
ಹಾಸನ: ‘ಮನೆಗೆ ಸೇರಿದ ಕಾಂಪೌಂಡ್ ಅನ್ನು ದೇವರಾಜ್ ಧ್ವಂಸಗೊಳಿಸಿದ್ದಾರೆ’ ಎಂದು ಆರೋಪಿಸಿ ನಟ ಯಶ್ ತಾಯಿ ಪುಷ್ಪಾ ಅವರು ಶನಿವಾರ ಹಾಸನ ಬಡಾವಣೆಯಲ್ಲಿ ದೂರು ನೀಡಿದ್ದು, ಅತಿಕ್ರಮ ಪ್ರವೇಶ, ಕಳ್ಳತನ ಹಾಗೂ ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.
‘ಇಲ್ಲಿನ ವಿದ್ಯಾನಗರದಲ್ಲಿರುವ ಮನೆಯ ಪಕ್ಕದ ಜಾಗ, ನಮ್ಮ ಸ್ವಂತ ಸ್ವತ್ತು’ ಎಂದು ಪ್ರತಿಪಾದಿಸಿದ ಪುಷ್ಪಾ, ‘ಜಾಗವನ್ನು ಆರು ವರ್ಷಗಳ ಹಿಂದೆ ಖರೀದಿಸಿದ್ದೆವು. ನಗರಸಭೆಯ ಇ-ಖಾತೆಯೂ ನಮ್ಮ ಹೆಸರಲ್ಲಿದ್ದು, ಸಂಪೂರ್ಣ ದಾಖಲೆಗಳಿವೆ. ನ್ಯಾಯಾಲಯದಿಂದ ನೋಟಿಸ್ ಬಂದಿಲ್ಲ’ ಎಂದು ತಿಳಿಸಿದರು.
‘ನಾವು ಇಲ್ಲದ ಸಮಯದಲ್ಲಿ ದೇವರಾಜ್ ಅತಿಕ್ರಮ ಪ್ರವೇಶ ಮಾಡಿ ಬೆಲೆಬಾಳುವ ವಸ್ತುಗಳನ್ನು ನಾಶಪಡಿಸಿದ್ದಾನೆ. ಅವನನ್ನು ಏಕೆ ಬಂಧಿಸಿಲ್ಲ’ ಎಂದು ಪ್ರಶ್ನಿಸಿದರು. ದೇವರಾಜ್ ಅವರನ್ನು ಠಾಣೆಗೆ ಕರೆಸಿದ ಪೊಲೀಸರು ವಿಚಾರಣೆ ನಡೆಸಿದರು.
ಲಕ್ಷಮ್ಮ ಅವರಿಂದ ಜಿಪಿಎ ಪಡೆದಿರುವ ದೇವರಾಜ್ ಅವರು, ಕಳೆದ ಭಾನುವಾರ ಜೆಸಿಬಿಯಿಂದ ಕಾಂಪೌಂಡ್ ಹಾಗೂ ಶೆಡ್ ಅನ್ನು ತೆರವುಗೊಳಿಸಿದ್ದರು. ‘ಕೋರ್ಟ್ ಆದೇಶದಂತೆ ಅತಿಕ್ರಮಣ ತೆರವು ಮಾಡಲಾಗಿದೆ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.