ಹಳೇಬೀಡು: ಚಿಕ್ಕಮಗಳೂರು ಸಂಪರ್ಕಿಸುವ ಹಾಸನ ರೈಲು ಮಾರ್ಗ ಕಾಮಗಾರಿ ಮಾದಿಹಳ್ಳಿವರೆಗೂ ಪೂರ್ಣಗೊಂಡಿದೆ. ಶೀಘ್ರದಲ್ಲೇ ಬೇಲೂರುವರೆಗೆ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಗುರುವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜಯಶೀಲ ಜಯಶಂಕರ್ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. ಮಾದಿಹಳ್ಳಿಯಿಂದ ಆಲೂರುವರೆಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಹಾಸನ ಜಿಲ್ಲಾಧಿಕಾರಿ ಭೂಸ್ವಾಧೀನ ಕ್ರಮ ಕೈಗೊಂಡಿದ್ದರಿಂದ ರೈಲು ಮಾರ್ಗ ಕಾಮಗಾರಿಗೆ ಅನುಕೂಲವಾಗಿದೆ ಎಂದರು.
ಬೇಲೂರಿನಿಂದ ಹಳೇಬೀಡು ಮಾರ್ಗದಲ್ಲಿ ಅರಸೀಕೆರೆ ರೈಲುಮಾರ್ಗ ವಿಸ್ತರಣೆ ಮಾಡಿದರೆ, ಯುನೆಸ್ಕೋ ಪಾರಂಪರಿಕ ತಾಣ ಅಭಿವೃದ್ಧಿಗೆ ಅನುಕೂಲ ಆಗುತ್ತದೆ ಎಂಬ ಪ್ರಶ್ನೆಗೆ, ಸದ್ಯ ಚಾಲ್ತಿಯಲ್ಲಿರುವ ರೈಲು ಮಾರ್ಗದ ವಿಸ್ತರಣೆಗೆ ಕ್ರಮ ಕೈಗೊಂಡಿದ್ದೇವೆ ಎಂದರು.
ಹಿಂದೆ ರೈಲ್ವೆ ಇಲಾಖೆಗೆ ₹800 ಕೋಟಿ ಮಾತ್ರ ಅನುದಾನ ಬರುತ್ತಿತ್ತು. ಮೋದಿ ಪ್ರಧಾನಮಂತ್ರಿಯಾದ ಬಳಿಕ ₹1700 ಕೋಟಿ ಅನುದಾನ ಬರುತ್ತಿದೆ. ರೈಲು ಮಾರ್ಗಗಳ ಅಭಿವೃದ್ಧಿ ಜೊತೆಗೆ ಹೊಸ ರೈಲು ಮಾರ್ಗಗಳು ನಿರ್ಮಾಣ ಆಗುತ್ತಿವೆ. ರೈಲು ಮಾರ್ಗದಲ್ಲಿ ಬರುವ ಅಂಡರ್ಪಾಸ್ ಹಾಗೂ ಮೇಲ್ಸೇತುವೆಗಳನ್ನು ಪ್ರಧಾನಿ ಮೋದಿ ಅವರು ಕೇಂದ್ರ ಸರ್ಕಾರ ನಿರ್ಮಿಸುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಎರಡು ಟ್ರಿಪ್ ರೈಲು ಸಂಚಾರ ಆರಂಭಿಸಲಾಗಿದೆ ಎಂದು ಸೋಮಣ್ಣ ಹೇಳಿದರು.
ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ಸೋಮಣ್ಣ ಹೇಳಿದರು.
ಪುಷ್ಪಗಿರಿ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪುಷ್ಪಗಿರಿ ಹಾಗೂ ಹಳೇಬೀಡಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ರೈಲು ಮಾರ್ಗ ನಿರ್ಮಿಸುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕ ಎಚ್.ಕೆ.ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜಯಶೀಲ ಜಯಶಂಕರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಬೇಲೂರು ತಾಲ್ಲೂಕು ವಿರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಎ.ಎಸ್.ಬಸವರಾಜು ಮುಖಂಡರಾದ ಪಟೇಲ್ ಕಾಂತರಾಜು , ಗಂಗೂರು ಶಿವಕುಮಾರ್, ದೊರೆಸ್ವಾಮಿ, ಸಿದ್ದರಾಜು ಸಾರಿಗೆ ಸಂಸ್ಥೆ ನಿವೃತ್ತ ಅಧಿಕಾರಿ ರಾಜಶೇಖರ್ ಭಾಗವಹಿಸಿದ್ದರು. ತಹಶಿಲ್ದಾರ್ ಎಂ.ಮಮತ, ಹೆಚ್ಚುವರಿ ಎಸ್ಪಿ ಶಾಲು, ಸಿಪಿಐ ರೇವಣ್ಣ, ಪಿಎಸ್ಐ ಸಿದ್ದಲಿಂಗ ಸ್ಥಳದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.