
ಅರಕಲಗೂಡು (ಹಾಸನ ಜಿಲ್ಲೆ): ತಾಲ್ಲೂಕಿನ ಸಂತೆಮರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಅವರು ವೈಯಕ್ತಿಕವಾಗಿ ₹80 ಸಾವಿರ ವೆಚ್ಚ ಮಾಡಿ, ವಾರದ ಹಿಂದೆ ಕೊಳವೆಬಾವಿ ಕೊರೆಸಿ ಶಾಲೆಯ ನೀರಿನ ಕೊರತೆ ನೀಗಿಸಿದ್ದಾರೆ.
‘ಕುಡಿಯಲು ಹಾಗೂ ಶೌಚಾಲಯಕ್ಕೆ ನೀರಿನ ತೀವ್ರ ಸಮಸ್ಯೆ ಇದ್ದುದನ್ನು ಗಮನಿಸಿ, ಕೊಳವೆಬಾವಿ ಕೊರೆಸಿ ಮೋಟಾರ್ ಅಳವಡಿಸಲಾಗಿದೆ’ ಎಂದು ಅವರು ತಿಳಿಸಿದರು.
‘ಶಾಲೆಗೆ ಕಿಟಕಿ, ಬಾಗಿಲು ದುರಸ್ತಿ ಅಗತ್ಯವಿದೆ. ವಿದೇಶದಲ್ಲಿರುವ ಮಗಳು ₹20 ಸಾವಿರ ನೀಡುವುದಾಗಿ ಹೇಳಿದ್ದಾಳೆ. ಉಳಿಕೆ ಹಣ ಭರಿಸಿ ದುರಸ್ತಿ ಮಾಡಿಸಲು ನಿರ್ಧರಿಸಿದ್ದೇನೆ’ ಎಂದು ಹೇಳಿದರು.
ಶಾಲೆಗೆ ಭೇಟಿ ನೀಡಿದ ಬಿಇಒ ಕೆ.ಪಿ.ನಾರಾಯಣ್ ಮಾತನಾಡಿ, ‘ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ಶಾಲೆಗೆ ಮುಖ್ಯಶಿಕ್ಷಕಿ ಶಾಶ್ವತ ಪರಿಹಾರ ಒದಗಿಸಿರುವುದು ಶ್ಲಾಘನೀಯ. ಅವರ ಸೇವೆ ಅನನ್ಯ’ ಎಂದರು.
‘ಶಾಲೆಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಮನವಿ ಸಲ್ಲಿಸಿದ್ದಾರೆ. ಈಗಾಗಲೇ ₹2.5 ಲಕ್ಷ ಅನುದಾನ ನಿಗದಿಯಾಗಿದ್ದು, ಹೆಚ್ಚುವರಿ ಆರ್ಥಿಕ ನೆರವನ್ನೂ ಒದಗಿಸಲಾಗುವುದು’ ಎಂದರು.
ಶಿಕ್ಷಣ ಸಂಯೋಜಕ ಯೋಗೇಶ್, ಎಸ್ಡಿಎಂಸಿ ಅಧ್ಯಕ್ಷ ರವಿ ಮಾತನಾಡಿದರು. ಶಿಕ್ಷಕರಾದ ಇಂದ್ರೇಗೌಡ, ಓದೇಶ್, ಪಾಂಡುರಾಜನ್, ಓಬಳೇಶ, ಮಹೇಶ್, ವಸಂತಕುಮಾರ್, ರೇಖಾ, ಶೈಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.