ADVERTISEMENT

ಹಾಸನ ಜಿಲ್ಲೆಯ ರಾಜಕೀಯದಲ್ಲಿ ಅಚ್ಚರಿ ಘಟನೆ, ಕಾದುನೋಡಿ: ಶಾಸಕ ಪ್ರೀತಂ ಜೆ.ಗೌಡ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 3:51 IST
Last Updated 25 ಏಪ್ರಿಲ್ 2022, 3:51 IST
ಪ್ರೀತಂ ಜೆ.ಗೌಡ
ಪ್ರೀತಂ ಜೆ.ಗೌಡ   

ಹಾಸನ: ‘ಜಿಲ್ಲೆಯ ರಾಜಕೀಯದಲ್ಲಿ ಹಲವು ಆಶ್ಚರ್ಯಕರ ಘಟನೆಗಳು ನಡೆಯಲಿವೆ. ಕಾದು ನೋಡಿ’ ಎಂದು ಶಾಸಕ ಪ್ರೀತಂ ಗೌಡ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ಹಲವು ಬದಲಾವಣೆಗಳು ನಡೆಯಲಿವೆ. ಯಾರ‍್ಯಾರು ಯಾವ ಯಾವ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಲಿದೆ. ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ಹಾಸನದಲ್ಲಿ ಸ್ಪರ್ಧಿಸುವಂತಿದ್ದರೆ ಸ್ಪರ್ಧಿಸಲಿ’ ಎಂದರು.

‘ಹಾಸನದಿಂದ ಯಾರು ಸ್ಪರ್ಧಿಸಬೇಕೆಂದು ಶಕ್ತಿದೇವತೆ ಹಾಸನಾಂಬೆ ಮತ್ತು ಪುರದಮ್ಮನ ಬಳಿ ಪ್ರಾರ್ಥಿಸಿದ್ದೇನೆ. ಜೆಡಿಎಸ್‌ನ ಹಲವು ಶಾಸಕರು ಪಕ್ಷ ಬಿಡಲಿದ್ದಾರೆ ಎನ್ನುವುದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರ ಮನೆಯ ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳಬೇಕಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ನಮ್ಮ ಪಕ್ಷ ಸೇರಿಕೊಳ್ಳಿ ಎಂದು ನಾವು ಯಾರಿಗೂ ಆಹ್ವಾನ ನೀಡುತ್ತಿಲ್ಲ, ಬಲವಂತವೂ ಮಾಡುತ್ತಿಲ್ಲ. ಹಾಸನದಿಂದ ಸ್ಪರ್ಧಿಸುವಂತೆ ನಾನೇ ರೇವಣ್ಣ ಮತ್ತು ಭವಾನಿ ಅವರಿಗೆ ಆಹ್ವಾನ ನೀಡುತ್ತೇನೆ. ನಾನೇನೋ ಸಿದ್ಧನಿದ್ದೇನೆ. ತಯಾರಾಗಬೇಕಾದವರು ಅವರು’ ಎಂದರು.

‘ಹಾಸನ ಕ್ಷೇತ್ರದಲ್ಲಿ ನಾನು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನನ್ನ ಕೆಲಸದಿಂದ ಜನರಿಗೆ ತೃಪ್ತಿಯಾಗಿದ್ದರೆ ಜನರು ನನಗೆ ಮತ ನೀಡುತ್ತಾರೆ. ರೇವಣ್ಣ ಅವರ ಕೆಲಸ ಜನರಿಗೆ ತೃಪ್ತಿಯಾಗಿದ್ದರೆ, ಅವರಿಗೇ ಜನರು ಮತ ನೀಡಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.