
ಗದಗ: ‘ಜಿಲ್ಲೆಯಲ್ಲಿ ಮಾನವ-ಚಿರತೆ ಸಂಘರ್ಷ ಪ್ರಸ್ತುತ ವ್ಯಾಪಕವಾಗಿಲ್ಲದಿದ್ದರೂ, ಮುಂಚೂಣಿ ಅರಣ್ಯ ಸಿಬ್ಬಂದಿಯ ಸಾಮರ್ಥ್ಯ ಬಲಪಡಿಸುವ ಮೂಲಕ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದು ಮುಖ್ಯವಾಗಿದೆ’ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹೇಳಿದರು.
ಅರಣ್ಯ ಇಲಾಖೆ, ಹೊಳಮತ್ತಿ ನೇಚರ್ ಫೌಂಡೇಶನ್ ಸಹಭಾಗಿತ್ವದಲ್ಲಿ ತಾಲ್ಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿ ನಡೆದ ಮಾನವ– ಚಿರತೆ ಸಂಘರ್ಷ ನಿರ್ವಹಣೆ ವಿಷಯ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಆವಾಸಸ್ಥಾನ ನಷ್ಟ, ನಗರ ಪ್ರದೇಶಗಳ ವಿಸ್ತರಣೆ ಮತ್ತು ಆಹಾರದ ಕೊರತೆಯಿಂದಾಗಿ ರಾಜ್ಯದಲ್ಲಿ ಮಾನವ-ಚಿರತೆ ಸಂಘರ್ಷ ಹೆಚ್ಚುತ್ತಿದೆ. ಕರ್ನಾಟಕದಲ್ಲಿ 2 ಲಕ್ಷ ಎಕರೆಗಳಿಗೂ ಹೆಚ್ಚು ಅರಣ್ಯ ಭೂಮಿ ಅತಿಕ್ರಮಣದಿಂದ ವನ್ಯಜೀವಿಗಳು ಆಹಾರ, ನೀರು ಮತ್ತು ಸ್ಥಳಕ್ಕಾಗಿ ಹೊರಬರುವುದು ಆಶ್ಚರ್ಯವೇನಿಲ್ಲ’ ಎಂದರು.
‘ರಾಜ್ಯದ ಉಳಿದ ಭಾಗಗಳಂತೆ ಉತ್ತರ ಕರ್ನಾಟಕದಲ್ಲೂ ಆವಾಸಸ್ಥಾನ ನಷ್ಟ ಮತ್ತು ಮಾನವ ಪ್ರದೇಶಗಳ ಬಳಿ ಚಿರತೆಗಳ ಉಪಸ್ಥಿತಿ ಹೆಚ್ಚುತ್ತಿದೆ. ಇದರಿಂದಾಗಿ ಬೀದಿನಾಯಿಗಳು ಮತ್ತು ಜಾನುವಾರುಗಳಂತಹ ಸುಲಭ ಬೇಟೆಯಿಂದ ದಾಳಿ, ಜಾನುವಾರುಗಳ ನಾಶ ಮತ್ತು ಮಾನವ ಗಾಯಗಳು, ಸಾವುಗಳಿಗೆ ಕಾರಣವಾಗುತ್ತಿದೆ. ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ, ಬದಲಾಗಿ ಅವು ಬೀದಿನಾಯಿ ಅಥವಾ ಜಾನುವಾರುಗಳನ್ನು ಹುಡುಕಿಕೊಂಡು ಬರುತ್ತವೆ. ಮಾನವರು ಚಿರತೆಯ ಬೇಟೆಯಲ್ಲ’ ಎಂದರು.
ಗದಗ ಡಿಸಿಎಫ್ ಸಂತೋಷ್ ಕುಮಾರ್, ಗದಗ ಮೃಗಾಲಯದ ಆರ್ಎಫ್ಒ ಸ್ನೇಹಾ ಕೊಪ್ಪಳ, ಆರ್ಎಫ್ಒಗಳಾದ ರಾಮಪ್ಪ ಪೂಜಾರ, ಮಂಜುನಾಥ ಮೇಗಲಮನಿ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ನಾಯಕತ್ವ ಮತ್ತು ಸಾಮರ್ಥ್ಯ ವೃದ್ಧಿಗೆ ಸಂಜಯ್ ಗುಬ್ಬಿ ಮತ್ತು ಅವರ ತಂಡದಿಂದ ಚಿರತೆ-ಮಾನವ ಸಂಘರ್ಷ ನಿರ್ವಹಣಾ ಕೌಶಲ ತರಬೇತಿ ನೀಡಲಾಗಿದೆವಸಂತ್ ರೆಡ್ಡಿ ಸಿಸಿಎಫ್ ಧಾರವಾಡ ವೃತ್ತ
ಎಲ್ಲಾ ಪರಿಸರಕ್ಕೂ ಹೊಂದಿಕೊಂಡು ಬದುಕುವ ಏಕೈಕಿ ಮಾಂಸಹಾರಿ ವನ್ಯಜೀವಿ ಚಿರತೆ. ಅರಣ್ಯ ಇಲಾಖೆಯು ಸಾರ್ವಜನಿಕರು ಮತ್ತು ರೈತರಿಗೆ ಜಾಗೃತಿ ಮೂಡಿಸುವುದರ ಮೂಲಕ ಮಾನವ- ವನ್ಯಜೀವಿ ಸಂಘರ್ಷಗಳನ್ನು ನಿಯಂತ್ರಿಸಬಹುದುಮಂಜುನಾಥ ಎಸ್. ನಾಯಕ ಜೀವವೈವಿಧ್ಯ ಸಂಶೋಧಕ
ಧಾರವಾಡ ವೃತ್ತದಲ್ಲಿ ಹೆಚ್ಚಿನ ಸಂಘರ್ಷವಿಲ್ಲ
‘ಚಿರತೆಗಳು ಈಗ ಎಲ್ಲೆಡೆ ಕಂಡುಬರುತ್ತವೆ. ಆದರೆ ಅದೃಷ್ಟವಶಾತ್ ಗದಗ ಧಾರವಾಡ ಮತ್ತು ಹಾವೇರಿ ಈ ಮೂರು ವಿಭಾಗಗಳಲ್ಲಿ ಹೆಚ್ಚಿನ ಸಂಘರ್ಷವಿಲ್ಲ. ಆದರೂ ನಮ್ಮ ಸಿಬ್ಬಂದಿ ಚಿರತೆ-ಮಾನವ ಸಂಘರ್ಷ ನಿಭಾಯಿಸುವ ಸಾರ್ವಜನಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು’ ಎಂದು ಧಾರವಾಡ ವೃತ್ತದ ಸಿಸಿಎಫ್ ವಸಂತ ರೆಡ್ಡಿ ತಿಳಿಸಿದ್ದಾರೆ. ‘ಧಾರವಾಡ ಮತ್ತು ಹುಬ್ಬಳ್ಳಿಯಲ್ಲೂ ಮಾನವ ವಾಸಸ್ಥಳದ ಬಳಿ ಚಿರತೆಗಳು ವಿರಳವಾಗಿ ಕಂಡುಬಂದಿವೆ. ಗದಗ ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಚಿರತೆಗಳನ್ನು ಸುರಕ್ಷಿತವಾಗಿ ಬೋನಿನಲ್ಲಿಟ್ಟು ಅವುಗಳ ವಾಸಸ್ಥಳಕ್ಕೆ ಬಿಡಲಾಗಿದೆ. ಧಾರವಾಡ ವೃತ್ತದಲ್ಲಿರುವ ಮೂರು ವಿಭಾಗಗಳಲ್ಲಿ ಚಿರತೆಗಳ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಥರ್ಮಲ್ ಡ್ರೋನ್ಗಳಿವೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.