ರಾಕೇಶ್ ನಾಗೇಶಪ್ಪ ಮಣ್ಣೋಡ್ಡರ
ನರೇಗಲ್ (ಗದಗ ಜಿಲ್ಲೆ): ಇತ್ತೀಚೆಗೆ ಪ್ರಕಟವಾದ ಎಸ್ಎಸ್ಎಲ್ಸಿ ಪರೀಕ್ಷೆ-1 ರಲ್ಲಿ ಅನುತ್ತೀರ್ಣ ಆದ ಕಾರಣಕ್ಕೆ ಪಟ್ಟಣದ ಅನ್ನದಾನೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ರಾಕೇಶ್ ನಾಗೇಶಪ್ಪ ಮಣ್ಣೋಡ್ಡರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ಕನ್ನಡ(60), ಇಂಗ್ಲಿಷ್(48) ವಿಷಯಗಳಲ್ಲಿ ಪಾಸಾಗಿದ್ದು, ಉಳಿದ ಹಿಂದಿ (34), ಗಣಿತ (34), ವಿಜ್ಞಾನ (35), ಸಮಾಜ ವಿಜ್ಞಾನ (27) ವಿಷಯಗಳಲ್ಲಿ ಫೇಲಾಗಿದ್ದಾನೆ. ಫಲಿತಾಂಶ ಪ್ರಕಟವಾದ ದಿನದಿಂದ ಮನಸ್ಸಿಗೆ ತೆಗೆದುಕೊಂಡಿದ್ದ ವಿದ್ಯಾರ್ಥಿಯು ಅದನ್ನೇ ಹೆಚ್ಚಾಗಿ ವಿಚಾರ ಮಾಡುತ್ತಿದ್ದ. ಇದೇ ವಿಷಯಕ್ಕೆ ಮನನೊಂದು ನರೇಗಲ್ ಬಸ್ ನಿಲ್ದಾಣದ ಎದುರಿಗೆ ಇರುವ ಸರ್ಕಾರಿ ಶಾಲೆಯ ಆವರಣದಲ್ಲಿನ ಗಿಡಕ್ಕೆ ನೇಣು ಬಿಗಿದುಕೊಂಡಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವಿದ್ಯಾರ್ಥಿಯು ಕ್ರೀಡೆಯಲ್ಲಿ ಮುಂಚೂಣಿಯಲ್ಲಿದ್ದನು. ಶಾಲೆಯ ಕಬಡ್ಡಿ ತಂಡದ ನಾಯಕತ್ವ ವಹಿಸಿ ಜಿಲ್ಲಾ ಮಟ್ಟದವರೆಗೆ ತೆಗೆದುಕೊಂಡು ಹೋಗಿದ್ದನು. ವಿದ್ಯಾರ್ಥಿಯ ಆಟದಲ್ಲಿನ ಗಮನಾರ್ಹ ಸಾಧನೆ ಗುರುತಿಸಿ ಈ ಬಾರಿ ಶಾಲೆಯ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಲಾಗಿತ್ತು. ಈಚೆಗೆ ಶಾಲೆಗೆ ಬಂದು ಸೋಮವಾರದಿಂದ ಆರಂಭವಾಗುವ ಪರೀಕ್ಷೆ-2ರ ಪ್ರವೇಶಪತ್ರ ತೆಗೆದುಕೊಂಡು ಹೋಗಿದ್ದ. ಆದರೆ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಬೇಜಾರಾಗಿದೆ ಎಂದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ. ಬಿ. ಸಜ್ಜನರ ತಿಳಿಸಿದ್ದಾರೆ.
ರಾಕೇಶ್ ಉತ್ತಮ ಕಬಡ್ಡಿ ಆಟಗಾರನಾಗಿದ್ದು ಮುಕ್ತ ಹಾಗೂ ಕೆಜಿ ಕಬಡ್ಡಿ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲೆಡೆ ಹೆಸರು ಮಾಡಿದ್ದ. ಉತ್ತಮ ಆಟಗಾರ ಓದಿನ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ನೋವಾಗಿದೆ ಎಂದು ಅವನ ಸಹಪಾಠಿಗಳು ತಿಳಿಸಿದರು.
ಮೃತ ವಿದ್ಯಾರ್ಥಿಯ ತಂದೆ ಮನೆ ಹಾಗೂ ಕಟ್ಟಡಗಳನ್ನು ಕಟ್ಟುವ ಕೆಲಸ ಮಾಡುತ್ತಾರೆ. ಅವರಿಗೆ ಇಬ್ಬರು ಗಂಡುಮಕ್ಕಳಿದ್ದು ರಾಕೇಶ್ ಕಿರಿಯ ಮಗನಾಗಿದ್ದಾನೆ. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.