ADVERTISEMENT

ಹಾಸನ ಜಿಲ್ಲೆಯಲ್ಲಿ ಬದಲಾವಣೆ ಪರ್ವ ಆರಂಭ: ರಾಜಣ್ಣ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 8:22 IST
Last Updated 5 ಡಿಸೆಂಬರ್ 2024, 8:22 IST
   

ಹಾಸನ: ಜಿಲ್ಲೆಯಲ್ಲಿ ಸುಮಾರು 25 ವರ್ಷಗಳ ಕಾಲ ಕಾಂಗ್ರೆಸ್‌ ಭವಿಷ್ಯ ಇಲ್ಲದಂತಹ ಕಾಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಕಾಂಗ್ರೆಸ್‌ ಶ್ರೇಯಸ್‌ ಪಟೇಲ್‌ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಶಕ್ತಿ ಹೆಚ್ಚಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ಹಾಸನ ಎಂದರೇ ಒಬ್ಬರದ್ದೇ ಸಾಮ್ರಾಜ್ಯ ಎನ್ನುವ ಭಾವನೆ ಇತ್ತು. ಅದೆಲ್ಲವನ್ನೂ ಹುಸಿ ಮಾಡಿದವರು ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಎಂದರು.

ಈ ಕಾರ್ಯಕ್ರಮ ಯಾರದ್ದೇ ವಿರುದ್ಧ ಅಲ್ಲ. ಇದು ಪಕ್ಷದ ಸಮಾವೇಶ. ರಾಜ್ಯದಲ್ಲಿರುವ ತಳಸಮುದಾಯಗಳ ಜಾಗೃತಿ ಸಮಾವೇಶ ಇದಾಗಿದೆ. ರಾಜ್ಯದಲ್ಲಿ ಧ್ವನಿ ಇಲ್ಲದಿರುವ ತಳ ಸಮುದಾಯಗಳು ಕಾಂಗ್ರೆಸ್‌ ಜೊತೆಗೆ ನಿರಂತರವಾಗಿ ನಿಂತಿವೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಸದೃಢವಾಗಬೇಕು. ಪ್ರಮುಖವಾಗಿ ಹಾಸನ ಜಿಲ್ಲಾ ಪಂಚಾಯಿತಿಯನ್ನು ಕೈವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ADVERTISEMENT

ಸಚಿವರಾದ ಡಾ.ಜಿ. ಪರಮೇಶ್ವರ್‌, ಪ್ರಿಯಾಂಕ ಖರ್ಗೆ, ಲಕ್ಷ್ಮಿ ಹೆಬ್ಬಾಳಕರ, ಸತೀಶ್‌ ಜಾರಕಿಹೊಳಿ, ಬಿ.ಝಡ್‌. ಜಮೀರ್‌ ಅಹಮ್ಮದ್‌ ಖಾನ್‌, ವೆಂಕಟೇಶ್‌, ಕೆ.ಎನ್‌. ರಾಜಣ್ಣ, ಚೆಲುವರಾಯಸ್ವಾಮಿ, ಕೆ.ಎಚ್‌.ಮುನಿಯಪ್ಪ, ಡಾ.ಎಚ್‌.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್‌, ಬೈರತಿ ಸುರೇಶ್‌, ರಹೀಂ ಖಾನ್‌, ಶಿವರಾಜ ತಂಗಡಗಿ, ಭೋಸರಾಜ್‌, ಎಚ್‌.ಕೆ. ಪಾಟೀಲ, ಡಾ.ಶರಣಪ್ರಕಾಶ್‌ ಪಾಟೀಲ, ಆರ್‌.ಬಿ. ತಿಮ್ಮಾಪುರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ, ವಿಧಾನ ಪರಿಷತ್‌ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಐವನ್‌ ಡಿಸೋಜ, ಸಂಸದರಾದ ಜಿ.ಸಿ. ಚಂದ್ರಶೇಖರ್‌, ಸುನೀಲ್‌ ಬೋಸ್‌, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಸೌಮ್ಯರೆಡ್ಡಿ ಭಾಗವಹಿಸಿದ್ದರು.

ಮಾಜಿ ಶಾಸಕ ಬಿ.ವಿ. ಕರೀಗೌಡ ಜೆಡಿಎಸ್‌ ತೊರೆದು, ಕಾಂಗ್ರೆಸ್‌ ಸೇರ್ಪಡೆಯಾದರು. ಸಂಸದ ಶ್ರೇಯಸ್‌ ಪಟೇಲ್‌ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.