ಆಲೂರು: ‘ತಾಯಿಯ ಎದೆ ಹಾಲಿನಲ್ಲಿ ಮಗುವಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ಹೇರಳವಾಗಿ ಅಡಕವಾಗಿದೆ. 6 ತಿಂಗಳವರೆಗೆ ತಾಯಿ ಹಾಲಲ್ಲದೆ ಶಿಶುವಿಗೆ ಬೇರೆ ಏನನ್ನೂ ನೀಡಬಾರದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಿಸಾರ್ ಫಾತಿಮಾ ತಿಳಿಸಿದರು.
ತಾಲ್ಲೂಕು ಆಸ್ಪತ್ರೆ ಹಾಗೂ ಹಾಸನದ ರಾಜೀವ್ ನರ್ಸಿಂಗ್ ಕಾಲೇಜು ಆಶ್ರಯದಲ್ಲಿ ಇಲ್ಲಿ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹದ ಸಮಾರೋಪದಲ್ಲಿ ಅವರು ಮಾತನಾಡಿದರು. ಸೌಂದರ್ಯ ಪ್ರಜ್ಞೆ, ಉದ್ಯೋಗಿ ಎಂಬ ನೆಪದಲ್ಲಿ ಶಿಶುವಿಗೆ ತಾಯಿ ಹಾಲು ಕೊಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.
ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರಗಳಾದ ಸೊಪ್ಪು, ತರಕಾರಿ, ಮೊಳಕೆಕಟ್ಟಿದ ಕಾಳುಗಳು, ಹಳದಿ ಹಣ್ಣುಗಳು ಹಾಗೂ ಮೊಟ್ಟೆ, ಮೀನು, ಮಾಂಸಗಳನ್ನು ನೀಡಬೇಕು. ಪ್ರತಿ ವರ್ಷ ಆಗಸ್ಟ್ 1 ರಿಂದ ಆಗಸ್ಟ್ 7ನೇ ದಿನಾಂಕದವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ ಮಾಡುತ್ತಿದ್ದು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಎದೆ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದರು.
ತಾಲ್ಲೂಕು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ. ಕಿರಣ್ , ಮಗು ಹುಟ್ಟಿದ ಒಂದು ಗಂಟೆಯೊಳಗೆ ತಾಯಿ ಹಾಲನ್ನು ತಪ್ಪದೆ ಕುಡಿಸಬೇಕು. ಈ ಹಾಲಿನಲ್ಲಿ ಕೊಲೆಸ್ಟಾಮ್ ಇದ್ದು, ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ತಾಲ್ಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಉತ್ತಮ ತಾಯ್ತನ, ಶಿಶು ಆರೈಕೆ ಚಿಂತನೆ ಇದಾಗಿದ್ದು, ಪ್ರತಿ ಕುಟುಂಬವು ಸಹ ಕೈ ಜೋಡಿಸಬೇಕು ಎಂದರು.
ರಾಜೀವ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಸಲೋನಿ, ಟಿಂಟು, ಸಂದ್ಯಾ, ನೇತ್ರಾವತಿ, ಸಿಮ್ರಾನ್, ಶೋಭ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸತೀಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮೋಹನ್, ಮೇಲ್ವಿಚಾರಕರಾದ ಶ್ವೇತಾ, ಪಲ್ಲವಿ, ವಿಜಯಲಕ್ಷ್ಮಿ ಹಾಗೂ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ತಾಯಂದಿರು, ಮತ್ತು ರಾಜೀವ್ ನರ್ಸಿಂಗ್ ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.