ADVERTISEMENT

ಮೀನು ಹಿಡಿಯಲು ಹೋಗಿದ್ದಾಗ ಗುಂಡು ತಗುಲಿ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 7:02 IST
Last Updated 10 ಜನವರಿ 2023, 7:02 IST
ನವೀನ್ ಉರ್ಫ್‌ ಪಚ್ಚಿ
ನವೀನ್ ಉರ್ಫ್‌ ಪಚ್ಚಿ   

ಹಾಸ‌ನ: ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿ ತಂಬಲಗೇರಿಯಲ್ಲಿ ಸೋಮವಾರ ರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಅಪರಿಚಿತರು ಹಾರಿಸಿದ ಗುಂಡಿಗೆ ಯುವಕ ಮೃತಪಟ್ಟಿದ್ದಾರೆ.

ತಂಬಲಗೇರಿಯ ನವೀನ್ ಉರ್ಫ್‌ ಪಚ್ಚಿ (39) ಮೃತಪಟ್ಟ ಯುವಕ. ಒಟ್ಟು ನಾಲ್ವರು ಸ್ನೇಹಿತರ ಜೊತೆಗೂಡಿ ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಇದೇ ವೇಳೆ ಅಪರಿಚಿತರು ಹಾರಿಸಿದ ಗುಂಡು ತಗುಲಿ ನವೀನ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದಯಾನಂದ ಹಾಗೂ ಪದ್ಮನಾಭ ಎಂಬುವವರಿಗೂ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗಿದ್ದ ಮತ್ತೊಬ್ಬ ಯುವಕ ರಾಜಾಚಾರಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ನವೀನ್ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದರು. ಒಂದು ವರ್ಷದ ಹಿಂದೆ ನವೀನ್‌ ಅವರ ತಂದೆ ತೀರಿಕೊಂಡಿದ್ದು, ಅವರಿಗೆ ಪತ್ನಿ ಹಾಗೂ ನಾಲ್ಕು ವರ್ಷದ ಮಗು ಇದ್ದಾರೆ.

ADVERTISEMENT

‘ಮೇಲ್ನೋಟಕ್ಕೆ ಇದೊಂದು ಆಕಸ್ಮಿಕ ಘಟನೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿ ಎಸ್ಪಿ ಹರಿರಾಂ ಶಂಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.