ಗದಗ: ಸಾರ್ವಜನಿಕರು‘ಸಾಮಾಜಿಕ ಅಂತರ’ ಪಾಲಿಸಲು ತೀವ್ರ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಇಲ್ಲಿನ ಬೆಟಗೇರಿ ತರಕಾರಿ ಮಾರುಕಟ್ಟೆ ಸಮೀಪ ಇರುವ ಇಂದಿರಾ ಕ್ಯಾಂಟೀನ್ಗೆ ಮೂರು ದಿನಗಳಿಂದ ಬೀಗ ಹಾಕಲಾಗಿದೆ.
ಕೊರೊನಾ ಲಾಕ್ಡೌನ್ ಘೋಷಣೆಯಾದ ಬೆನ್ನಲ್ಲೇ, ರಾಜ್ಯದ ಉಳಿದ ಕಡೆ ಇಂದಿರಾ ಕ್ಯಾಂಟೀನ್ಗಳಲ್ಲಿ ಕಾರ್ಮಿಕರಿಗೆ, ಸಾರ್ವಜನಿಕರಿಗೆ, ನಿರ್ಗತಿಕರಿಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಗದುಗಿನಲ್ಲೂ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ಬೀದಿ ಬದಿಯ ವ್ಯಾಪಾರಿಗಳು ಇಲ್ಲಿಂದ ಹಸಿವು ನೀಗಿಸಿಕೊಳ್ಳುತ್ತಿದ್ದರು.
ಆದರೆ, ಲಾಕ್ಡೌನ್ ಬೆನ್ನಲ್ಲೇ, ಉಳಿದ ಹೋಟೆಲ್ಗಳು ಬಾಗಿಲು ಹಾಕಿದಾಗ, ಸಾರ್ವಜನಿಕರು ಆಹಾರ ಸೇವಿಸಲು ಗುಂಪು ಗುಂಪಾಗಿ ಇಲ್ಲಿಗೆ ಮುಗಿಬೀಳಲು ಆರಂಭಿಸಿದರು. ಎಷ್ಟೇ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರೂ, ಸಾರ್ವಜನಿಕ ಅಂತರ ಪಾಲಿಸಲಿಲ್ಲ.ಇದರಿಂದ ಕಾರಣ ಬೇಸತ್ತ ಅಧಿಕಾರಿಗಳು ಮಾರ್ಚ್ 28ರಿಂದ ಕ್ಯಾಂಟೀನ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
‘ಇಂದಿರಾ ಕ್ಯಾಂಟೀನ್ ಇನ್ನೆರಡು ದಿನಗಳಲ್ಲಿ ಪುನರಾರಂಭ ಮಾಡುತ್ತೇವೆ. ಊಟ, ಉಪಹಾರಕ್ಕೆ ತೊಂದರೆ ಅನುಭವಿಸುವ ಜನರು ಇಲ್ಲಿಗೆ ಬಂದು ಸಾಮಾಜಿಕ ಅಂತರ ಕಾಯ್ದುಕೊಂಡು, ಊಟ ಪಾರ್ಸೆಲ್ ತೆಗೆದುಕೊಂಡು ಹೋಗುವ ಸೌಲಭ್ಯ ಕಲ್ಪಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಮನ್ಸೂರ ಅಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.