ಹಾಸನ: ವಿದ್ಯಾನಗರ ರಿಂಗ್ ರಸ್ತೆಯ ಕ್ರೈಸ್ಟ್ ಶಾಲೆ ಸಮೀಪದ ಶ್ರೀಹರ ಕಟ್ಟಡದಲ್ಲಿ ಅಕ್ಷರ ಅಕಾಡೆಮಿವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಆರಂಭಿಸಲಾಗಿದೆ ಎಂದು ಟೈಮ್ಸ್ ಸಂಸ್ಥೆಯಮುಖ್ಯಸ್ಥ ಬಿ.ಕೆ. ಗಂಗಾಧರ್ ತಿಳಿಸಿದರು.
15 ರಂದು ಮಧ್ಯಾಹ್ನ 3 ಗಂಟೆಗೆ ತರಬೇತಿ ಕೇಂದ್ರ ಉದ್ಘಾಟನೆಯಾಗಲಿದ್ದು, ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ಗೌಡ, ಬೆಂಗಳೂರಿನ ರಾಜಕುಮಾರ್ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಬಾಡಗಿ, ವಿಜಯಪುರ ಚಾಣಕ್ಯ ಅಕಾಡೆಮಿಯ ಸಂಪನ್ಮೂಲ ವ್ಯಕ್ತಿ ಸೋಮಪ್ಪ ದುಂಡಿಗೇರಿ ಭಾಗವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಐಎಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ‘ಹೊಸ ಹಾದಿಯ ಹೊಸ ಬೆಳಕು’ ಎಂಬ ಧ್ಯೇಯ ವಾಕ್ಯದೊಂದಿಗೆ ಅಕ್ಷರ ಬುಕ್ ಹೌಸ್ ಸಹಯೋಗದೊಂದಿಗೆ ಅಕ್ಷರ ಅಕಾಡೆಮಿ ತರಬೇತಿಸಂಸ್ಥೆ ಪ್ರಾರಂಭಿಸಲಾಗಿದೆ ಎಂದರು.
ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೂ ಮೊದಲ ಆದ್ಯತೆ ಇದ್ದು, ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ವಾರಾಂತ್ಯದಲ್ಲಿ ತರಗತಿಗಳು ನಡೆಯಲಿವೆ. ಉತ್ತಮ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ ಪುಸ್ತಕಗಳನ್ನು ಅಕಾಡೆಮಿಯಿಂದಲೇ ನೀಡುತ್ತಿದ್ದು, ವಾರ್ಷಿಕ ₹15 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಅಕಾಡೆಮಿ ಪ್ರಾರಂಭೋತ್ಸವದ ದಿನವೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 300 ವಿದ್ಯಾರ್ಥಿಗಳಿಗೆ ಅಕ್ಷರ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಗುರುಪ್ರಸಾದ್, ಅಕಾಡೆಮಿಯ ಸಿಬ್ಬಂದಿ ಕಾರ್ತಿಕ್ ಹಾಗೂ ಕೀರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.