ADVERTISEMENT

ಸಾರ್ವಜನಿಕರಿಂದ ಥಳಿತ: ಪ್ರೇಮಿ ಆತ್ಮಹತ್ಯೆ

ಪ್ರೇಮ ಪ್ರಕರಣಕ್ಕೆ ತಿರುವು * ಪೋಷಕರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 10:35 IST
Last Updated 11 ಸೆಪ್ಟೆಂಬರ್ 2013, 10:35 IST

ಹಿರೀಸಾವೆ: ಪ್ರೇಮ ಪ್ರಕರಣದಲ್ಲಿ ಯುವತಿಯ ಪೋಷಕರು ಮತ್ತು ಸಾರ್ವಜನಿಕರಿಂದ ಥಳಿತಕ್ಕೆ ಒಳಗಾದ ಆಟ ಚಾಲಕ ಚಂದನ್‌  ಮನನೊಂದು ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.

ಘಟನೆ ವಿವರ: ಈತ ಪಕ್ಕದ ಗ್ರಾಮವಾದ ಬಿಂಡಗನವಿಲೆ ಹೋಬಳಿಯ ಹೊನ್ನದೇವಿಹಳ್ಳಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಅವಳನ್ನು ಅಪಹರಣ ಮಾಡಿ, ಮದುವೆ ಮಾಡಿಕೊಳ್ಳುವುದಾಗಿ ಈತ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ. ಈ ವಿಷಯ ತಿಳಿದ ಯುವತಿಯ ಪೋಷಕರು ಸೆಪ್ಟಂಬರ್ 6ರಂದು ಪಟ್ಟಣಕ್ಕೆ ಆಗಮಿಸಿ, ಶ್ರೀಕಂಠಯ ವೃತ್ತದಲ್ಲಿ ಚಂದನ್‌ನನ್ನು ಕಂಬಕ್ಕೆ ಕಟ್ಟಿ, ಬಟ್ಟೆಯನ್ನು ಬಿಚ್ಚಿ, ಥಳಿಸಿದ್ದರು. ಗಾಯಗೊಂಡಿದ್ದ ಚಂದನ್‌ನ್ನು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಈ ಬಗ್ಗೆ ಎರಡು ಗ್ರಾಮಸ್ಥರು ಸೇರಿ ನ್ಯಾಯ ಪಂಚಾಯಿತಿ ಸಹ ಮಾಡಿದ್ದರು.

ಯುವತಿಯ ತಂದೆ ನಾಗಣ್ಣ, ತಾಯಿ ಅನುಸೂಯ, ಸಂಬಂಧಿಕರಾದ ದೇವರಾಜು, ಸುರೇಶ್ ಮತ್ತಿತರರು ನನ್ನ ತಮ್ಮನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿ, ಅಪಮಾನ ಮಾಡಿದ್ದರು ಹಾಗೂ ಯುವತಿಯು ಮಾನಸಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಅಣ್ಣ ಚೇತನ್ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ. ಹಿರೀಸಾವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆತ್ಮಹತ್ಯೆಯ ವಿಷಯ ತಿಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.