
ಗದಗ: ‘ವೃತ್ತಿ ತರಬೇತಿಯಿಂದ ಕೌಲಶಗಳು ಹೆಚ್ಚುತ್ತವೆ. ಉದ್ಯೋಗಿಗಳು ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕೆಲಸ ಮಾಡಿದರೆ ಬ್ಯಾಂಕ್ ಪ್ರಗತಿಯ ಹಾದಿಯಲ್ಲಿ ಸಾಗುತ್ತದೆ’ ಎಂದು ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಎಸ್.ಪಾಟೀಲ ಹೇಳಿದರು.
ಸಹಕಾರ ಇಲಾಖೆ, ಗದಗ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಧಾರವಾಡ ಕೆಸಿಸಿ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯ ಕೆಸಿಸಿ ಬ್ಯಾಂಕ್ ಶಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಡೆದ ರಾಜ್ಯ ಮಟ್ಟದ ವಿಶೇಷ ತರಬೇತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಉದ್ಯೋಗಿಗಳು ಕೆಲಸ ನಿರ್ವಹಿಸುವಾಗ ಸಹಕಾರಿ ಕಾನೂನು, ಆರ್ಬಿಐ ಮತ್ತು ನಬಾರ್ಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸೂಚಿಸಿದರು.
‘ಬ್ಯಾಂಕ್ ₹1,228 ಕೋಟಿ ಠೇವಣಿ ಹೊಂದಿದ್ದು, ₹1,617 ಕೋಟಿ ಸಾಲ ನೀಡಲಾಗಿದೆ. ಮಾರ್ಚ್ 2026ರ ಅಂತ್ಯದ ವೇಳೆಗೆ ಕನಿಷ್ಠ ₹20 ಕೋಟಿ ಲಾಭ ಹೊಂದುವ ಗುರಿ ಇಟ್ಟುಕೊಂಡಿದೆ’ ಎಂದು ತಿಳಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ‘ಮಾನವ ಸಂಪನ್ಮೂಲ ನೀತಿ, ಪಾರದರ್ಶಕ ನೇಮಕಾತಿ, ಸಿಬ್ಬಂದಿ ತರಬೇತಿ, ಕಾರ್ಯಕ್ಷಮತಾ ಮೌಲ್ಯಮಾಪನ ಶಿಸ್ತು ಹಾಗೂ ಸಿಬ್ಬಂದಿ ಕಲ್ಯಾಣ’ ಹಾಗೂ ‘ಸಮಯಕ್ಕೆ ಸರಿಯಾಗಿ ವಸೂಲಾತಿ, ಸಾಲಗಾರರೊಂದಿಗೆ ನಿರಂತರ ಸಂಪರ್ಕ ಹಾಗೂ ಅಗತ್ಯವಿದ್ದಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳುವ’ ಕುರಿತು ಮೈಸೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ನಿವೃತ್ತ ಪ್ರಾದೇಶಿಕ ವ್ಯವಸ್ಥಾಪಕ ಸಿದ್ದರಾಮೇಗೌಡ, ‘ಡಿಜಿಟಲ್ ಬ್ಯಾಂಕಿಂಗ್’ ಹಾಗೂ ‘ಡಿಸಿಸಿ ಬ್ಯಾಂಕ್ಗಳಲ್ಲಿ ಸೈಬರ್ ಸೆಕ್ಯುರಿಟಿ’ ವಿಷಯ ಕುರಿತು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ನ ನಿವೃತ್ತ ವ್ಯವಸ್ಥಾಪಕ ಎಸ್.ಜಿ.ಕುಲಕರ್ಣಿ ಉಪನ್ಯಾಸ ನೀಡಿದರು.
ಗದಗ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವೈ.ಎಫ್.ಪಾಟೀಲ, ಬಿ.ಬಿ.ನಾಯಕ, ಎಸ್.ಎಂ. ಚಿಕ್ಕಮಠ, ರಾಜು ಎಲ್. ಕೋಟಿ, ಮೃತ್ಯಂಜಯ ಹಿರೇಮಠ ಇದ್ದರು.
ಸಹಕಾರಿ ಸಂಸ್ಥೆಗಳು ತಮ್ಮ ಕಾರ್ಯತಂತ್ರಗಳು ಮತ್ತು ಕಾನೂನಾತ್ಮಕ ವಿಷಯಗಳನ್ನು ಅರಿತುಕೊಂಡು ಮರು ಮೌಲ್ಯಮಾಪನ ಮಾಡಿಕೊಳ್ಳಲು ಇದು ಉತ್ತಮ ಸಮಯಗೋವಿಂದಗೌಡ ವಿ. ಪಾಟೀಲ ಕೆಸಿಸಿ ಬ್ಯಾಂಕ್ನ ನಿರ್ದೇಶಕ
ಇಂದಿನ ವೇಗದ ಜಗತ್ತಿನಲ್ಲಿ ನಿರಂತರ ಕಲಿಕೆ ಅನಿವಾರ್ಯ. ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಿಕೊಂಡರೆ ಯಶಸ್ಸು ಸಾಧಿಸಬಹುದುಸಿ.ಎಂ.ಪಾಟೀಲ ಗದಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.