ಮುಂಡರಗಿ: ‘ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಮಹಿಳೆಯರು ಜೀವನದಲ್ಲಿ ಮುಂದೆ ಬರಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ಪದ್ಮಾ ಗೋವಿಂದರಡ್ಡಿ ತಿಳಿಸಿದರು.
ಇಲ್ಲಿಯ ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ವ್ಯಾಪ್ತಿಯ ಎನ್.ಎಸ್.ಎಸ್. ಘಟಕ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ನಾಯಕತ್ವ ಶಿಬಿರ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಹಿಳೆಯರು ಉನ್ನತ ಪದವಿ ಹಾಗೂ ಉನ್ನತ ಶಿಕ್ಷಣ ಪಡೆದುಕೊಳ್ಳುವುದು ಕಷ್ಟವಾಗಿತ್ತು. ಇಂದಿನ ಸಮಾಜದಲ್ಲಿ ಪುರುಷರಂತೆ ಮಹಿಳೆಯರು ಕೂಡ ಎಲ್ಲ ರಂಗಗಳಲ್ಲಿ ಮುಂದುವರಿಯಬಹುದಾಗಿದೆ’ ಎಂದು ಹೇಳಿದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ತಿಮ್ಮಾನಾಯಕ ಕೆ.ಬಿ. ಮಾತನಾಡಿ, ‘ಮಹಿಳೆಯರು ಕುಟುಂಬ ನಿರ್ವಹಿಸಿದಂತೆ ಸಮಾಜವನ್ನು ಸುಲಭವಾಗಿ ನಿರ್ವಹಿಸಬಲ್ಲರು’ ಎಂದು ಅಭಿಪ್ರಾಯಪಟ್ಟರು.
ಹಿರಿಯ ಉಪನ್ಯಾಸಕಿ ಕಾವೇರಿ ಬೋಲಾ ಮಾತನಾಡಿ, ‘ಜೀವನದಲ್ಲಿ ನಿಶ್ವಿತ ಗುರಿಯಿಂದ ಸಾಧನೆ ಸಾಧ್ಯ. ಸಾಧನೆಗೆ ಪುರುಷ, ಮಹಿಳೆ ಎಂಬ ಬೇಧ ಭಾವವಿಲ್ಲ’ ಎಂದು ತಿಳಿಸಿದರು.
ಉಪನ್ಯಾಸಕಿ ಶ್ವೇತಾ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಯಮುನಾ ನಾಯ್ಕ್ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು. ಕಾಶೀನಾಥ ಬಿಳಿಮಗ್ಗದ ಮಾತನಾಡಿದರು. ಪ್ರಾಚಾರ್ಯೆ ಉಮಾ ಕೊಳ್ಳಿ, ಉಪನ್ಯಾಸಕ ಬಸವರಾಜ ಹೂಗಾರ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.