ಅರಸೀಕೆರೆ: ಹೌಸಿಂಗ್ ಫಾರ್ ಆಲ್ ಯೋಜನೆಯಡಿ 1,180 ಮನೆಗಳು ನಿರ್ಮಾಣ ಆಗಲಿದ್ದು, ಮೊದಲ ಹಂತದಲ್ಲಿ 300 ಮನೆಗಳು ಮಾರ್ಚ್ ಅಂತ್ಯದೊಳಗೆ ಪೂರ್ಣವಾಗಲಿವೆ. ಫಲಾನುಭವಿಗಳು ತಕ್ಷಣ ಕೇವಲ ₹1 ಲಕ್ಷ ವಂತಿಗೆ ನೀಡಿ ಮನೆಯ ಪಡೆಯಬೇಕು ಎಂದು ಶಾಸಕ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಇಲ್ಲಿನ ಸುಬ್ರಹ್ಮಣ್ಯನಗರ ಬಡಾವಣೆ ಸಮೀಪದಲ್ಲಿ ಹೌಸಿಂಗ್ ಫಾರ್ ಹಾಲ್ ಯೋಜನೆಯ ಕನಸಿನ ಮನೆ ಕಾಮಗಾರಿ ವಿಳಂಬವಾಗಿರುವುದನ್ನು ಬುಧವಾರ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ಬಡವರು, ನಿರ್ಗತಿಕರು, ಮಧ್ಯಮ ವರ್ಗದವರಿಗೆ ಅನೂಕೂಲವಾಗಲಿದೆ. ಫಲಾನುಭವಿಗಳು ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ನಗರಸಭಾ ಸದಸ್ಯರು ಗಮನಹರಿಸಬೇಕು. ಈ ಯೋಜನೆ ಸಾಕಾರಗೊಳ್ಳಲು ನಗರಸಭೆ ತ್ಯಾಗ ಹಾಗೂ ಸಹಕಾರದಿಂದ ಸಾಧ್ಯವಾಗಿದೆ ಎಂದರು.
ಗೃಹಮಂಡಳಿ ವತಿಯಿಂದ ನಗರದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ನಿವೇಶನ ಹಾಗೂ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೆ. ಆದರೆ ಕೆಲವರು ಸುಳ್ಳು ಮಾಹಿತಿ ನೀಡಿ ಅಡ್ಡಿ ಮಾಡಿದ್ದಾರೆ. ಮನೆಗಳನ್ನು ಆಕಾಶದಲ್ಲಿ ನಿರ್ಮಾಣ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಜಮೀನುಗಳಲ್ಲಿ ಶೇ 60 ಭಾಗ ನಿವೇಶನ ಮಾಲೀಕರದ್ದಾಗಿರುತ್ತದೆ. ಶೇ 40 ಭಾಗ ಇತರೆ ಮೂಲಭೂತ ಸೌಕರ್ಯಗಳಿಗೆ ವಿನಿಯೋಗವಾಗುತ್ತದೆ ಎಂದರು.
ಯಾವುದೇ ತಾರತಮ್ಯ ಮಾಡದೇ ಪಕ್ಷತೀತಾವಾಗಿ ಗೃಹಮಂಡಳಿ ನಿವೇಶನಗಳು ಅಥವಾ ಮನೆಗಳಿಗೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದು ಜನರಿಗೆ ಬಿಟ್ಟಿದ್ದು. ಯಾರಿಗೂ ಬಲವಂತ ಮಾಡುವುದಿಲ್ಲ ಎಂದರು.
ಯಾದಾಪುರಕ್ಕೆ ಅಪಾರ ಸಂಖ್ಯೆಯ ಭಕ್ತರು ಬರುತ್ತಿದ್ದು, ರಸ್ತೆಗಳ ವಿಸ್ತರಣೆ ಮಾಡಲಾಗುವುದು. ರೈತರು ಔದಾರ್ಯದಿಂದ ಸ್ವಲ್ಪ ಜಮೀನು ಬಿಟ್ಟುಕೊಟ್ಟರೆ, ವಿಭಜಕ ಅಳವಡಿಸಲಾಗುವುದು. ಈ ಸಂಬಂಧ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ₹58 ಸಾವಿರ ಕೋಟಿ ಮೀಸಲು ಇಟ್ಟಿದ್ದರಿಂದ ಗುತ್ತಿಗೆದಾರರಿಗೆ ಸ್ವಲ್ಪ ಅಡೆ ತಡೆಯಾಗಿರಬಹುದು. ಆದರೆ ಯಾವುದೇ ಕಾಮಗಾರಿ, ಅಭಿವೃದ್ದಿ ಕೆಲಸಗಳು, ಸರ್ಕಾರದ ಇನ್ನಿತರ ಹಲವು ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಈ ಹಿಂದಿನ ಸರ್ಕಾರದ ₹48 ಸಾವಿರ ಕೋಟಿ ಬಾಕಿಯನ್ನು ನಮ್ಮ ಸರ್ಕಾರ ಬಜೆಟ್ನಲ್ಲಿ ಸೇರಿಸಿಕೊಂಡಿದೆ ಎಂದರು.
ಆರೋಗ್ಯ ದೃಷ್ಟಿಯಿಂದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 1 ತಿಂಗಳಿನೊಳಗೆ ಸಿಟಿ ಸ್ಕ್ಯಾನಿಂಗ್ ಸೆಂಟರ್ ಹಾಗೂ ಕೆಲವು ದಿನಗಳಲ್ಲಿ ಎಂಆರ್ಐ ಸ್ಕ್ಯಾನ್ ಕೂಡ ತೆಗೆಯಲಾಗುವುದು. ₹33 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್ ಮೇಸ್ತ್ರೀ, ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ನಗರಸಭೆಯ ಸದಸ್ಯರು, ಅಧಿಕಾರಿಗಳು ಇದ್ದರು.
ಸರ್ಕಾರದ ಎಲ್ಲರಿಗೂ ಸೂರು ಯೋಜನೆ ಅಡಿ 1180 ಮನೆಗಳ ನಿರ್ಮಾಣ ಕನಸಿನ ಯೋಜನೆ ಆಗಿತ್ತು. ಇದರಲ್ಲಿ ಕೇಂದ್ರ ಸರ್ಕಾರ ₹1.50 ಲಕ್ಷ ರಾಜ್ಯ ಸರ್ಕಾರ ₹1.50 ಲಕ್ಷ ಹಾಗೂ ಫಲಾನುಭವಿಗಳು ₹2 ಲಕ್ಷ ನೀಡಬೇಕಾಗಿತ್ತು. ಈ ಕ್ರಮಕ್ಕೆ ಫಲಾನುಭವಿಗಳ ನಿರಾಸಕ್ತಿ ಉಂಟಾಗಿತ್ತು. ಹೀಗಾಗಿ ಈಗ ಸರ್ಕಾರವೇ ಫಲಾನುಭವಿಗಳ ₹1 ಲಕ್ಷ ನೀಡಲು ಹಾಗೂ ಇನ್ನೂ ₹ 1ಲಕ್ಷಕ್ಕೆ ಬ್ಯಾಂಕ್ನಲ್ಲಿ ಶೇ 5 ರ ದರದಲ್ಲಿ ಸಾಲದ ವ್ಯವಸ್ಥೆ ಮಾಡಿದೆ ಎಂದು ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ಫಲಾನುಭವಿಗಳು ಸಂಬಂಧಪಟ್ಟ ನಗರಸಭೆಯ ಸದಸ್ಯರನ್ನು ಸಂಪರ್ಕಿಸಿ ತಮ್ಮ ಕನಸಿನ ಸ್ವಂತ ಸೂರನ್ನು ಪಡೆಯಬೇಕು. 2 ನೇ ಹಂತದಲ್ಲಿ 800 ಮನೆಗಳು ನಿರ್ಮಾಣ ಕಾಮಗಾರಿಯೂ ಪ್ರಾರಂಭವಾಗಿದ್ದು ಸುಸಜ್ಜಿತ ರಸ್ತೆ ಯುಜಿಡಿ ವ್ಯವಸ್ಥೆ ನೀರಿನ ಟ್ಯಾಂಕರ್ ಹಾಗೂ ಸುಂದರ ವಾತಾವರಣದಲ್ಲಿ ಉತ್ತಮ ಮನೆ ನಿರ್ಮಾಣ ಆಗಲಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.