
ಸಕಲೇಶಪುರ: ‘ನಮ್ಮ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಪರಕೀಯರು ನಮ್ಮನ್ನು ಒಡೆದು ಆಳಿದರು. ಸ್ವಾತಂತ್ರ್ಯದ ನಂತರವೂ ಸಹ ರಾಜಕೀಯ ಪಕ್ಷಗಳು ಓಟಿಗಾಗಿ ಧರ್ಮ, ಜಾತಿಗಳ ನಡುವೆ ಅಡ್ಡ ಗೋಡೆಗಳನ್ನು ಕಟ್ಟಿ ಅಧಿಕಾರ ನಡೆಸುತ್ತಿದ್ದಾರೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮುಂಗೇಶ್ ಬೆಂಡೆ ಹೇಳಿದರು.
ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಬುಧವಾರ ಶೋಭಾಯಾತ್ರೆಯ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಹಿಂದೂ ಏಕತೆ, ಸಂಸ್ಕೃತಿ ಮತ್ತು ಸಂಘಟನೆ ಕುರಿತು ಪ್ರತಿಯೊಬ್ಬ ಹಿಂದೂ ಇಂದು ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯವಿದೆ. ಸ್ವಾತಂತ್ರ್ಯ ನಂತರವೂ ಹಿಂದೂ ಸಮಾಜದ ಸ್ಥಿತಿ ಬದಲಾಗಿಲ್ಲ. ರಾಮಮಂದಿರ ಆಂದೋಲನದ ಮೂಲಕ ದೇಶದಾದ್ಯಂತ ಹಿಂದೂ ಸಮಾಜದಲ್ಲಿ ಉಂಟಾದ ಜಾಗೃತಿ ಉಂಟಾಯಿತು. 1984ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ ಆರಂಭಿಸಿದ ರಾಮಮಂದಿರ ಮುಕ್ತಿ ಆಂದೋಲನದಿಂದ ಇಡೀ ದೇಶದ ಜನರಿಗೆ ರಾಮಮಂದಿರ ನಮ್ಮದೆಂಬ ಭಾವ ಮೂಡಿತು’ ಎಂದರು.
ವಜ್ರದೇಹಿ ಮಠದ ರಾಜಶೇಖರನಂದಾ ಸ್ವಾಮೀಜಿ ಮಾತನಾಡಿ, ‘ಹಿಂದೂ ಸಮಾಜ ಬಲಿಷ್ಠವಾಗಬೇಕಾದರೆ ಸಂಘಟನೆ ಮತ್ತು ಆತ್ಮವಿಶ್ವಾಸ ಅಗತ್ಯವಿದೆ’ ಎಂದರು.
ವಕೀಲ ಷಣ್ಮುಖ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಜಂಬರಡಿ ಲೋಹಿತ್, ಸತ್ಯನಾರಾಯಣ ಗುಪ್ತ, ಅನ್ವಯಾ ಪ್ರಶಾಂತ್, ನಂದನ್ ರಘು ಇದ್ದರು. ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ರಾಜಬೀದಿಯಲ್ಲಿ ಶೋಭಾಯಾತ್ರೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.