ADVERTISEMENT

‘ಹಕ್ಕು ಚಲಾಯಿಸುವ ಮುನ್ನ ಕರ್ತವ್ಯ ನಿಭಾಯಿಸಿ’; ನ್ಯಾಯಧೀಶೆ ಹೇಮಾವತಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 5:48 IST
Last Updated 28 ನವೆಂಬರ್ 2025, 5:48 IST
ಹಾಸನದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಿಣಿ ಮಾತನಾಡಿದರು
ಹಾಸನದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಿಣಿ ಮಾತನಾಡಿದರು   

ಹಾಸನ: ‘ಸಂವಿಧಾನವು ನಮ್ಮ ಆಶೋತ್ತರಗಳನ್ನು ಈಡೇರಿಸಿದೆ. ಹಕ್ಕುಗಳನ್ನು ಚಲಾಯಿಸುವ ಮುನ್ನ ನಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು. ಪ್ರತಿಯೊಬ್ಬ ಭಾರತೀಯರೂ ಸಂವಿಧಾನವನ್ನು ಗೌರವಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಹೇಮಾವತಿ ಹೇಳಿದರು.

ಜಿಲ್ಲಾ ನ್ಯಾಯಾಂಗ, ವಕೀಲರ ಸಂಘ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಬುಧವಾರ ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನವು ಭಾರತೀಯರಾದ ನಮಗೆ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಎಲ್ಲವನ್ನೂ ನೀಡಿದೆ. ನಾವು ಸಂವಿಧಾನದ ಕೊಡುಗೆಗೆ ಬದ್ಧರಾಗಿ, ಸಂವಿಧಾನವನ್ನು ಗೌರವಿಸಬೇಕಿದೆ. ಅದರ ಘನತೆ ಎತ್ತಿ ಹಿಡಿದಾಗ ಮಾತ್ರವೇ ಸಂವಿಧಾನ ನಮಗೆ ನೀಡಿರುವ ಎಲ್ಲ ಅಶೋತ್ತರಗಳನ್ನು ನಾವು ಈಡೇರಿಸಿದಂತಾಗುತ್ತದೆ’ ಎಂದರು.

ADVERTISEMENT

5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರವಿಕುಮಾರ್ ಎಚ್.ಆರ್. ಅವರು ಸಂವಿಧಾನ ರಚನೆಯ ಆರಂಭಿಕ ಬೆಳವಣಿಗೆಗಳು, ರಚನೆಯ ಹಾದಿ, ಸಂವಿಧಾನದ ಲಕ್ಷಣಗಳು, ಪ್ರಸ್ತಾವನೆಯ ಭಾಗದ ವಿಶ್ಲೇಷಣೆಯನ್ನು ಮಾಡಿ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯ ಬಗ್ಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಕಾರ್ಲೆ ಮೊಗಣ್ಣಗೌಡ ಮಾತನಾಡಿ, ‘ಸಂವಿಧಾನವು ದೇಶಕ್ಕೆ ಕೊಟ್ಟ ಕೊಡುಗೆಯಿಂದಾಗಿ ಸ್ತ್ರೀ ಸಮಾನತೆ, ವಿವಿಧತೆಯಲ್ಲಿ ಏಕತೆ, ಎಲ್ಲವನ್ನು ಒಳಗೊಂಡು ದೇಶವು ಜಗತ್ತಿನ ಆರ್ಥಿಕತೆಯಲ್ಲಿ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿದೆ. ಇದು ನಮ್ಮ ಸಂವಿಧಾನದ ಶಕ್ತಿ’ ಎಂದು ತಿಳಿಸಿದರು.

ನ್ಯಾಯಾಧೀಶರಾದ ಶೈಲಾ ಬಿ.ಎಂ., ಹಿದಾಯತ್ ಉಲ್ಲಾ ಶರೀಫ್, ಆನಂದ, ದೇವರಾಜು ಎಚ್. ಎಂ., ಮೊಹಮ್ಮದ್ ಅಶ್ರಫ್ ಹ್ಯಾರಿಸ್, ಹಿರಿಯ ಮತ್ತು ಸಿವಿಲ್ ನ್ಯಾಯಾಧೀಶರು ಪಾಲ್ಗೊಂಡಿದ್ದರು. ಹಿರಿಯ ಸಿವಿಲ್‌ ನ್ಯಾಯಾಧೀಶೆ ದಾಕ್ಷಾಯಿಣಿ ಜಿ.ಕೆ. ಸ್ವಾಗತಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಗಿರಿಗೌಡ ವಂದಿಸಿದರು.

ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು

ಮಲೆನಾಡು ಕಾಲೇಜಿನಲ್ಲಿ ಸಂವಿಧಾನ ದಿನ ಹಾಸನ: ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಜೆ. ಅಮರೇಂದ್ರ ಮಾತನಾಡಿ ಭಾರತೀಯರು ಸಂವಿಧಾನಕ್ಕೆ ಗೌರವ ನೀಡುತ್ತೇವೆ. ಸಾಮಾಜಿಕ ಅರ್ಥಿಕ ಮತ್ತು ರಾಜಕೀಯ ನ್ಯಾಯ ವಿಚಾರ ಅಭಿವ್ಯಕ್ತಿ ನಂಬಿಕೆ ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಸ್ಥಾನ ಮಾನ ಮತ್ತು ಅವಕಾಶಗಳ ಸಮಾನತೆ ದೊರೆಯುವಂತೆ ಮಾಡಿದೆ. ವ್ಯಕ್ತಿ ಗೌರವ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಭ್ರಾತೃತ್ವ ಭಾವನೆ ಮೂಡಿಸುವುದಕ್ಕೆ ದೃಢ ಸಂಕಲ್ಪ ಮಾಡಬೇಕು ಎಂದರು. ಕಾಲೇಜು ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಅಧಿಕಾರಿ ಡಾ. ಇಂದಿರಾ ಬಹದ್ದೂರು ಸಂವಿಧಾನದ ಪೀಠಿಕೆ ಓದುವ ಮೂಲಕ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜು ನಿರ್ದೇಶಕ ಡಾ.ಎಸ್. ಪ್ರದೀಪ್ ನಿವೃತ್ತ ಪ್ರಾಂಶುಪಾಲ ಡಾ.ಎ.ಜೆ. ಕೃಷ್ಣಯ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಹ ಅಧಿಕಾರಿ ಡಾ.ಶಿವಶಂಕರ್ ವೇದಿಕೆಯಲ್ಲಿದ್ದರು. ಕಾಲೇಜು ಡೀನ್‌ ವಿಭಾಗಗಳ ಮುಖ್ಯಸ್ಥರು ಪ್ರಾಧ್ಯಾಪಕರು ನೌಕರರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.