ADVERTISEMENT

ಚರ್ಚೆ ನಡೆಸಿಯೇ ಪ್ರತಿಮೆಯ ಸ್ಥಳ ನಿಗದಿ

ಎನ್‌.ಆರ್. ಸಂತೋಷ್‌ಗೆ ವೀರಶೈವ ಸಮಾಜದ ಮುಖಂಡರ ತಿರುಗೇಟು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:35 IST
Last Updated 4 ಮಾರ್ಚ್ 2026, 6:35 IST
   

ಅರಸೀಕೆರೆ: ಗಂಜಿ ಗಿರಾಕಿಗಳು ನಾವಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದಿರುವವರು ಯಾರು ಅಥವಾ ಗಂಜಿ ಗಿರಾಕಿಗಳು ಯಾರು ಎಂಬುದು ಅರಸೀಕೆರೆ ಕ್ಷೇತ್ರದ ಜನತೆಗೆ ಗೊತ್ತಿದೆ. ವಲಸೆ ಬಂದಿರುವ ಅವರೇ ಆತ್ಮವಲೋಕನ ಮಾಡಿಕೊಳ್ಳಲಿ. ಬೇಕಾಬಿಟ್ಟಿ ಮಾತನಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವೀರಶೈವ ಸಮಾಜದ ಮುಖಂಡರು, ಎನ್.ಆರ್.ಸಂತೋಷ್‌ ಅವರಿಗೆ ಎಚ್ಚರಿಕೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಬಸವೇಶ್ವರ ಪ್ರತಿಮೆ ಸ್ಥಾಪನೆ ಕುರಿತು ಶಾಸಕ ಕೆ.ಎಂ.ಶಿವಲಿಂಗೇಗೌಡರ ಬಳಿ ಇರುವ ಗಂಜಿ ಕುಡಿಯುವ ಗಿರಾಕಿಗಳನ್ನು ಮಾತ್ರ ಸೇರಿಸಿಕೊಂಡು ಏಕಪಕ್ಷೀಯ ನಿರ್ಧಾರ ಮಾಡಿದ್ದಾರೆ ಎಂದು ಈಚೆಗೆ ಎನ್.ಆರ್.ಸಂತೋಷ್‌ ಸುದ್ದಿಗೋಷ್ಠಿಯಲ್ಲಿ ಹೇಳಿರುವುದು ಖಂಡನೀಯ ಎಂದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶಶಿಧರ್‌ ಮಾತನಾಡಿ, ಬಸವೇಶ್ವರರು ವಿಶ್ವಗುರುವಾಗಿ ಎಲ್ಲರ ದೈವ ಪುರುಷರಾಗಿದ್ದಾರೆ. ಅವರ ಪ್ರತಿಮೆ ಸ್ಥಾಪನೆ ಸಂಬಂಧ ಶಾಸಕ ಶಿವಲಿಂಗೇಗೌಡರ ನೇತೃತ್ವದಲ್ಲಿ ಸಮಾಜದ ಮುಖಂಡರು ಹಾಗೂ ಪಕ್ಷಾತೀತವಾಗಿ ಎಲ್ಲರೂ ಚರ್ಚೆ ನಡೆಸಿ ಸೂಕ್ತ ಸ್ಥಳ ನಿಗದಿ ಮಾಡಿದ್ದಾರೆ. ಶಾಸಕರು ಕೇವಲ ಹಿಂಬಾಲಕರನ್ನು ಮಾತ್ರ ಸೇರಿಸಿಕೊಂಡು ತೀರ್ಮಾನ ಮಾಡಿರುವುದಾಗಿ ಕೆಲವರು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದರು.

ADVERTISEMENT

ಒಂದು ಊರಲ್ಲಿ ಜಾತ್ರೆಯ ಸಂದರ್ಭದಲ್ಲಿ ತೇರನ್ನು ಎಳೆಯುತ್ತಾರೆ. ಅಲ್ಲಿ ಕೆಲವರು ದೇವರಿಗೆ ಕೈ ಮುಗಿಯುತ್ತಾರೆ. ಮತ್ತೆ ಕೆಲವರು ರಥಕ್ಕೆ ಬಾಳೆಣ್ಣು ಎಸೆಯುತ್ತಾರೆ. ಯಾರೂ ಕಲ್ಲನ್ನು ಎಸೆಯಲು ಪ್ರಯತ್ನವೂ ಮಾಡಲ್ಲ. ಆದರೆ ಇಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪನೆ ವಿಷಯದಲ್ಲಿ ಕೆಲವರು ಕಲ್ಲು ಎಸೆಯುವ ಪ್ರಯತ್ನ ಮಾಡುತ್ತಿರುವುದು ಬೇಸರದ ಸಂಗತಿ. ಸಂತೋಷ ಅವರು ನಮ್ಮನ್ನು ಗಂಜಿ ಗಿರಾಕಿಗಳೆಂದು ಹೇಳಿರುವುದು ಖಂಡನೀಯವಾಗಿದ್ದು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ವೀರಶೈವ ಮುಖಂಡ ಗಂಜಿಗೆರೆ ಚಂದ್ರಶೇಖರ್‌ ಮಾತನಾಡಿ, ನಾವು ಗಂಜಿ ಗಿರಾಕಿಗಳಲ್ಲ.  ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಶಾಸಕ ಕೆ.ಎಂ.ಶಿವಲಿಂಗೇಗೌಡರ ಬಳಿ ಹತ್ತು ರೂ ತೆಗೆದುಕೊಂಡಿದ್ದಿವಿ ಎಂದು ಹೇಳಿಸಲಿ ಎಂದು ಸಂತೋಷ್‌ ಅವರಿಗೆ ಸವಾಲು ಹಾಕಿದರು. ಶಾಸಕರ ಕಾರ್ಯವೈಖರಿ ಹಾಗೂ ಅಭಿವೃದ್ದಿ ಕೆಲಸಗಳನ್ನು ಮೆಚ್ಚಿ ಅವರ ಜೊತೆಯಲ್ಲಿದ್ದೇವೆ. ಮುಂದಿನ ಬಸವ ಜಯಂತಿ ಆಚರಣೆಯೊಳಗೆ ಪ್ರತಿಮೆ ನಿರ್ಮಾಣ ಮಾಡಲು ಸಮಿತಿ ರಚಿಸಿಕೊಂಡಿದ್ದೇವೆ. ಅದೇ ಸ್ಥಳದಲ್ಲಿ ಬಸವಣ್ಣನವರ ಪ್ರತಿಮೆಯನ್ನು ಶಾಸಕ ಶಿವಲಿಂಗೇಗೌಡರ ನೇತೃತ್ವದಲ್ಲಿ ಸ್ಥಾಪಿಸಿಯೇ ತೀರುತ್ತೇವೆ ಎಂದರು.

ಗಂಜಿ ಹುಡುಕಿಕೊಂಡು ಬಂದಿರುವ ನೀನು ಸತತ ಎರಡೂವರೆ ವರ್ಷಗಳಿಂದ ಸಮಾಜದ ಅಭಿವೃದ್ದಿಗೆ ನಿಮ್ಮ ಕೊಡುಗೆ ಏನು? ನಿಮ್ಮ ಸಮಾಜದವರಿಗೆ ನೀವೂ ಏನು ಮಾಡಿದ್ದೀರಿ? ನಿಮ್ಮ ಜೊತೆಯಲ್ಲಿ ಯಾವ ಸಮಾಜದ ಮುಖಂಡರಿದ್ದಾರೆ ಎಂದು ಪ್ರಶ್ನೆ ಕೇಳಿದರು.

ಮುರುಂಡಿ ಶಿವಯ್ಯ ಮಾತನಾಡಿ, ಒಳ್ಳೆಯ ಕಾರ್ಯಗಳಿಗೆ ಯಾರಾದರೂ ಆಗಲಿ, ಸಹಕಾರ ನೀಡುವುದನ್ನು ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಸುಮ್ಮನೆ ಇರಬೇಕು ಎಂದು ಖಂಡಿಸಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್‌, ಸಮಾಜದ ಮುಖಂಡರಾದ ಪೆಟ್ರೊಲ್‌ ಬಂಕ್‌ ಮಂಜುನಾಥ್‌, ಅಡವಿ ಸ್ವಾಮಿ, ಜಯಣ್ಣ, ರಘು, ಗುತ್ತಿಗೆದಾರ ಉಮೇಶ್‌, ಸಿದ್ದರಾಜು ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.