ADVERTISEMENT

ಬೇಲೂರು: ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕಿ ಸೇರಿ 7 ಜನರ ಮೇಲೆ ನಾಯಿಗಳ ದಾಳಿ

ಶಿಕ್ಷಕಿಯ ಆರೋಗ್ಯ ವಿಚಾರಿಸಿದ ಶಾಸಕ ಎಚ್‌.ಕೆ. ಸುರೇಶ್: ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:07 IST
Last Updated 6 ಅಕ್ಟೋಬರ್ 2025, 6:07 IST
ಬೇಲೂರಿನ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎಚ್‌.ಕೆ. ಸುರೇಶ್‌, ಶಿಕ್ಷಕಿ ಚಿಕ್ಕಮ್ಮ ಅವರ ಆರೋಗ್ಯ ವಿಚಾರಿಸಿದರು
ಬೇಲೂರಿನ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎಚ್‌.ಕೆ. ಸುರೇಶ್‌, ಶಿಕ್ಷಕಿ ಚಿಕ್ಕಮ್ಮ ಅವರ ಆರೋಗ್ಯ ವಿಚಾರಿಸಿದರು   

ಬೇಲೂರು: ಇಲ್ಲಿನ ಹೊಯ್ಸಳ ನಗರದಲ್ಲಿ ಭಾನುವಾರ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕಿ ಚಿಕ್ಕಮ್ಮ ಹಾಗೂ ಇತರ 7 ಜನರ ಮೇಲೆ ದಾಳಿ ನಡೆಸಿರುವ ಬೀದಿನಾಯಿಗಳ ಉಪಟಳಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಎರಡು ನಾಯಿಗಳನ್ನು ಹೊಡೆದು ಸಾಯಿಸಿದ್ದಾರೆ.

ನೆಹರೂ ನಗರದ ಜಿಎಸ್ಇಎಸ್ ಶಾಲೆಯ ಶಿಕ್ಷಕಿ ಚಿಕ್ಕಮ್ಮ ತಮ್ಮ ಪತಿ ಶಿವಕುಮಾರ್ ಜೊತೆ  ಸಮೀಕ್ಷೆಗೆ ತೆರಳಿದ್ದ ವೇಳೆ, ಬೀದಿ ನಾಯಿ ದಾಳಿ ನಡೆಸಿ ಕೆನ್ನೆ, ಕಿವಿ, ತೊಡೆ ಹಾಗೂ ಹೊಟ್ಟೆ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ.  ಪತಿ ಶಿವಕುಮಾರ್ ಅವರಿಗೂ  ಕಚ್ಚಿದೆ.

ಚಿಕ್ಕಮ್ಮನವರಿಗೆ ಕಚ್ಚಿದ ನಾಯಿ ಮತ್ತು ಇತರೆ ನಾಯಿಗಳು ಸೇರಿಕೊಂಡು ಜೈ ಭೀಮ್ ನಗರದ ಬೀದಿಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕನ ಮೇಲೂ ದಾಳಿ ನಡೆಸಿವೆ. ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ನಾಯಿಗಳನ್ನು ಹೊಡೆದು ಸಾಯಿಸಿದ್ದಾರೆ.

ADVERTISEMENT

ಘಟನೆಯ ಮಾಹಿತಿ ಪಡೆದ ಶಾಸಕ ಎಚ್.ಕೆ.ಸುರೇಶ್, ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ, ಚಿಕ್ಕಮ್ಮ ಅವರ ಆರೋಗ್ಯ ವಿಚಾರಿಸಿದರು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್‌ಗೆ ಕಳುಹಿಸಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ಮಾತನಾಡಿದ ಸುರೇಶ್‌, ಗಾಯಾಳುಗಳಿಗೆ  ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಚ್‌.ಕೆ. ಸುರೇಶ್‌, ‘ಸರ್ಕಾರ ಸಮೀಕ್ಷೆ ಹೆಸರಿನಲ್ಲಿ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿರುವುದು ನಾಚಿಕೆಗೇಡಿನ ಸಂಗತಿ‌. ಮೋಜು– ಮಸ್ತಿ ಮಾಡಲು ಈ ಸರ್ಕಾರಕ್ಕೆ ಸಮಯವಿದೆ. ಸಮೀಕ್ಷೆ ಮಾಡಲು ಕೇವಲ 15 ದಿನಗಳ ಕಾಲಾವಕಾಶ ನೀಡಿ ಶಿಕ್ಷಕರನ್ನು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿಸಿದೆ’ ಎಂದು ದೂರಿದರು.

‘ಗಣತಿಯ ಸಂದರ್ಭದಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದ್ದು, ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಾದರೆ, ಮಲೆನಾಡಿನಲ್ಲಿ ಕಾಡಾನೆ ಸಮಸ್ಯೆ, ಹಳೆಬೀಡು ಭಾಗದಲ್ಲಿ ಚಿರತೆಗಳ ಹಾವಳಿ. ಇಂತಹ ಸಂದರ್ಭಗಳಲ್ಲಿ ಶಿಕ್ಷಕರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ‌. ಏನಾದರೂ ತೊಂದರೆಯಾದರೆ ಅವರ ಕುಟುಂಬಕ್ಕೆ ಹೊಣೆ ಯಾರು’ ಎಂದು ಪ್ರಶ್ನಿಸಿದರು.

‘ಶಿಕ್ಷಕಿ ಚಿಕ್ಕಮ್ಮ ಗುಣಮುಖವಾಗಲು ಸುಮಾರು 1 ವರ್ಷವಾದರೂ ಬೇಕಾಗುತ್ತದೆ. ಪಟ್ಟಣದಲ್ಲಿ ನಾಯಿಗಳ ಹಾವಳಿ ಮಿತಿಮೀರಿದ್ದು, ಕೂಡಲೇ ಅವುಗಳನ್ನು ಹಿಡಿದು ಬೇರೆಡೆ ಸಾಗಿಸಲು  ಮುಂದಾಗುವಂತೆ ಪುರಸಭೆ ಮುಖ್ಯಾಧಿಕಾರಿಗೆ ತಿಳಿಸಿದ್ದೇನೆ’ ಎಂದರು.

ತಹಶೀಲ್ದಾರ್ ಶ್ರೀಧರ್ ಕಂಕನವಾಡಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಮಂಜುನಾಥ, ಶಿಕ್ಷಕ ಬಿ.ಎನ್. ಆನಂದ್, ಬಿಆರ್‌ಸಿ ಶಿವಪ್ಪ  ಇದ್ದರು.

ಹಿಮ್ಸ್‌ಗೆ ಜಿಲ್ಲಾಧಿಕಾರಿ ಭೇಟಿ

ಹಾಸನ: ಇಲ್ಲಿನ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಶಿಕ್ಷಕಿ ಚಿಕ್ಕಮ್ಮ ಅವರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಈ ವೇಳೆ ಹಿಮ್ಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಸೂಕ್ತ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು. ಅಗತ್ಯ ಆಹಾರ ಔಷಧಿಗಳನ್ನು ಪೂರೈಸಬೇಕು. ಯಾವುದೇ ಲೋಪ ಆಗದಂತೆ ಚಿಕಿತ್ಸೆ ನೀಡುವಂತೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.