ಹಾಸನ: `ಐಟಿ, ಬಿಟಿ, ಬಿಟ್ಟು ಹಾಸನ ಜಿಲ್ಲೆಗೆ ಬೇರೆ ಉದ್ದಿಮೆಗಳನ್ನು ಆಕರ್ಷಿಸುವ ಕಾರ್ಯ ಮಾಡಬೇಕಾಗಿದೆ. ಆಹಾರ ಸಂಸ್ಕರಣೆ, ಸಿದ್ಧ ಉಡುಪು ಹಾಗೂ ಪ್ರವಾಸೋದ್ಯಮಗಳಿಗೆ ಈ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಹಾಸನವನ್ನು ಹೂಡಿಕೆದಾರರಿಗೆ ಪರಿಚಯಿಸುವ ಕಾರ್ಯ ಮಾಡಲಾಗುವುದು~ ಎಂದು ಜಿಲ್ಲಾಧಿಕಾರಿ ಕೆ.ಪಿ ಮೋಹನರಾಜ್ ತಿಳಿಸಿದರು.
ಮೈಸೂರಿನಲ್ಲಿ ಬರುವ ಮೇ 4ರಂದು ನಡೆಯಲಿರುವ ಮೈಸೂರು ವಲಯ ಉದ್ದಿಮೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಮಾವೇಶ (ಎಂ-ಝಿಮ್)ದ ಹಿನ್ನೆಲೆಯಲ್ಲಿ ಹಾಸನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.
ಹಾಸನದಲ್ಲಿ ಸಣ್ಣ ಉದ್ದಿಮೆಗಳು ಮಾತ್ರ ಬರಬೇಕಿಲ್ಲ. ಎಲ್ಲ ರೀತಿಯ ಉದ್ದಿಮೆಗಳಿಗೂ ಹಾಸನ ಇತರ ಜಿಲ್ಲೆಗಳಿಗಿಂತಲೂ ಪ್ರಶಸ್ತವಾಗಿದೆ. ಆದರೆ ಇಲ್ಲಿನ ಪರಿಸರವನ್ನು ಹಾಳುಮಾಡದಂಥ ಉದ್ದಿಮೆಗಳನ್ನು ಆಕರ್ಷಿಸಬೇಕಾಗಿದೆ. ವಿಮಾನ ನಿಲ್ದಾಣ ಇಲ್ಲ ಎನ್ನುವುದು ಉದ್ದಿಮೆಗಳು ಬಾರದಿರಲು ಕಾರಣವಲ್ಲ.
ಬೆಂಗಳೂರಿನ ಸಮೀಪದಲ್ಲೇ ಇರುವುದರಿಂದ ವಿಮಾನ ನಿಲ್ದಾಣದ ಕೊರತೆ ಅಷ್ಟೊಂದು ಕಾಡುವುದಿಲ್ಲ. ಬದಲಿಗೆ ಉದ್ದಿಮೆದಾರರನ್ನು ಆಕರ್ಷಿಸುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಶೀಘ್ರದಲ್ಲೇ ಒಂದು ದೊಡ್ಡ ಪ್ರಮಾಣದ ಸಭೆ ಆಯೋಜಿಸಿ ಮಾರ್ಗಸೂಚಿ ಸಿದ್ಧಪಡಿಸಲಾಗುವುದು~ ಎಂದರು.
ಎಂ-ಝಿಮ್ ಬಗ್ಗೆ ಮಾಹಿತಿ ನೀಡಿದ ಮೈಸೂರು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಸುಧಾಕರ ಶೆಟ್ಟಿ, `ಈ ಬಾರಿಯ ಸಮಾವೇಶದಲ್ಲಿ ಮೈಸೂರು ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿ ಸುಮಾರು 20ಸಾವಿರ ಕೋಟಿ ರೂಪಾಯಿಯ ಹೂಡಿಕೆ ಬರುವ ನಿರೀಕ್ಷೆ ಇದೆ. ಬರಿಯ ಗುಡಿ ಮತ್ತು ಸಣ್ಣ ಕೈಗಾರಿಕೆಗಳನ್ನು ಮಾತ್ರ ಆಕರ್ಷಿಸದೆ ಮಧ್ಯಮ ಗಾತ್ರದ ಉದ್ದಿಮೆಗಳನ್ನು ಸ್ಥಾಪಿಸುವವರಿಗೂ ಸೌಲಭ್ಯ ವಿಸ್ತರಿಸಲು ತೀರ್ಮಾನಿಸಲಾಗಿದೆ~ ಎಂದರು.
ಉದ್ದಿಮೆ ಸ್ಥಾಪಿಸಲು ಮುಂದೆಬರುವ ಯುವಕರು, ರೈತರಿಗೆ ಎಲ್ಲ ರೀತಿಯ ಸಹಾಯ ನೀಡುವುದೇ ಸಮಾವೇಶದ ಉದ್ದೇಶ. ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಜತೆಗೆ ಹೂಡಿಕೆ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ಹೂಡಿಕೆದಾರರಿಗೆ ಬ್ಯಾಂಕ್ ಸಾಲದಿಂದ ಆರಂಭಿಸಿ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗುವುದು. ಒಟ್ಟು ಐದು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಸಾಲ ನೀಡಲು ಮುಂದೆಬಂದಿವೆ.
ಮೇ. 4ರಂದು ಮುಖ್ಯಮಂತ್ರಿ ಸದಾನಂದಗೌಡ ಸಮಾವೇಶವನ್ನು ಉದ್ಘಾಟಿಸುವರು. ಹಲವು ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 14 ಮಂದಿ ಪರಿಣಿತರು, ಐಎಎಸ್ ಅಧಿಕಾರಿಗಳು ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಾರೆ. ಹೂಡಿಕೆದಾರರಿಗೆ ಇದು ಸುವರ್ಣಾವಕಾಶ ಎಂದರು.
ಹಾಸನ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ.ಹೆಚ್. ಮುಕುಂದ ಕಷ್ಣೇಗೌಡ, `ಹಾಸನದಲ್ಲಿ ಈಗಾಗಲೇ ವಿಶೇಷ ಆರ್ಥಿಕ ವಲಯಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಐದುನೂರು ಎಕರೆಗೂ ಹೆಚ್ಚು ಭೂಮಿ ಇರುವುದರಿಂದ ಹೂಡಿಕೆದಾರರಿಗೆ ಸಿದ್ಧವಾಗಿರುವ ಜಾಗ ಲಭಿಸುತ್ತದೆ.
ಇದಲ್ಲದೆ ಹಾಸನದ ಕೈಗಾರಿಕಾ ಪ್ರದೇಶದಲ್ಲಿ ಸ್ವಾಧೀನಪಡಿಸಿಕೊಂಡಿರುವ ಇನ್ನೂ 60ಎಕರೆ ಭೂಮಿ ಇದೆ. ಐಐಎಂ ಸ್ಥಾಪನೆಗಾಗಿ ಸಾವಿರಕ್ಕೂ ಹೆಚ್ಚು ಭೂಸ್ವಾಧೀನ ಮಾಡಲಾಗಿದ್ದು, ಅದನ್ನೂ ನಮಗೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದೇವೆ. ಜಿಲ್ಲೆಯಲ್ಲಿ ಹೂಡಿಕೆಗೆ ಮುಂದಾಗುವವರಿಗೆ ಭೂಮಿಯ ಕೊರತೆ ಬರಲಾರದು~ ಎಂದರು.
ಯೋಜನಾ ಸಮಿತಿ ಅಧ್ಯಕ್ಷ ಜಯಂತ್ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಎಂ-ಝಿಮ್ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಪೂರ್ವಭಾವಿ ಸಭೆಯನ್ನೂ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಸುಧಾಕರ ಎಸ್.ಶೆಟ್ಟಿ ಹಾಸನ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹಂಸರಾಜ್ ಪಿ.ಹೆಚ್. ಮುಕುಂದ ಕಷ್ಣೇಗೌಡಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.