ADVERTISEMENT

ಮಳೆ, ಗಾಳಿ ಆರ್ಭಟ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 7:40 IST
Last Updated 5 ಏಪ್ರಿಲ್ 2013, 7:40 IST

ಹಾಸನ: ತಾಲ್ಲೂಕಿನ ಹಲವು ಭಾಗಗಳಲ್ಲಿ ಬುಧವಾರ ರಾತ್ರಿ ಉತ್ತಮ ಮಳೆಯಾಗಿದೆ. ರಾತ್ರಿ 8 ಗಂಟೆ ವೇಳೆಗೆ ಸುಮಾರು 15 ನಿಮಿಷಗಳ ಕಾಲ ಒಂದು ಸುತ್ತಿನ ಮಳೆಯಾದರೆ, ನಂತರ ಹತ್ತು ಗಂಟೆ ಯಿಂದ ಸುಮಾರು ಒಂದು ಗಂಟೆ ಕಾಲ ಉತ್ತಮ ಮಳೆಯಾಗಿದೆ.
8 ಗಂಟೆಗೆ ಮಳೆಯಾಗುವುದಕ್ಕೂ ಮೊದಲು ಗಾಳಿ ಬೀಸಿದ್ದರಿಂದ ನಗರದ ಕೆಲವು ಭಾಗಗಳಲ್ಲಿ ಸಣ್ಣ ಪುಟ್ಟ ಹಾನಿಯಾಗಿದ್ದರೆ, ಸಮೀಪದ ಹರಳಹಳ್ಳಿಯಲ್ಲಿ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ.

ಇಲ್ಲಿ ಗಾಳಿಯ ಆರ್ಭಟಕ್ಕೆ ಹಲವು ತೆಂಗಿನ ಮರಗಳು ಉರುಳಿವೆ. ರಸ್ತೆ ಪಕ್ಕದ ಅನೇಕ ಮರಗಳು ಸಹ ಧರಾಶಾಯಿಯಾಗಿವೆ. ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬ ಗಳು ನೆಲಕ್ಕುರುಳಿವೆ. ಇದ ರಿಂದಾಗಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ.

ಕೆಲವು ಕಳೆಯ ಮನೆಗಳ ಹಂಚುಗಳು ಹಾರಿ ಹೋಗಿದ್ದರೆ, ತೆಂಗಿನ ಮರ ಬಿದ್ದು ಮನೆಯೊಂದಕ್ಕೆ ಸ್ವಲ್ಪ ಹಾನಿ ಉಂಟಾಗಿದೆ. ಗಾಳಿಯ ಜತೆಗೆ ಗುಡುಗು ಮಿಂಚುಗಳ ಆರ್ಭ ಟವೂ ಜೋರಾಗಿತ್ತು.

ಮೊದಲ ಸುತ್ತಿನಲ್ಲಿ ಮಳೆ ಇಷ್ಟು ಅನಾಹುತ ಮಾಡಿ ಹೋದರೆ ರಾತ್ರಿ ಹತ್ತು ಗಂಟೆಗೆ ಮತ್ತೆ ಗುಡುಗು-ಸಿಡಿಲುಗಳು ಮೊಳಗಿದವು. ಆದರೆ ಆಗ ಗಾಳಿಯ ಪ್ರತಾಪ ಇಲ್ಲದೆಯೇ ಸುಮಾರು ಒಂದು ಗಂಟೆ ಕಾಲ ಹದವಾದ ಮಳೆಯಾಯಿತು.

ಹಾಸನ ಮಾತ್ರವಲ್ಲದೆ ಆಲೂರು, ಬೇಲೂರು, ಅರಸೀಕೆರೆ ತಾಲ್ಲೂಕಿನ ಕೆಲವು ಭಾಗಗಳಲ್ಲೂ ಬುಧವಾರ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.