
ಬಾಗೂರು (ನುಗ್ಗೇಹಳ್ಳಿ): ಹೋಬಳಿಯ ಕೆ. ಮಲ್ಲೇನಹಳ್ಳಿ ಗ್ರಾಮದಲ್ಲಿ ಸುಮಾರು ₹20 ಲಕ್ಷ ಅನುದಾನದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮಸ್ಥರು ಅಂಬೇಡ್ಕರ್ ಸಮುದಾಯ ಭವನಕ್ಕೆ ಒತ್ತಾಯ ಮಾಡುತ್ತಿದ್ದರು. ಸಮಾಜ ಕಲ್ಯಾಣ ಸಚಿವರಿಗೆ ಮನವಿ ಮಾಡುವ ಮೂಲಕ ₹20 ಲಕ್ಷ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಸಮುದಾಯ ಭವನವನ್ನು ಗುತ್ತಿಗೆದಾರರು ಗುಣಮಟ್ಟದಲ್ಲಿ ನಿರ್ಮಾಣ ಮಾಡುವಂತೆ ತಿಳಿಸಲಾಗಿದೆ. ಜೊತೆಗೆ ಭೂಸೇನಾ ನಿಗಮದ ಅನುದಾನದಲ್ಲಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಿಂದ ಮಾಸ್ತಿ ಅಮ್ಮ ದೇವಾಲಯದವರೆಗೆ ಸುಮಾರು 1 ಕಿ.ಮೀ. ಜಲ್ಲಿ ರಸ್ತೆ ನಿರ್ಮಾಣಕ್ಕೆ ₹ 30 ಲಕ್ಷ ಅನುದಾನ ನೀಡಲಾಗಿದೆ ಎಂದರು.
ಬ್ಯಾಡರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಗ್ರಾಮದ ಹೆಚ್ಚಿನ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ವಿವಿಧ ಬಡಾವಣೆಗಳ ರಸ್ತೆ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮೂಡನಹಳ್ಳಿ ಚಂದ್ರಣ್ಣ, ಟಿಎಪಿಎಂಎಸ್ ನಿರ್ದೇಶಕ ಬೋರೇಗೌಡ, ಸಮಾಜ ಕಲ್ಯಾಣ ಇಲಾಖೆ ಎಂಜಿನಿಯರ್ ತ್ಯಾಗರಾಜ್, ಭೂಸೇನಾ ನಿಗಮದ ಎಂಜಿನಿಯರ್ ಪ್ರೀತಮ್, ಗ್ರಾಪಂ ಸದಸ್ಯ ಸಂತೋಷ್, ಮುಖಂಡರಾದ ಹುಲಿಕೆರೆ ಸಂಪತ್ ಕುಮಾರ್, ಪಟೇಲ್ ನಾಗರಾಜ್, ಪಟೇಲ್ ರಾಜೇಗೌಡ, ಧರ್ಮರಾಜು, ಬಸವರಾಜ್, ದಿನೇಶ್, ಪೂರ್ಣಿಮಾ ಮೋಹನ್, ಎಂ.ಎಂ. ಸತೀಶ್, ಎಂ.ಎ. ಜಗದೀಶ್, ಶೇಖರ್, ಕುಮಾರ್, ಉದ್ಯಮಿ ರಾಯಚೂರು ಕುಮಾರ್, ಅಮಾಸೆಗೌಡ, ನಾಗೇಶ್, ಎಂ.ಕೆ. ಶಿವಣ್ಣ, ಶ್ರೀಧರ್, ಬಸವರಾಜ್, ಕೆ.ಎಂ. ಉದಯ್, ಮೂಡ್ನಳ್ಳಿ ಪುಟ್ಟಸ್ವಾಮಿಗೌಡ, ಮಂಜುನಾಥ್ ಎಂ.ಕೆ., ಪಿಡಿಒ ಹರ್ಷ, ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.