ADVERTISEMENT

ಕೈಕೊಟ್ಟ ಮುಂಗಾರು: ನೆಲಕಚ್ಚಿದ ಬೆಳೆಗಳು

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 6:30 IST
Last Updated 10 ಜುಲೈ 2012, 6:30 IST

ಬಾಣಾವರ: ಕಳೆದ ದಶಕದಿಂದ ಬರಗಾಲದಿಂದ ತತ್ತರಿಸಿದ ಹೋಬಳಿಯ ರೈತರಿಗೆ ಮಳೆ ಈ ಬಾರಿಯು ಕೈಕೊಟ್ಟಿರುವುದರಿಂದ ಬಿತ್ತನೆಯಾಗಿದ್ದ ಬೆಳೆ ನೆಲ ಕಚ್ಚಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಪ್ರಾರಂಭದಲ್ಲಿ ಬಿದ್ದ ಉತ್ತಮ ಮಳೆಗೆ ಬಾಣಾವರ ಹೋಬಳಿಯಲ್ಲಿ ಅನೇಕ ರೈತರು ಖುಷಿಯಿಂದಲೇ ಮುಂಗಾರು ಬೆಳೆಗಳಾದ ಸೂರ್ಯಕಾಂತಿ, ಎಳ್ಳು, ಹೆಸರು, ಜೋಳ, ಉದ್ದು, ಹರಳುಬೆಳೆ ಬಿತ್ತನೆ ಮಾಡಿ ಉತ್ತಮ ಫಸಲಿನ ನೀರಿಕ್ಷೆಯಲ್ಲಿದ್ದರು.

ಆದರೆ ವರುಣನ ಮುನಿಸಿ ನಿಂದ ಸದ್ಯ ಬೇಸಿಗೆ ದಿನಗಳನ್ನು ನೆನಪಿಸುವ ಬಿಸಿಲಿನ ಪ್ರಕರತೆ ಕಾಣಿಸಿಕೊಂಡು ಹೋಬಳಿಯ ರೈತರನ್ನು ಚಿಂತೆಗೀಡು ಮಾಡಿದೆ. ಬಿತ್ತನೆ ಮಾಡಿದ ನಂತರ ಜೂನ್ ತಿಂಗಳಲ್ಲಿ ಮಳೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಬೆಳೆಗಳು ಸೊರಗುತ್ತಿವೆ.

ಒಂದು ವಾರದಿಂದ ಹೋಬಳಿಯಲ್ಲಿ ಬೀಳು ತ್ತಿರುವ ತುಂತುರು ಮಳೆಯಿಂದ ಬೆಳೆಗಳು ಜೀವ ತುಂಬಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಮಳೆಗಾಗಿ ನಿತ್ಯ ರೈತರು ದೇವರನ್ನು ಪ್ರಾರ್ಥಿಸು ವಂತಾಗಿದೆ. ಈ ಭಾಗದ ರೈತರು ಪ್ರಧಾನವಾಗಿ ಮಳೆಯನ್ನೇ ನಂಬಿ ವ್ಯವಸಾಯ ಮಾಡುವುದರಿಂದ ವರುಣನ ಮುನಿಸು ಮುಂಗಾರು ಬೆಳೆ ಇಳುವರಿ ಮೇಲೆ ಬಾರಿ ಪರಿಣಾಮ ಬೀರಲಿದೆ. ಬಿಸಿಲಿನ ಜಳಕ್ಕೆ ಬೆಳೆದು ನಿಂತಿದ ಅಲ್ಪ-ಸ್ವಲ್ಪ ಬೆಳೆಗಳು ಬಾಡುತ್ತಿವೆ.

ಕಳೆದ ವರ್ಷ ಸರಿಯಾಗಿ ಮಳೆಯಾಗದೆ ಇರುವುದರಿಂದ ಕೆರೆ ಕಟ್ಟೆಗಳೆಲ್ಲ ತುಂಬದೆ ಅಂತರ್ಜಲದ ಮಟ್ಟ ಕುಸಿದು ಕೊಳವೆ ಬಾವಿ ಗಳಲ್ಲೂ ನೀರು ಕಡಿಮೆಯಾಗಿದೆ. ಈ ವರ್ಷದ ಮಂಗಾರಿನ ಮೇಲೆ ಭಾರೀ ನಿರೀಕ್ಷೆಯಿಟ್ಟು ಕೊಂಡಿದ್ದ ಕೃಷಿಕರು ಇದ್ದಬದ್ದ ಹಣ ಖರ್ಚು ಮಾಡಿ ಭೂಮಿ ಹಸನು ಕಾರ್ಯದಲ್ಲಿ ತೊಡಗಿದ್ದರು. ಬೆಳೆ ಯಲ್ಲಿ ಕಳೆ ತೆಗೆಯಲು, ಕುಂಟೆ ಹೊಡೆಯುವುದು ಸೇರಿದಂತೆ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದರು.

ಆದರೆ, ಮಳೆ ಸರಿಯಾಗಿ ಬಾರದೆ ಇರುವುದರಿಂದ ರೈತರು ತಿವ್ರ ಕಂಗಾಲಾಗಿದ್ದಾರೆ.
ಹೋಬಳಿಯ ಬಹುತೇಕ ಕೆರೆ ಕಟ್ಟೆಗಳ ಒಡಲುಗಳು ನೀರಿಲ್ಲದೆ ಬರಿದಾಗಿದೆ. ಹೋಬಳಿಯದ್ಯಾಂತ ಮಳೆಯ ಅಭಾವದಿಂದ ರೈತರು ಕೃಷಿ ಬಿಟ್ಟು ಪಟ್ಟಣಗಳತ್ತ ಮುಖ ಮಾಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಕುಡಿಯುವ ನೀರಿಗೂ ಬರ ಬರಬಹುದು ಎಂಬ ಆತಂಕ ಎಲ್ಲರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.