ಸಿದ್ಧರಾಮ ಸ್ವಾಮೀಜಿ
ಗದಗ: ‘ಮಸೀದಿ, ಮಂದಿರಗಳಿಗೆ ತೋಂಟದಾರ್ಯ ಮಠ ಜಾಗ ಕೊಟ್ಟಿದೆ. ಭಾವೈಕ್ಯತಾ ದಿನ ಆಚರಣೆ ಮಾಡಿದರೇ ತಪ್ಪೇನು’ ಎಂದು ತೋಂಟದಾರ್ಯ ಸಿದ್ದರಾಮ ಶ್ರೀಗಳು ಪ್ರಶ್ನಿಸಿದ್ದಾರೆ.
ಭಾವೈಕ್ಯತಾ ದಿನ ಆಚರಣೆ ವಿರೋಧಿಸಿ ದಿಂಗಾಲೇಶ್ವರ ಶ್ರೀಗಳು ಪತ್ರಿಕಾಗೋಷ್ಠಿ ನಡೆಸಿದ ಕಾರಣ ತೋಂಟದಾರ್ಯ ಮಠದಲ್ಲೂ ದಿಂಗಾಲೇಶ್ವರ ಶ್ರೀ ಹೇಳಿಕೆ ವಿರೋಧಿಸಿ ಸಿದ್ಧರಾಮ ಶ್ರೀಗಳು ಮಾತನಾಡಿದರು.
‘ತೋಂಟದಾರ್ಯ ಮಠದಲ್ಲಿ ಸಾಕಷ್ಟು ಸಾಮರಸ್ಯದ ಕೆಲಸ ಮಾಡಿದ್ದೇವೆ. ಜಾತ್ರಾ ಕಮಿಟಿಗೆ ಮುಸ್ಲಿಮರನ್ನು ಆಯ್ಕೆ ಮಾಡಿದ ಉದಾಹರಣೆ ಇದೆ. ಮಠದಲ್ಲಿ ಅನೇಕ ಮುಸ್ಲಿಂ ಭಕ್ತರಿದ್ದಾರೆ. ಲಿಂ. ಸಿದ್ಧಲಿಂಗ ಶ್ರೀಗಳು ಎಲ್ಲ ಸಮುದಾಯದ ಜತೆ ಭಾವೈಕ್ಯತೆಯಿಂದ ಇದ್ದರು. ಸಿದ್ಧಲಿಂಗ ಶ್ರೀಗಳ ಮೇಲೆ ಆರೋಪ ಸಲ್ಲ. ಮತ್ತೊಬ್ಬರನ್ನು ಟೀಕೆ ಮಾಡುವುದು ಸರಿಯಲ್ಲ. ನಮ್ಮ ಕಾಯಕ ನಮ್ಮ ಜತೆ ಇರಲಿ. ಸೌಹಾರ್ದತೆ, ಸಹೋದರತ್ವ ಬೇಕು. ಸಂವಿಧಾನದಲ್ಲೇ ಭಾವೈಕ್ಯತೆ ಸಂದೇಶವಿದೆ’ ಎಂದರು.
‘ಭಾವೈಕ್ಯತೆ ಎಂಬುವುದು ಒಬ್ಬ ವ್ಯಕ್ತಿಗೆ ಸೀಮಿತ ಆಗಿದ್ದಲ್ಲ. ಎಲ್ಲರೂ ಆಚರಿಸಬಹುದು. ದಿಂಗಾಲೇಶ್ವರ ಶ್ರೀಗಳು ಕರಾಳ ದಿನ ಆಚರಣೆ ಮಾಡಿದರೇ ಅದನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ನಮಗೆ ಸರ್ಕಾರ ರಕ್ಷಣೆ ನೀಡಬೇಕು. ಕರಾಳ ದಿನ ಆಚರಣೆ ತಪ್ಪಾದರೆ ಸರ್ಕಾರ ಕರಾಳ ದಿನ ಆಚರಣೆಯನ್ನು ನಿಷಿದ್ಧ ಮಾಡಬೇಕು ಅಥವಾ ಸರ್ಕಾರ ನಮಗೆ ನಿರ್ದೇಶನ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.
‘ವೀರೈಶವ ಲಿಂಗಾಯತ ಧರ್ಮವನ್ನು ಸಿದ್ಧಲಿಂಗ ಶ್ರೀಗಳು ಒಡೆದಿದ್ದಾರೆ ಎಂಬ ದಿಂಗಾಲೇಶ್ವರ ಶ್ರೀಗಳ ಆರೋಪಕ್ಕೆ ಪ್ರತಿಕ್ರಿಸಿದ ಅವರು, ‘ಹಿಂದೂ ಎಂಬುದು ಬದುಕುವ ಪದ್ಧತಿಯೇ ವಿನಹ ಧರ್ಮವಲ್ಲ. ಹಿಂದು ಧರ್ಮಕ್ಕೆ ಸಂಸ್ಥಾಪಕರೇ ಇಲ್ಲ. ಭಾರತದಲ್ಲಿ ಇರುವರೆಲ್ಲರೂ ಹಿಂದೂಗಳೇ ಎಂಬುದು ಅರಿತುಕೊಳ್ಳಬೇಕು. ವೀರಶೈವ ಎಂಬುದು ಲಿಂಗಾಯತದ ಒಂದು ಭಾಗ. 12ನೇ ಶತಮಾನದಲ್ಲೇ ಲಿಂಗಾಯತ ಧರ್ಮ ಇದೆ. ಅದನ್ನು ಒಡೆಯುವ ಪ್ರಮೇಯವೇ ಇಲ್ಲ. ಪ್ರತ್ಯೇಕ ಧರ್ಮ ಹೋರಾಟ ತಟಸ್ಥದ ಹಿಂದೆ ರಾಜಕಾರಣಿಗಳ ಹೊರಳಾಟವಿದೆ. ರಾಜಕಾರಣಿಗಳಿಗೆ ಮತಮುಖ್ಯ. ಸಿದ್ಧಾಂತವಲ್ಲ.ಈ ವಿಷಯ ಎಲ್ಲರಿಗೂ ಗೊತ್ತೇ ಇದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.