
ಲಕ್ಷ್ಮೇಶ್ವರ: ‘ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ 180 ಅಂಗವಿಕಲ ವಿದ್ಯಾರ್ಥಿಗಳು ಇದ್ದು, ಅವರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು. ಮೌಲ್ಯಾಂಕನ ಮೂಲಕ ವಿದ್ಯಾರ್ಥಿಗಳಿಗೆ ಉಪಕರಣ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಸೋಮೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ನಡೆದ ಅಂಗವಿಕಲ ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ತಪಾಸಣೆಗೆ ಆಗಮಿಸಿದ ವೈದ್ಯರು ನುರಿತ ವೈದ್ಯರಲ್ಲ’ ಎಂದು ಆರೋಪಿಸಿದರು.
ಸರ್ಕಾರ ಹಾಗೂ ಅಧಿಕಾರಿಗಳು ಬೇಜವಾಬ್ದಾರಿಯಿಂದ ಏಜೆನ್ಸಿಯವರಿಗೆ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ. ಕೇವಲ ಎರಡು ತಿಂಗಳು ತರಬೇತಿ ಪಡೆದು ವೈದ್ಯರೆಂದು ತಪಾಸಣೆ ಬಂದಿರುವವರ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.
ಬಿಇಒ ಎಚ್.ಎಂ. ನಾಯ್ಕ, ಅಂಗವಿಕಲರ ಸಂಘ ಜಿಲ್ಲಾ ಘಟಕ ಅದ್ಯಕ್ಷ ಆರ್.ಎಂ. ಶಿರಹಟ್ಟಿ, ಮುಖ್ಯ ಶಿಕ್ಷಕಿ ಎಲ್.ಎ. ನಡುವಿನಮನಿ, ಪ್ರಾಥಮಿಕ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಬಿಆರ್ಸಿ ಈಶ್ವರ ಮೆಡ್ಲೇರಿ, ಚಂದ್ರಕಾಂತ ನೇಕಾರ, ಪಿಆರ್ಸಿ ಬಿ.ಎಸ್. ಭಜಂತ್ರಿ, ಗಂಗಾಧರ ಮೆಣಸಿನಕಾಯಿ, ಅನೀಲ ಮುಳಗುಂದ, ಭಾರತಿ ಮೂರಶಿಳ್ಳಿನ, ಮಂಜುನಾಥ ರಾಮಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.