ಹಾಸನ: ಜಿಲ್ಲೆಯಲ್ಲಿ ಭಾನುವಾರ 35 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 1057. ಆ ಮೂಲಕ ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚುತ್ತಿರುವುದು ಜನರ ಆತಂಕವನ್ನು ಕೊಂಚ ತಗ್ಗಿಸಿದೆ.
ಜಿಲ್ಲೆಯಲ್ಲಿ ಹೊಸದಾಗಿ 142 ಕೋವಿಡ್ ಪ್ರಕರಣ ದಾಖಲಾಗಿದೆ. ಇಬ್ಬರು ಸೋಂಕಿತರ ಸಾವಿನೊಂದಿಗೆ ಒಟ್ಟಾರೆ ಮೃತರ ಸಂಖ್ಯೆ 65. 16 ಜನ ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕದಲ್ಲಿದ್ದಾರೆ. 1295 ಸಕ್ರಿಯ ಪ್ರಕರಣಗಳಿವೆ. ಈವರೆಗಿನ ಸೋಂಕಿತರ ಸಂಖ್ಯೆ 2417.
ಉಸಿರಾಟದ ಸಮಸ್ಯೆಯಿಂದ ಹೊಳೆನರಸೀಪುರ ತಾಲ್ಲೂಕಿನ 77 ವರ್ಷ ಮಹಿಳೆ ಹಾಗೂ ಹಾಸನ ತಾಲ್ಲೂಕಿನ 31 ವರ್ಷದ ಯುವಕ ಹಿಮ್ಸ್ಗೆ ದಾಖಲಾಗಿದ್ದರು. ಇಬ್ಬರಿಗೂ ಕೋವಿಡ್ ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಸರ್ಕಾರದ ನಿಯಮದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ, ಬೆಂಗಳೂರು, ಮೈಸೂರು, ಆಂದ್ರಪ್ರದೇಶ, ಕತಾರ್ ಪ್ರಯಾಣ ಹಿನ್ನೆಲೆ, ಶೀತ ಜ್ವರ ಮಾದರಿ ಅನಾರೋಗ್ಯ, ಉಸಿರಾಟದ ತೊಂದರೆ ಇರುವವರಿಗೆ ಸೋಂಕು ತಗುಲಿದೆ. ಪೊಲೀಸ್ ಕಾನ್ಸ್ಟೆಬಲ್, ಆರೋಗ್ಯ ಕೇಂದ್ರದ ಸಹಾಯಕರು ಹಾಗೂ ಹಿಮತ್ ಸಿಂಗ್ ಕಾ ಕಾರ್ಖಾನೆಯ ಕಾರ್ಮಿಕರಿಗೆ ಪಾಸಿಟಿವ್ ಬಂದಿದೆ.
ಹೊಸದಾಗಿ ಅರಕಲಗೂಡು 23, ಚನ್ನರಾಯಪಟ್ಟಣ 29, ಅರಸೀಕೆರೆ 12, ಹಾಸನ 48, ಹೊಳೆನರಸೀಪುರ 22, ಸಕಲೇಶಪುರ 2, ಬೇಲೂರು 1, ಆಲೂರು 5 ಮಂದಿಗೆ ಸೋಂಕು ದೃಢಪಟ್ಟಿದೆ.
‘ಸರ್ಕಾರದ ಬಿಡುಗುಡೆ ಮಾಡಿರುವ ಆರೋಗ್ಯ ಸೇತು ಆ್ಯಪ್ ಅನ್ನು ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.
ಇದರಿಂದ ಕಾಲಕಾಲಕ್ಕೆ ಮಾಹಿತಿ ದೊರೆಯಲಿದೆ. ಚಳಿ, ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಇದ್ದರೆ ತಕ್ಷಣ ಆರೋಗ್ಯ ಕಾರ್ಯಕರ್ತೆಯರಿಗೆ ಮಾಹಿತಿ ನೀಡಬೇಕು. ಅವರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲು
ಸಹಕಾರಿಯಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.