಇಡಿಯಾಗಿ ಹಣ್ಣು ದೊರೆಯುತ್ತಿರುವುದು ಸಂತಸ ತಂದಿದೆ. ಒಟ್ಟಾರೆ ಕಲ್ಲಂಗಡಿಯನ್ನು ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿ ತಿಂದು ಬಿಸಿಲ ಬೇಗೆಯಿಂದ ಪಾರಾಗಬಹುದಾಗಿದೆ ಎಂದು ಎಲ್ಲರಿಂದ ಅಭಿಪ್ರಾಯ ವ್ಯಕ್ತವಾಗಿದೆ.

ದಲ್ಲಾಳಿಗಳ ಗೊಡವೆ ಇಲ್ಲ: ಕೆಲವು ದಲ್ಲಾಳಿಗಳು ನಮ್ಮ ಹೊಲಕ್ಕೆ ಬಂದು ಕಲ್ಲಂಗಡಿ ಹಣ್ಣುಗಳನ್ನು ₹ 5ರಿಂದ ₹ 8ರವರಿಗೆ ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ನಂತರ ಗ್ರಾಹಕರಿಗೆ ₹ 50 ರಿಂದ ₹ 100ರವರೆಗೆ ಮಾರಾಟ ಮಾಡುತ್ತಾರೆ. ಇದರಿಂದ ನಮಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಹೀಗಾಗಿ ನಾವೇ ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಲಾಭ ಪಡೆಯುತ್ತಿದ್ದೇವೆ ಎಂದು ಪಟ್ಟಣದಲ್ಲಿ ಮಾರಾಟ ಮಾಡಲು ಬಂದ ಬಾಗಲಕೋಟೆ ಜಿಲ್ಲೆ ಕಲಾದಗಿಯ ರೈತ ಸುಭಾಸ ಹೇಳಿದರು.

ದಲ್ಲಾಳಿಗಳ ಹಿಡಿತಕ್ಕೆ ನಲುಗಿದ್ದ ರೈತರು ಕಲ್ಲಂಗಡಿಗಳನ್ನು ತಾವೇ ಮಾರಾಟ ಮಾಡುತ್ತಿದ್ದು ಮೂರು ಪಟ್ಟು ಹೆಚ್ಚು ಲಾಭ ಪಡೆಯುತ್ತಿದ್ದಾರೆ
ದ್ಯಾವನಗೌಡ ಪಾಟೀಲ, ರೈತ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.