
ಶಾಸಕ ಕೆ.ಎಂ. ಶಿವಲಿಂಗೇಗೌಡ
ಹಾಸನ: ಶಾಸಕ ಕೆ.ಎಂ. ಶಿವಲಿಂಗೇಗೌಡರು ಅಧಿಕಾರ ದುರುಪಯೋಗ ಪಡಿಸಿಕೊಂಡು ಸಣ್ಣ ಹಾಗೂ ಹಿಂದುಳಿದ ಸಮುದಾಯಗಳ ವಿರುದ್ಧ ವರ್ತಿಸುತ್ತಿದ್ದಾರೆ ಎಂದು ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಜ್ಜಪ್ಪ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಸಾರ್ವಜನಿಕ ಸೇವಕರಾಗಿದ್ದು, ಅವರನ್ನು ಪ್ರಶ್ನಿಸುವ ಹಕ್ಕು ನಾಗರಿಕರಿಗೆ ಇದೆ. ಸವಿತಾ ಸಮಾಜದ ಅಧ್ಯಕ್ಷ ಅರುಣ್ ಕುಮಾರ್ ವಿರುದ್ಧದ ಹೇಳಿಕೆಗಳು ಖಂಡನೀಯ. ಮಂತ್ರಿ ಸ್ಥಾನದ ಆಸೆಯಿಂದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರೂ ಸಚಿವ ಸ್ಥಾನ ಸಿಗದ ಕಾರಣ ಅವರು ಹತಾಶರಾಗಿದ್ದಾರೆ. ಹಿಂದುಳಿದವರ ಪರ ಎಂದು ಹೇಳಿ ಮತ ಪಡೆದ ಬಳಿಕ, ರಾಜಕೀಯ ಲಾಭಕ್ಕಾಗಿ ಡಿ.ಕೆ. ಶಿವಕುಮಾರ್ ಜೊತೆ ನಡೆಯುತ್ತಿದ್ದಾರೆ ಎಂದರು.
ಕ್ಷೇತ್ರದ ಕಾಮಗಾರಿಗಳಲ್ಲಿ ಕಮಿಷನ್ ಪಡೆಯುತ್ತಿರುವ ಆರೋಪ ಮಾಡಿದ್ದು, ಅದನ್ನು ನಿರಾಕರಿಸುವುದಾದರೆ, ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯಗಳ ಮನೋಭಾವನೆಗೆ ಧಕ್ಕೆ ಉಂಟಾಗುವ ರೀತಿಯ ಶಿವಲಿಂಗೇಗೌಡರ ವರ್ತನೆ ಸರಿಯಲ್ಲ ಎಂದರು.
ಸವಿತಾ ಸಮಾಜದ ಅರಸೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷ ಅರುಣ್ ಕುಮಾರ್, ಭಾಸ್ಕರ್, ಗೋಪಾಲಪುರ ರಂಗಸ್ವಾಮಿ, ಸುಪ್ರೀತ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.