ಹಳೇಬೀಡು: ಜನರು ತ್ಯಾಜ್ಯ ಹಾಕುತ್ತಿರುವುದರಿಂದ ಇಲ್ಲಿನ ಬಿದುರುಕರೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಕೆರೆಗೆ ತ್ಯಾಜ್ಯ ಬಂದು ಬೀಳುತ್ತಿರುವುದರಿಂದ ಸಂಗ್ರಹವಾಗಿರುವ ನೀರು ಮಲಿನವಾಗುತ್ತಿದೆ.
ಕೆರೆ ಒಣಗಿದ್ದಾಗ ಹಾಕಿದ್ದ ತ್ಯಾಜ್ಯ ಈಗ ನೀರಿನಲ್ಲಿ ಕೊಳೆತು ನಾರುತ್ತಿದೆ. ಜೊತೆಗೆ ಕೆಲವರು ಸಂಗ್ರಹವಾಗಿರುವ ನೀರಿಗೆ ಕಸ ಸುರಿಯುತ್ತಿದ್ದಾರೆ. ಇಂತಹ ಪ್ರಕ್ರಿಯೆಯಿಂದ ಬಿದುರು ಕೆರೆ ಕೊಳಚೆ ತಾಣವಾಗುತ್ತಿದೆ. ಜನರು ಕಸ ಸುರಿಯುವುದನ್ನು ನಿಲ್ಲಿಸದಿದ್ದರೆ ಕೆರೆಯ ನೀರಿನಲ್ಲಿ ಕ್ರಿಮಿಕೀಟಗಳು ವಾಸವಾಗುತ್ತವೆ. ಕೆರೆಯಲ್ಲಿ ದುರ್ವಾಸನೆ ಆರಂಭವಾಗುವ ಸಾಧ್ಯತೆ ಇದೆ ಎಂಬ ಮಾತು ಜನರಿಂದ ಕೇಳಿ ಬರುತ್ತಿದೆ.
‘ಈಗಾಗಲೇ ಹಳೇಬೀಡು ಜನತೆ ಡೆಂಗೆಯಿಂದ ನರಳಿದ್ದಾರೆ. ಹಳೇಬೀಡಿನ ವಸತಿ ಪ್ರದೇಶದ ಬಳಿ ಬಿದುರು ಕರೆ ಇದ್ದು, ಕೆರೆಯ ಕೂಗಳತೆಯಲ್ಲಿ ಮಲ್ಲಾಪುರ ಹಾಗೂ ನರಸೀಪುರ ಗ್ರಾಮಗಳಿವೆ. ಕೆರೆ ಸ್ವಚ್ಛತೆಗೆ ಕ್ರಮ ಕೈಗೊಳ್ಳದಿದ್ದರೆ ಮೂರು ಗ್ರಾಮದಲ್ಲಿಯೂ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ’ ಎನ್ನುತ್ತಾರೆ ಮಲ್ಲಾಪುರದ ಎಂ.ಕೆ.ಹುಲೀಗೌಡ.
‘ಕೆರೆಯಲ್ಲಿ ಹಳೆಯ ಪ್ಲಾಸ್ಟಿಕ್ ಸಂಗ್ರಹವಾಗಿದ್ದು, ಹೊಸದಾಗಿಯೂ ಪ್ಲಾಸ್ಟಿಕ್ ಬಂದು ಬೀಳುತ್ತಿದೆ. ಪ್ಲಾಸ್ಟಿಕ್ನಿಂದಲೂ ನೀರಿಗೆ ಹಾನಿಯಾಗುತ್ತಿದೆ. ಹಳೆಯ ಕಸ ಕಡ್ಡಿಯೆಲ್ಲ ಕೆರೆ ಕೋಡಿಗೆ ಬಂದು ನಿಲ್ಲುತ್ತಿದೆ. ನರಸೀಪುರ ತಿರುವಿನ ಕೋಡಿಯಲ್ಲಿ ಕೆಲವರು ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಬಿದುರು ಕೆರೆ ನೀರನ್ನು ಮನೆ ಬಳಕೆಗೆ ಕೊಂಡೊಯ್ಯುತ್ತಿದ್ದರು. ಈಗ ಕೆರೆ ಬಳಿ ಹೋಗುವುದಕ್ಕೂ ಸಾಧ್ಯವಿಲ್ಲದಂತಾಗಿದೆ’ ಎನ್ನುತ್ತಾರೆ ರುದ್ರೇಗೌಡ.
ಕೆರೆ ಏರಿಯ ರಸ್ತೆ ಪಕ್ಕದಲ್ಲಿ ಹತ್ತಾರು ಟ್ರ್ಯಾಕ್ಟರ್ ಲೋಡ್ನಷ್ಟು ತ್ಯಾಜ್ಯ ಬಿದ್ದಿದೆ. ಏರಿಯ ರಸ್ತೆ ಬದಿಯಲ್ಲಿ ಚೀಲಗಳಲ್ಲಿ ಕೊಳೆತು ನಾರುವಂತಹ ತ್ಯಾಜ್ಯವನ್ನು ತಂದು ಬಿಸಾಡಲಾಗಿದೆ. ಕಟ್ಟಡದ ತ್ಯಾಜ್ಯ ಸುರಿಯಲು ಕೆರೆ ಪಕ್ಕದ ರಸ್ತೆ ಬದಿಯ ಜಾಗ ಬಳಕೆಯಾಗುತ್ತಿದೆ. ಈ ಪ್ರಕ್ರಿಯೆಯಿಂದ ಸ್ವಚ್ಛ ಪರಿಸರಕ್ಕೆ ಹಾನಿಯಾಗುತ್ತಿದ್ದು, ವಾಹನ ಸಂಚಾರಕ್ಕೂ ತೊಡಕಾಗುತ್ತಿದೆ.
‘ಕೆರೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಸ ಸುರಿಯುವವರನ್ನು ಪತ್ತೆ ಹಚ್ಚಲು 24 ಗಂಟೆ ಕಾಯಲು ಸಾಧ್ಯವಾಗುವುದಿಲ್ಲ. ಜನರು ಎಚ್ಚೆತ್ತುಕೊಂಡರೆ ಮಾತ್ರ ಕೆರೆಯ ಸುರಕ್ಷತೆ ಕಾಪಾಡಲು ಸಾಧ್ಯ. ಬಿದುರು ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ನೂರಾರು ಎಕರೆ ಜಮೀನುಗಳಿಗೆ ಕೆರೆ ನೀರಿನ ಆಸರೆಯಾಗಿದೆ. ಕೆರೆ ಭರ್ತಿಯಾದರೆ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ದಿಸುತ್ತದೆ. ಈ ನಿಟ್ಟಿನಲ್ಲಿ ಬಿದುರುಕೆರೆ ಉಳಿಸಲು ಎಲ್ಲರೂ ಮುಂದಾಗಬೇಕಾಗಿದೆ’ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಉಪಾಧ್ಯಕ್ಷ ಮಲ್ಲಾಪುರದ ಸೀತಾರಾಮು.
ಹಳೇಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಜನರು ಕಸ ಹಾಕುವುದು ಕಂಡು ಬಂದರೆ ಪೋಟೊ ವಿಡಿಯೋ ಮಾಡಿ ಕಳುಹಿಸಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆಎಸ್.ಸಿ. ವಿರೂಪಾಕ್ಷ ಹಳೇಬೀಡು ಪಿಡಿಒ
ಕೆರೆ ಸ್ವಚ್ಛತೆಗೆ ಸಂಬಂಧಿದಂತೆ ಗ್ರಾಮ ಪಂಚಾಯಿತಿಯನ್ನು ಹೊಣೆ ಮಾಡಬಾರದು. ಜನರೂ ಸ್ವಚ್ಛತೆಗೆ ಕೈಜೋಡಿಸಬೇಕು. ಕೆರೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಸ ಹಾಕುವ ಪರಿಪಾಠ ಕೈಬಿಡಬೇಕುಎಚ್.ಎನ್.ಉಮೇಶ್ ಬಿದುರುಕೆರೆ ರಸ್ತೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.