ಹಾಸನ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಹೊಳೆನರಸೀಪುರ ತಾಲ್ಲೂಕು ಘಟಕ, ಮೊಸಳೆಹೊಸಹಳ್ಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಹಾಸನದ ಯುವ ರೆಡ್ ಕ್ರಾಸ್ ಸಂಸ್ಥೆಗಳ ಆಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಹೆಮ್ಮಿಗೆ ಮೋಹನ್ ಮಾತನಾಡಿ, 1942ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ರಕ್ತನಿಧಿ ಕೇಂದ್ರವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಸ್ಥಾಪಿಸಲಾಯಿತು. ದೇಶದಲ್ಲಿ 10 ಲಕ್ಷ ಯೂನಿಟ್ ರಕ್ತದ ಕೊರತೆ ಇದ್ದು, ಇದನ್ನು ನಿವಾರಿಸಲು ನಮ್ಮ ದೇಶದ ಯುವ ಜನತೆ ರಕ್ತದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಸಂಸ್ಥೆ ನಿರ್ದೇಶಕಿ ಡಾ. ಸಾವಿತ್ರಿ ಮಾತನಾಡಿ, ರಕ್ತವನ್ನು ಕೆಂಪು ರಕ್ತಕಣ, ಬಿಳಿರಕ್ತಕಣ, ಪ್ಲೇಟ್ಲೆಟ್, ಪ್ಲಾಸ್ಮಾ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ 4 ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದರು.
ಡಾ.ಚೈತ್ರಾ ಮಾತನಾಡಿ, ರಕ್ತಕ್ಕೆ ಪಾರ್ಯಯ ಮಾರ್ಗ ಇಲ್ಲ. ಯುವಜನತೆ ರಕ್ತದಾನ ಮಾಡುವ ಸಾರ್ಥಕ ಮನೋಭಾವ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ರೆಡ್ಕ್ರಾಸ್ ನಿರ್ದೇಶಕ ಉದಯ್ಕುಮಾರ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಒಂದು ಮಾನವೀಯ ಮೌಲ್ಯಗಳ ಸಂಸ್ಥೆ. ಜಿಲ್ಲೆಯಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದರು.
ಪ್ರಾಂಶುಪಾಲ ಟಿ.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಗಿರೀಶ್, ಚನ್ನರಾಯಪಟ್ಟಣ ತಾಲ್ಲೂಕು ಸಭಾಪತಿ ಭರತ್ಕುಮಾರ್ ಎಚ್.ಜಿ., ಶಬ್ಬೀರ್ ಅಹಮದ್, ಜಯೇಂದ್ರಕುಮಾರ್,ಅವಿನಾಶ್ ಮತ್ತು ಕಾರ್ಯಕ್ರಮ ಸಂಯೋಜಕಿ ಭಾಗ್ಯಲಕ್ಷೀ ಇತರರಿದ್ದರು. ಶಿಬಿರದಲ್ಲಿ ಒಟ್ಟು 45 ಜನ ಯುವಕ-ಯುವತಿಯರು ರಕ್ತದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.