ಹೊಳೆನರಸೀಪುರ:‘ಇನ್ಸೂರೆನ್ಸ್ ಇಲ್ಲದ ವಾಹನ ಚಲಾಯಿಸಿ, ಗದ್ದೆ, ಮನೆಗಳನ್ನು ಕಳೆದುಕೊಂಡ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ. ಇಂತಹ ವಾಹನಗಳಿಂದ ಆಗುವ ನಷ್ಟವನ್ನು ವಾಹನದ ಮಾಲೀಕರೆ ಕಟ್ಟಿಕೊಡಬೇಕಾಗುತ್ತದೆ’ಎಂದು ಸರ್ಕಲ್ ಇನ್ಸ್ಪೆಕ್ಟರ್ ಪ್ರದೀಪ್ ಎಚ್ಚರಿಸಿದರು.
ಶುಕ್ರವಾರ ರಾತ್ರಿ ಪಟ್ಟಣದಲ್ಲಿ ಕಾರ್ಯಾಚರಣೆ ನಡೆಸಿ ಇನ್ಸೂರೆನ್ಸ್, ಡ್ರೈವಿಂಗ್ ಲೈಸೆನ್ಸ್ ಇಲ್ಲದ, ಹೆಲ್ಮೆಟ್ ಧರಿಸದ 80 ವಾಹನಗಳನ್ನು ಹಿಡಿದು ಪ್ರತೀ ಬೈಕಿಗೆ 500 ರೂ ದಂಡ ವಿಧಿಸಿ ವಾಹನಗಳನ್ನು ಮಾಲೀಕರ ವಶಕ್ಕೆ ನೀಡುವ ಮುನ್ನ ನಿಯಮದ ಬಗ್ಗೆ ವಿವರಿಸಿದರು.
‘ಎಷ್ಟೋ ಪ್ರಕರಣಗಳಲ್ಲಿ ಇಂತಹ ಪ್ರಕರಣಗಳಲ್ಲಿ ಸಿಲುಕಿಕೊಂಡವರು ಮನೆ, ಗದ್ದೆ ಮಾರಿ ನೊಂದವರಿಗೆ ಪರಿಹಾರ ನೀಡಿದ್ದಾರೆ. ಇಂಥಹ ಪರಿಸ್ಥಿತಿ ನಿಮಗೆ ಬರಬಾರದು ಎನ್ನುವ ಉದ್ದೇಶದಿಂದ ನಾವು ಇಂತಹ ಕಾರ್ಯಾಚರಣೆ ನಡೆಸುತ್ತೇವೆ. ಆದ್ದರಿಂದ, ನೀವು ನಿಮ್ಮ ವಾಹನಗಳಿಗೆ ಇನ್ಸೂರೆನ್ಸ್ ಮಾಡಿಸಿಕೊಳ್ಳದೆ ವಾಹನ ಓಡಿಸಬಾರದು’ಎಂದರು.
‘ಸಂಚಾರಿ ನಿಯಮಗಳಿರುವುದು ಪೊಲೀಸರು ಹಿಡಿದು ದಂಡ ಹಾಕಲಿ ಎನ್ನುವ ಉದ್ದೇಶದಿಂದ ಅಲ್ಲ. ನಿಮ್ಮ ಸುರಕ್ಷತೆಗಾಗಿ. ನೀವು ನಿಯಮಗಳನ್ನು ಪಾಲಿಸದ ಕಾರಣ ನಾವು ಅನಿವಾರ್ಯವಾಗಿ ಇಂತಹ ಕಟ್ಟು ನಿಟ್ಟನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಪೋಷಕರು ಚಾಲನಾ ಪರವಾನಿಗೆ ಇಲ್ಲದ ಅಪ್ರಾಪ್ತ ಬಾಲಕರಿಗೆ ವಾಹನಗಳನ್ನು ನೀಡಬೇಡಿ. ನೀಡಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ವೀಲಿಂಗ್ ಮಾಡವುದು, ಕರ್ಕಶ ಶಬ್ದಮಾಡುವ ಸೈಲೆನ್ಸರ್ ಅಳವಡಿಸಿ ವಾಹನ ಓಡಿಸುವುದೂ ಸೇರಿದಂತೆ ಯಾವುದೇ ನಿಯಮಬಾಹಿರ ಚಟುವಟಿಕೆಗಳಿಗೆ ಅವಕಾಶ ಇಲ್ಲ’ ಎಂದು ಎಚ್ಚರಿಸಿದರು. ನಗರಠಾಣೆ ಎಸ್.ಐ. ಅರುಣ್ ಹಾಗು ಸಿಬ್ಬಂದಿ ಜೊತೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.