ADVERTISEMENT

ಅಜ್ಜೂರು: ದಲಿತರ ಮನೆಯಲ್ಲಿ ಎ.ಮಂಜು ವಾಸ್ತವ್ಯ

ಅಜ್ಜೂರು ಕಾಲೊನಿಯಲ್ಲಿ ಅಂಬೇಡ್ಕರ್‌ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 4:55 IST
Last Updated 15 ಏಪ್ರಿಲ್ 2022, 4:55 IST
ಅರಕಲಗೂಡು ತಾಲ್ಲೂಕು ಅಜ್ಜೂರು ಗ್ರಾಮದ ದಲಿತ ಕಾಲೊನಿಯ ದೇವರಾಜು ಎಂಬುವರ ಮನೆಯಲ್ಲಿ ಬುಧವಾರ ರಾತ್ರಿ ಎ.ಮಂಜು ಊಟ ಮಾಡಿದರು
ಅರಕಲಗೂಡು ತಾಲ್ಲೂಕು ಅಜ್ಜೂರು ಗ್ರಾಮದ ದಲಿತ ಕಾಲೊನಿಯ ದೇವರಾಜು ಎಂಬುವರ ಮನೆಯಲ್ಲಿ ಬುಧವಾರ ರಾತ್ರಿ ಎ.ಮಂಜು ಊಟ ಮಾಡಿದರು   

ಅರಕಲಗೂಡು: ಅಂಬೇಡ್ಕರ್ ಜಯಂತಿ ಪ್ರಯುಕ್ತ ಬಿಜೆಪಿ ಮುಖಂಡ ಎ.ಮಂಜು ಬುಧವಾರ ರಾತ್ರಿ ತಾಲ್ಲೂಕಿನ ಅಜ್ಜೂರು ಕಾಲೊನಿಯ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದರು.

ಸಂಜೆ 7 ಗಂಟೆಗೆ ದಲಿತರ ಕಾಲೊನಿಗೆ ಬಂದ ಮಂಜು ಅವರನ್ನು ಗ್ರಾಮಸ್ಥರು ಸ್ವಾಗತಿಸಿದರು. ಗ್ರಾಮದ ದೇವರಾಜು ಮನೆಯಲ್ಲಿ ರಾತ್ರಿ ಕೆಲ ಹೊತ್ತು ಅಂಬೇಡ್ಕರ್ ತತ್ವ, ಸಿದ್ಧಾಂತಗಳ ಬಗ್ಗೆ ಜನರೊಂದಿಗೆ ಚರ್ಚಿಸಿದರು. ಊಟ ಸವಿದು ಅಲ್ಲಿಯೇ
ಮಲಗಿದರು.

ಗುರುವಾರ ಬೆಳಿಗ್ಗೆ ಗ್ರಾಮಸ್ಥ ರೊಂದಿಗೆ ಅಂಬೇಡ್ಕರ್ ಜಯಂತಿ ಆಚರಿಸಿದರು.

ADVERTISEMENT

‘ಕಾಲೇಜು ದಿನಗಳಿಂದಲೂ ಅಂಬೇಡ್ಕರ್ ಅನುಯಾಯಿಯಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ‌ ಸಾಗುತ್ತಿದ್ದೇನೆ. ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡ ಕಾರಣಕ್ಕಾಗಿ ನಾನು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು. ಕಾಲೇಜಿನಲ್ಲಿ ಶೇ 60ರಷ್ಟು ದಲಿತ ಸಮುದಾಯದ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾದ ಒಡನಾಟ ಬೆಳೆಸಿಕೊಂಡ ಕಾರಣ ನಾನು ಸೆನೆಟ್ ಸದಸ್ಯನಾಗಿ ಆಯ್ಕೆಯಾಗಲು ಸಾಧ್ಯವಾಗಿತ್ತು. ನನ್ನ ರಾಜಕೀಯ ಏಳಿಗೆಗೂ ದಲಿತ ಸಮುದಾಯದ ಸಹಕಾರ ಅಪಾರ’ ಎಂದು ಎ.ಮಂಜು ತಿಳಿಸಿದರು.

‘ಜಾತೀಯತೆ ತೊಡೆದು ಎಲ್ಲರಿಗೂ ಸಮಾನ ಹಕ್ಕುಗಳನ್ನು ದೊರಕಿಸಿ ವಿಶ್ವವೇ ಮೆಚ್ಚುವ ಶ್ರೇಷ್ಠ ಸಂವಿಧಾನ ನೀಡಿದ ಮಹಾನ್ ನಾಯಕ ಅಂಬೇಡ್ಕರ್.ಮನುಕುಲದ ಉದ್ಧಾರಕ್ಕೆ ಮಹತ್ವದ ಕೊಡುಗೆ ಕೊಟ್ಟಿದ್ದಾರೆ. ಹೀಗಾಗಿ, ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿ, ಕಾಲೊನಿಯಲ್ಲಿ ಜಯಂತಿ ಆಚರಿಸಿದ್ದೇನೆ’ ಎಂದರು.

‘ನಾನು ಯಾವ ಪಕ್ಷದಲ್ಲಿದ್ದೇನೆ ಎನ್ನುವುದು ಮುಖ್ಯವಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.