ಸಕಲೇಶಪುರ: ಮಹಾತ್ಮ ಗಾಂಧಿ ಅವರ ಸ್ವಚ್ಛ ಭಾರತದ ಕನಸು ನನಸು ಮಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನದು ಎಂದು ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಹೇಳಿದರು.
ಗಾಂಧಿ ಜಯಂತಿ ಅಂಗವಾಗಿ ಆಕ್ಸ್ ಫರ್ಡ್ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಇಲ್ಲಿಯ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣವನ್ನು ಸ್ವಚ್ಛಗೊಳಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಸ್ವಚ್ಛತೆ ಎಂಬುದು ಊಟ, ತಿಂಡಿ, ನಿದ್ರೆಯಂತೆ ದೈನಂದಿನ ಕೆಲಸಗಳಲ್ಲಿ ಒಂದಾಗಬೇಕು. ಮನೆಯೊಳಗೆ ಕಸ ಬಿದ್ದಿದ್ದರೂ, ಅಮ್ಮನೇ ಗುಡಿಸಿ ಸ್ವಚ್ಛಗೊಳಿಸಬೇಕು ಎಂಬ ಮನೋಭಾವ ಬಿಡಬೇಕು. ನಡೆದಾಡುವಾಗ ಕಣ್ಣಿಗೆ ಕಾಣಿಸುವ ಕಸವನ್ನು ಎತ್ತಿ ಕಸ ಸಂಗ್ರಹದ ಡಬ್ಬಿಯೊಳಗೆ ಹಾಕಬೇಕು. ಈ ರೀತಿ ಜಾಗೃತಿ ಮೂಡಿದಾಗ ಮಾತ್ರ ಪರಿಸರ ಸ್ವಚ್ಛಗೊಳಿಸಲು ಸಾಧ್ಯ ಎಂದರು.
ಆಕ್ಸ್ ಫರ್ಡ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ದಿವ್ಯಾ, ಡಾ.ಕಿಣಿ, ಡಾ.ಹೇಮಂತ್, ಶುಶ್ರೂಷಕರು ಹಾಗೂ ಸಿಬ್ಬಂದಿ ಸಹ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಅಣ್ಣಪ್ಪಸ್ವಾಮಿ ಹಾಗೂ ಎಲ್ಲ ಶಿಕ್ಷಕರೂ ಇದ್ದರು. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಇಡೀ ಆಸ್ಪತ್ರೆ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಿತ್ತು, ಕಸವನ್ನೆಲ್ಲ ಗುಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.