
ಚನ್ನರಾಯಪಟ್ಟಣ: ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನವೃದ್ದಿಸಲು ಶಾಲಿನಿ ವಿದ್ಯಾ ಶಾಲೆಯಲ್ಲಿ ಆಹಾರ ಮೇಳ ಆಯೋಜಿಸಲಾಗಿತ್ತು.
ಭಾನುವಾರ ಶಾಲಾ ಆವರಣ ಪ್ರವೇಶಿಸುತ್ತಿದ್ದಂತೆ ಮಿನಿಸಂತೆಯಂತೆ ಭಾಸವಾಯಿತು. ರಸಗುಲ್ಲ, ಚರ್ಮುರಿ, ಫ್ರೂಟ್ಸಲಾಡ್, ಕಬ್ಬಿನಹಾಲು, ಬೆಲ್ಲದಪಾನಕ, ಮಸಾಲೆಜೋಳ, ಒಗ್ಗರಣೆ ಜೋಳ, ಚನ ಪುರಿ, ಪಾನಿಪುರಿ, ಸಮೋಸ, ಅವಲಕ್ಕಿ, ಚಕ್ಕುಲಿ, ನಿಪ್ಪಟ್ಟು, ರವೆ ಉಂಡೆ, ಕೊಬ್ಬರಿ ಮಿಠಾಯಿ, ಸಿಹಿಪರೋಟ, ಆಲೂಕಬಾಬ್, ಗೋಬಿಮಂಚೂರಿ, ಜಾಮೂನು, ಬೇಲ್ಪುರಿ, ಕಲ್ಲಂಗಡಿ ಹೋಳಿಗೆ, ಕಜ್ಜಾಯ, ಕಡ್ಲೆಮಿಠಾಯಿ, ಸಿಹಿಸಮೋಸ, ಬಾಳೆ ಹಣ್ಣು, ಮಸಾಲೆ ಮಂಡಕ್ಕಿ ಮತ್ತು ಐಸ್ ಕ್ರೀಮ್ ತಿನ್ನಲು ವಿದ್ಯಾರ್ಥಿಗಳು ಮುಗಿಬಿದ್ದರು.
‘ಕಡಿಮೆ ಬೆಲೆಗೆ ತಿಂಡಿ, ತಿನಿಸು ತಿನ್ನಲು ಬನ್ನಿ’ ಎಂದು ಗ್ರಾಹಕರನ್ನು ಸೆಳೆಯುತ್ತಿದ್ದರು. ಕೆಲವರು ಸ್ಥಳದಲ್ಲೇ ಖಾದ್ಯ ತಯಾರಿಸುತ್ತಿದ್ದರು. ಚಿಕನ್ ಬಿರಿಯಾನಿ, ಕುಷ್ಕಮೊಟ್ಟೆ, ಕಬಾಬ್, ಘೀರೈಸ್, ಚಿಕನ್ ರೋಲ್, ಚಿತ್ರಾನ್ನ ಸೇರಿದಂತೆ ವಿವಿಧ ಖಾದ್ಯಗಳನ್ನು, ವಿದ್ಯಾರ್ಥಿಗಳು, ಪೋಷಕರು ಖರೀದಿಸಿ ರುಚಿ ಸವಿದರು. ಎಳ್ಳಿಕಾಯಿಜ್ಯೂಸ್, ಸೋಡಾಜ್ಯೂಸ್, ಮಸಾಲೆ ಮಜ್ಜಿಗೆ ಕುಡಿದರು. ತಿಂಡಿ, ತಿನ್ನಿಸು, ಖಾದ್ಯಗಳ ಮಾರಾಟದ ಭರಾಟೆ ಜೋರಾಗಿತ್ತು. ಸ್ಟಾಲ್ಗಳ ಮುಂದೆ ದರಪಟ್ಟಿ ಹಾಕಲಾಗಿತ್ತು. ಮತ್ತೊಂದು ಬದಿಯಲ್ಲಿ ತರಕಾರಿ ಮಾರಾಟಮಾಡಿದರು.
ಡಿವೈಎಸ್ಪಿ ಕುಮಾರ್.ಎನ್. ಮಾತನಾಡಿದರು. ಪರಿಸರವಾದಿ ಸಿ.ಎನ್. ಅಶೋಕ್, ಕುವೆಂಪು ವೇದಿಕೆಯ ಅದ್ಯಕ್ಷ ಕುಂಬಾರಹಳ್ಳಿರಮೇಶ್, ಮಕ್ಕಳ ಸಾಹಿತ್ಯ ಪರಿಷತ್ತುಪದಾಧಿಕಾರಿಗಳಾದ ಎಚ್.ವಿ. ಸಿದ್ದೇಶ್, ಗಂಗಾಧರ್, ಪುರಸಭೆಯ ಮಾಜಿ ಸದಸ್ಯೆ ರಾಣಿ ಭಾಗವಹಿಸಿದ್ದರು.
ಆತ್ಮವಿಶ್ವಾಸ ಹೆಚ್ಚಳ
ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಮಾತನಾಡಿ ‘ ಆಹಾರ ಮೇಳ ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಉದ್ಯಮ ನಿರ್ವಹಣೆ ಶೈಲಿ ವ್ಯವಹಾರಿಕ ಜಾಣ್ಮೆ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿ. ಯಾವಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಇದೆ ಎಂಬುದನ್ನು ಪೋಷಕರು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.