ADVERTISEMENT

ಗ್ರಾನೈಟ್ ಉದ್ಯಮಿ ಮನೆಯಲ್ಲಿ 2 ಕೆ.ಜಿ ಚಿನ್ನಾಭರಣ, ₹ 24 ಲಕ್ಷ ನಗದು ಕಳವು

ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚನೆ: ಐಜಿಪಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 16:00 IST
Last Updated 8 ಸೆಪ್ಟೆಂಬರ್ 2021, 16:00 IST
 ಹಾಸನದ ವಿಶ್ವೇಶ್ವರಯ್ಯ ಬಡಾವಣೆಯ ಗ್ರಾನೈಟ್ ಉದ್ಯಮಿ ಟಿ.ಎನ್‌.ರಘು ಮನೆಗೆ ದಕ್ಷಿಣ ವಲಯ ಐಜಿಪಿ ಪ್ರವೀಣ್‌ ಕುಮಾರ್ ಮಧುಕರ್‌, ಎಸ್‌ಪಿ ಆರ್‌.ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.
 ಹಾಸನದ ವಿಶ್ವೇಶ್ವರಯ್ಯ ಬಡಾವಣೆಯ ಗ್ರಾನೈಟ್ ಉದ್ಯಮಿ ಟಿ.ಎನ್‌.ರಘು ಮನೆಗೆ ದಕ್ಷಿಣ ವಲಯ ಐಜಿಪಿ ಪ್ರವೀಣ್‌ ಕುಮಾರ್ ಮಧುಕರ್‌, ಎಸ್‌ಪಿ ಆರ್‌.ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.   

ಹಾಸನ: ನಗರದ ವಿಶ್ವೇಶ್ವರಯ್ಯ ಬಡಾವಣೆಯ ಗ್ರಾನೈಟ್ ಉದ್ಯಮಿ ಟಿ.ಎನ್.ರಘು ಅವರ ಮನೆಯಲ್ಲಿ
ಮಂಗಳವಾರ ಎರಡು ಕೆ.ಜಿ. ಚಿನ್ನಾಭರಣ ಹಾಗೂ ₹24 ಲಕ್ಷ ನಗದು ಕಳ್ಳತನವಾಗಿದೆ.

ಕೃತ್ಯ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ರಘು ಅವರು ಮಗನನ್ನು ಟ್ಯೂಶನ್‌ಗೆಂದು ಕರೆದುಕೊಂಡು ಹೋಗಿದ್ದರು.ಪತ್ನಿ ಹಾಗೂ ಅತ್ತೆ ಸಹ ಸಂಬಂಧಿಕರ ಮನೆಗೆಂದು ಹೊರತೆರಳಿದ್ದರು. ಹೀಗಾಗಿ ರಘು ಮನೆಗೆ ಬೀಗ ಹಾಕಿ ತೆರಳಿದ್ದರು. ಸಂಜೆ 7.45ಕ್ಕೆ ಮನೆ ಬಳಿಗೆ ಆಗಮಿಸಿದ ರಘುಅವರ ಭಾವ ಮೈದುನ ವರದರಾಜು ಎಂಬುವರು, ಮನೆಯ ಬಾಗಿಲು ತೆರೆದಿರುವುದನ್ನು ಕಂಡು ರಘು ಅವರಿಗೆಕರೆ ಮಾಡಿ ತಿಳಿಸಿದ್ದಾರೆ.

ಬಂದು ನೋಡಿದಾಗ ಆಯುಧದಿಂದ ಮುಂಬಾಗಿಲು ಮೀಟಿ ಮನೆಯ ಒಳಗಡೆಪ್ರವೇಶಿಸಿ, ಮೂರು ಕೊಠಡಿಗಳಲ್ಲಿದ್ದ ಲಾಕರ್ ಮುರಿದು ₹ 24 ಲಕ್ಷ ನಗದು ಸೇರಿ ₹1.28 ಕೋಟಿಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ರಾತ್ರಿ ಪೊಲೀಸರಿಗೆ ದೂರು ನೀಡಲಾಗಿದೆ.

ADVERTISEMENT

ಮನೆಯಲ್ಲಿ ಮದುವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಒಡವೆಗಳನ್ನು ಬ್ಯಾಂಕ್‌ ಲಾಕರ್‌ನಿಂದ ಒಡವೆಗಳನ್ನು ಮನೆಗೆ ತಂದಿದ್ದರುಎನ್ನಲಾಗಿದೆ. ಮನೆ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ. ಕಳ್ಳರುಮನೆಯ ಒಳನುಗ್ಗಿದಾಗ ಸದ್ದಾಗಿದೆ.
ಆದರೆ ಹಬ್ಬದ ಹಿನ್ನೆಲೆಯಲ್ಲಿ ಮನೆಯವರು ಸಿದ್ಧತೆಯಲ್ಲಿ ತೊಡಗಿರಬಹುದು ಎಂದು ನೆರೆ ಹೊರೆಯವರು ಮತ್ತು
ಅಂಗಡಿ ವ್ಯಾಪಾರಿ ಸುಮ್ಮನಾಗಿದ್ದಾರೆ.

ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ದಕ್ಷಿಣ ವಲಯ ಐಜಿಪಿ ಪ್ರವೀಣ್ ಪವಾರ್ ಮಧುಕರ್, ಎಫ್‌ಎಸ್‌ಎಲ್ ತಂಡ ಮತ್ತು ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಸ್ಯಾಂಪಲ್ ಸಂಗ್ರಹ ಮಾಡಿದೆ. ಹಾಸನ ಎಸ್ಪಿ ಆರ್.ಶ್ರೀನಿವಾಸ್‌ಗೌಡ ನೇತೃತ್ವದಲ್ಲಿ ನಾಲ್ಕು ತಂಡ ರಚನೆ ಮಾಡಲಾಗಿದೆ. ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಾರ್ಯಾಚರಣೆ ಶುರು ಮಾಡಿದ್ದೇವೆ ಎಂದರು.

ಜಿಲ್ಲೆಯಲ್ಲಿ ಸುಮಾರು 1 ಸಾವಿರ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ ಇದು ಕಡಿಮೆ. ಹೆಚ್ಚು ಹೆಚ್ಚು
ಕ್ಯಾಮೆರಾ ಅಳವಡಿಸಿದ್ದರೆ ಪತ್ತೆಗೆ ಅನುಕೂಲವಾಗಲಿದೆ. ಪೊಲೀಸರು ಹಳ್ಳಿ ಹಾಗೂ ಎಲ್ಲಾ ವಾರ್ಡ್‌ಗಳಿಗೆ
ತಲುಪಲು ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕೆ ಜನರಿಂದಲೂ ಸಹಕಾರ ಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.