ADVERTISEMENT

ಸಕಲೇಶಪುರ: ಕಾಡಾನೆ, ಕಾಡುಕೋಣಗಳ ನಿರಂತರ ದಾಳಿಗೆ ಬೇಕಿದೆ ಶಾಶ್ವತ ಪರಿಹಾರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 5:37 IST
Last Updated 27 ಡಿಸೆಂಬರ್ 2025, 5:37 IST
ಸಕಲೇಶಪುರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಸರ್ಕಾರದ ಸಹಾಯಧನದಲ್ಲಿ ವಿತರಣೆ ಮಾಡಲು ಇಡಲಾಗಿದ್ದ ಯಂತ್ರೋಪಕರಣಗಳನ್ನು ರೈತರು ವೀಕ್ಷಿಸಿದರು
ಸಕಲೇಶಪುರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಸರ್ಕಾರದ ಸಹಾಯಧನದಲ್ಲಿ ವಿತರಣೆ ಮಾಡಲು ಇಡಲಾಗಿದ್ದ ಯಂತ್ರೋಪಕರಣಗಳನ್ನು ರೈತರು ವೀಕ್ಷಿಸಿದರು   

ಸಕಲೇಶಪುರ: ಕಾಡಾನೆ, ಕಾಡುಕೋಣ ವನ್ಯಜೀವಿಗಳ ನಿರಂತರ ದಾಳಿ, ಅತಿವೃಷ್ಟಿ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಇವುಗಳ ನಡುವೆ ಮಲೆನಾಡು ಭಾಗದ ರೈತರು, ಬೆಳೆಗಾರರ ಬದುಕು ಸಂಕಷ್ಟದಲ್ಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಕೃಷಿ ಇಲಾಖೆ, ಕೃಷಿಕ ಸಮಾಜ, ತಾಲ್ಲೂಕು ಕೃಷಿ ಉತ್ಪನ್ನಗಳ ಸಹಕಾರ ಮಾರಾಟ ಸಂಘ, ಕೃಷಿ ಪರಿಕರಗಳ ಮಾರಾಟಗಾರರ ಸಂಘ ಆಶ್ರಯದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಸರ್ಕಾರದ ಸಹಾಯಧನದಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು. ಪ್ರತಿ ವಸ್ತುವಿಗೂ  ಮಾರುಕಟ್ಟೆಯಲ್ಲಿ ನಿಗದಿತ ಬೆಲೆ ಇದೆ. ಆದರೆ  ರೈತರು ಬೆಳೆದ ಬೆಳೆಗೆ  ನಿಗದಿತ ಬೆಲೆ ಇಲ್ಲದೆ, ನಷ್ಟದಲ್ಲಿ ಇರಬೇಕಾಗಿರುವುದು ನಿಜಕ್ಕೂ ಅನ್ಯಾಯ ಎಂದರು.

ಕಾಡಾನೆ ಸಮಸ್ಯೆಗೆ  ಶಾಶ್ವತ ಪರಿಹಾರ ರೂಪಿಸಬೇಕಿದ್ದು, ಸಮಸ್ಯೆ ಆ ಮಟ್ಟಕ್ಕೆ ಉಲ್ಬಣಿಸಿದೆ. ಜೀವ ಹಾಗೂ ಬೆಳೆ ಹಾನಿ ನಡೆಯುತ್ತಲೇ ಇದ್ದರೂ ರಾಜ್ಯ ಸರ್ಕಾರ  ಗಂಭೀರವಾಗಿ ಪರಿಗಣಿಸದೆ ಇರುವುದು ಸರಿಯಲ್ಲ.  ಹೋರಾಟ ಮಾಡಿದರೆ, ಹೋರಾಟಗಾರರ ವಿರುದ್ಧ  ಪೊಲೀಸರು ಪ್ರಕರಣ ದಾಖಲಿಸಿ ಹತ್ತಿಕ್ಕುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ADVERTISEMENT

ತಾಲ್ಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಮುರುಳಿ ಮೋಹನ್ ಮಾತನಾಡಿ,  ಈ ಭಾಗದಲ್ಲಿ ಸಣ್ಣ ಹಿಡುವಳಿದಾರರಿದ್ದು  ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರ ಸಮಸ್ಯೆಗಳು ಬಗೆಹರಿಯುವಂತ ನಿಟ್ಟಿನಲ್ಲಿ ಸರ್ಕಾರಗಳು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ತಾಲ್ಲೂಕು ಕೃಷಿ ಸಹಾಯಕ ಅಧಿಕಾರಿ ಯು. ಎಂ ಪ್ರಕಾಶ್ ಕುಮಾರ್ ಮಾತನಾಡಿ, ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್   ಜನ್ಮದಿನ ಡಿಸೆಂಬರ್ 23ನ್ನು ದೇಶದಲ್ಲಿ ಪ್ರತಿವರ್ಷ ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ. ಎರಡು ವರ್ಷಗಳಿಂದ ಸಕಲೇಶಪುರ ಕೃಷಿ ಇಲಾಖೆಯು ಸರ್ಕಾರದ ಸವಲತ್ತುಗಳು ನೇರವಾಗಿ ರೈತರಿಗೆ ಸಿಗುವ ನಿಟ್ಟಿನಲ್ಲಿ ಪಾರದರ್ಶಕತೆಯನ್ನು ಮಾಡುತಿದೆ.  ಇನ್ನೂ 221 ಹಳ್ಳಿಗಳಲ್ಲಿನ 6000 ರೈತರಿಗೆ ಏಕಕಾಲದಲ್ಲಿ ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ತಲುಪಿಸಲಾಗುತ್ತಿದೆ ಎಂದರು.

ಜೈ ಮಾರುತಿ ದೇವರಾಜ್‌, ಹೆತ್ತೂರು ಮಹೇಶ್‌, ಎಂ.ಬಿ. ರಾಜೀವ್‌, ಅಗನಿ ಸೋಮಶೇಖರ್ ಹಾಗೂ  ಇದ್ದರು.

ಇಂದು ಲಂಚ, ಮತ್ತೊಬ್ಬರಿಗೆ ಮೋಸ

ವಂಚನೆ ಮಾಡದೇ ಪ್ರಾಮಾಣಕವಾಗಿ ಬದುಕು ಕಟ್ಟಿಕೊಂಡಿರುವ ಉದ್ಯಮ ಎಂದರೆ ಅದು ಕೃಷಿ ಮಾತ್ರ ಎಂದರು. ಸರ್ಕಾರದಿಂದ ರೈತರಿಗೆ ದೊರೆಯುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಇಲ್ಲಿಯ ಕೃಷಿ ಇಲಾಖೆ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.   ನಾವು ಪ್ರತಿನಿತ್ಯ ತಿನ್ನುವ ಅನ್ನದಲ್ಲಿ ರೈತರ ಬೆವರಿದೆ. ಇಂತಹ ರೈತರನ್ನು ನಾವು ಪೂಜಿಸಬೇಕು. ಯಾವುದೇ ಉದ್ಯಮವನ್ನು ಪ್ರಾರಂಭಿಸಿದ ವ್ಯಕ್ತಿಗಳು ಉದ್ಯಮದಲ್ಲಿ ನಷ್ಟ ಅನುಭವಿಸಿದರೆ ಆ ಉದ್ಯೋಗವನ್ನು ತೊರೆಯುತ್ತಾರೆ. ಆದರೆ ರೈತರು ಎಷ್ಟೇ ನಷ್ಟವಾದರೂ ಕೂಡ ತಮ್ಮ ಉದ್ಯಮವನ್ನು ಬಿಡದೆ ಮುಂದುವರಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.