ADVERTISEMENT

ಕೊಣನೂರು | ಆನೆಗಳಿಗಿಲ್ಲ ಲಗಾಮು: ಬೆಳೆಯೂ ಉಳಿದಿಲ್ಲ, ಪರಿಹಾರವೂ ಸಿಗುತ್ತಿಲ್ಲ

ಬಿ.ಪಿ.ಗಂಗೇಶ್‌
Published 29 ಸೆಪ್ಟೆಂಬರ್ 2025, 4:04 IST
Last Updated 29 ಸೆಪ್ಟೆಂಬರ್ 2025, 4:04 IST
ಕೊಣನೂರು ಹೋಬಳಿಯ ತರಿಗಳಲೆ ಗ್ರಾಮದ ಬಳಿ ಕಾಡಿನಿಂದ ಆನೆಗಳು ಹೊರ ಬರದಂತೆ ನಿರ್ಮಿಸಿರುವ ಕಂದಕಕ್ಕೆ ಮಣ್ಣು ಮುಚ್ಚಿಕೊಂಡು ಹೊರಗೆ ಬರಲು ಆನೆಗಳು ಮಾಡಿಕೊಂಡಿರುವ ದಾರಿ.
ಕೊಣನೂರು ಹೋಬಳಿಯ ತರಿಗಳಲೆ ಗ್ರಾಮದ ಬಳಿ ಕಾಡಿನಿಂದ ಆನೆಗಳು ಹೊರ ಬರದಂತೆ ನಿರ್ಮಿಸಿರುವ ಕಂದಕಕ್ಕೆ ಮಣ್ಣು ಮುಚ್ಚಿಕೊಂಡು ಹೊರಗೆ ಬರಲು ಆನೆಗಳು ಮಾಡಿಕೊಂಡಿರುವ ದಾರಿ.   

ಕೊಣನೂರು: ಆನೆಗಳ ಹಾವಳಿಯಿಂದ ಬೇಸತ್ತಿರುವ ರೈತರು ಬೆಳೆದ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ರಾತ್ರಿಯಾಗುತ್ತಿದ್ದಂತೆಯೇ ಜಮೀನಿಗೆ ಗಂಪುಗುಂಪಾಗಿ ನುಗ್ಗುವ ಆನೆಗಳು, ಬೆಳೆದು ನಿಂತಿರುವ ಬೆಳೆಗಳನ್ನು ಮನಬಂದಂತೆ ತುಳಿದು, ತಿಂದು ಹೋಗುತ್ತಿವೆ. ಇದನ್ನು ಕಂಡು ಏನು ಮಾಡಲಾಗದೇ,  ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಆಗದೇ, ಹಾಳಾದ ಬೆಳೆಗಳಿಗೆ ಪರಿಹಾರವನ್ನೂ ಪಡೆಯಲಾಗದೇ ಚಿಂತಾಕ್ರಾಂತರಾಗಿದ್ದಾರೆ. 

ಕೊಡಗಿನ ಅರಣ್ಯದಂಚಿನಲ್ಲಿರುವ ಕೊಣನೂರು ಹೋಬಳಿಯ ತರಿಗಳಲೆ ಗ್ರಾಮದ ರೈತರ ಪಾಡು ಇದಾಗಿದ್ದು, ಸಂಜೆ ಆಯಿತೆಂದರೆ ಕೆಲವರು ಆನೆಗಳು ತಮ್ಮ ಜಮೀನಿಗೆ ಬರದಂತೆ ಕಾಯಲು ಹೊರಡುವುದು, ಬೆಳಗಾಗುತ್ತಿದ್ದಂತೆ ಹಾನಿಯಾಗಿರುವ ಬೆಳೆಗಳನ್ನು ನೋಡಿ ಬೇಸರ ವ್ಯಕ್ತಪಡಿಸುವುದು ಸಾಮಾನ್ಯದ ವಿಷಯವಾಗಿದೆ.

ADVERTISEMENT

ತರಿಗಳಲೆ ಗ್ರಾಮದ ಕೊಡಗಿನ ನಿಡ್ತ ವಲಯ ಅರಣ್ಯಕ್ಕೆ ಹೊಂದಿಕೊಂಡಂತಿರುವ ಜಮೀನಿನಲ್ಲಿ ಕೃಷಿ ಮಾಡುವ ರೈತರ ಪ್ರತಿವರ್ಷದ ಪಾಡಾಗಿದ್ದು, ಆನೆ ಸಮಸ್ಯೆಗೆ ಪರಿಹಾರ ಸಿಗದೇ ರೈತರು ದಿಕ್ಕು ತೋಚದಾಗಿದ್ದಾರೆ. ಮೆಕ್ಕೆ ಜೋಳ, ಸಿಹಿಗೆಣಸು, ಮರಗೆಣಸು, ಶುಂಠಿ, ಭತ್ತದ ಬೆಳೆಯನ್ನು ಈ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು, ರಾತ್ರಿ ವೇಳೆ ಕಾಡಿನಿಂದ ಹೊರಬರುವ ಆನೆಗಳು ಮನಬಂದಂತೆ ತಿನ್ನುತ್ತವೆ.

ಕೆಲವೊಮ್ಮೆ ಆನೆಗಳ ಹಿಂಡು ತಿನ್ನದೇ ಜಮೀನಿನ ಮೇಲೆ ಹೋದರೂ ಮಣ್ಣಿನೊಳಗೆ ಗಡ್ಡೆಯ ರೂಪದಲ್ಲಿರುವ ಬೆಳೆಗಳು ತುಳಿತದಿಂದಲೇ ಹಾಳಾಗುತ್ತವೆ. ಕೆಲ ರೈತರು ತೆಂಗು, ಅಡಿಕೆ ಬೆಳೆಯನ್ನು ಮಾಡಿದ್ದು, ಕೆಲವೊಮ್ಮೆ ಆನೆಗಳು ತೆಂಗಿನ ಸಸಿ ಮತ್ತು ಮರಗಳ ಸುಳಿ ಮತ್ತು ಗರಿಗಳನ್ನು ಎಳೆದು ಹಾಕುತ್ತಿವೆ. ಸಿಟ್ಟು ಬಂದ ಸಮಯದಲ್ಲಿ ಅಡಿಕೆ ಮರಗಳನ್ನು ಮುರಿದಿರುವ ಉದಾಹರಣೆಗಳು ಇವೆ. ಭತ್ತದ ಗದ್ದೆಗಳಲ್ಲಿ ಆನೆಗಳು ಕಾಲಿಟ್ಟು ಭತ್ತದ ಪೈರು ಮಣ್ಣಿಗೆ ಸೇರುತ್ತಿವೆ.

ಅಳಿದುಳಿದಿರುವ ಸೌರ ವಿದ್ಯುತ್‌ ತಂತಿಯ ಕಂಬಗಳ ಮೂಲಕ ರೈತರೊಬ್ಬರು ಪಂಪ್‌ಸೆಟ್‍ಗೆ ವಿದ್ಯುತ್ ತಂತಿ ಅಳವಡಿಸಿರುವುದು

ಆನೆಗಳು ಬಂದೇ ಬರುತ್ತವೆ ಎಂದು ರೈತರು ಕಾದು ಕುಳಿತು, ಪಟಾಕಿ ಸಿಡಿಸಿ, ಕೂಗಾಡುತ್ತಿದ್ದರೂ, 4 ಕಡೆ ಹೊರಗೆ ಬರಲು ಜಾಗ ಮಾಡಿಕೊಂಡಿರುವ ಆನೆಗಳು, ಜನಗಳಿರುವ ಸ್ಥಳ ಬಿಟ್ಟು ಬೇರೆಡೆ ಹೊರಗೆ ಬರುತ್ತಿವೆ. ಕೆಲವೊಮ್ಮೆ ಪಟಾಕಿಯ ಶಬ್ದ ಕಡಿಮೆ ಆಗುತ್ತಿದ್ದಂತೆ ನಿರ್ಭಯವಾಗಿ ಆನೆಗಳು ಕಾಡಿನಿಂದ ಹೊರಬಂದು ಬೆಳೆಗಳನ್ನು ಹಾಳುಮಾಡುತ್ತಿವೆ.

ಹಿಂಡಿನಲ್ಲಿ ಬರುವ ಆನೆಗಳು ಬೆಳೆಯನ್ನು ತಿಂದು ಬೆಳಗಾಗುವಷ್ಟರಲ್ಲಿ ಕಾಡಿಗೆ ಹಿಂದುರಿಗಿದರೆ, ಕೆಲವೊಮ್ಮೆ ಒಂಟಿ ಆನೆಗಳು ಕಾಡಿನಿಂದ ಹೊರಬಂದು ಮನಸೋ ಇಚ್ಛೆ ಎಲ್ಲೆಂದರಲ್ಲಿ ಅಡ್ಡಾಡಿ ಭಯ ಹುಟ್ಟಿಸುತ್ತವೆ.

ಸೌರ ವಿದ್ಯುತ್‌ ಬೇಲಿಗೆ ವಿದ್ಯುತ್ ಹಾಯಿಸಲು ಇಟ್ಟಿದ್ದ ಬ್ಯಾಟರಿ ಮತ್ತು ಪ್ಯಾನೆಲ್ ಅನಾಥವಾಗಿ ಬಿದ್ದಿರುವುದು.

ಜಿಲ್ಲೆಯ ಗಡಿ ಗ್ರಾಮವಾದ ತರಿಗಳಲೆ ಗ್ರಾಮದ ಮೂಲಕ ಕೊಡಗು ಜಿಲ್ಲೆಗೆ ಹೋಗಬೇಕಿರುವ ರಸ್ತೆಯಲ್ಲೇ ಆನೆಗಳು ಸಂಚರಿಸುತ್ತಿದ್ದು, ಸಂಜೆ ಆಯಿತೆಂದರೆ ಆ ರಸ್ತೆಯಲ್ಲಿ ಸಂಚರಿಸುವವರು ಜೀವ ಕೈಯಲ್ಲಿ ಹಿಡಿದು ಸಾಗುತ್ತಾರೆ. ತರಿಗಳಲೆ ಆಸುಪಾಸಿನಲ್ಲಿ ದಾಂಧಲೆ ನಡೆಸುತ್ತಿದ್ದ ಆನೆಗಳು, ಇತ್ತೀಚೆಗೆ ಅಲ್ಲಿಂದ 10 ಕಿ.ಮೀ ದೂರವಿರುವ ಹೊಸನಗರ, ಅಕ್ಕಲವಾಡಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಬರಲು ಪ್ರಾರಂಭಿಸಿವೆ. ಸುಮಾರು 20 ಕ್ಕೂ ಹೆಚ್ಚು ಗ್ರಾಮಗಳ ಜನರಲ್ಲಿ ಆನೆಗಳ ಭಯ ಕಾಡುತ್ತಿದೆ. ರಾತ್ರಿ ವೇಳೆ ಜಮೀನಿಗೆ ನೀರುಣಿಸಲು ಅಥವಾ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಜೋಳದ ಹೊಲವೊಂದನ್ನು ಒಂದೇ ರಾತ್ರಿಗೆ ಆನೆಗಳು ತಿಂದು ಮುಗಿಸಿರುವುದು.
ಅನೇಕ ದಿನಗಳಿಂದ ಆನೆಗಳ ಹಾವಳಿ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಬೆಳೆಗಳು ಉಳಿಯುತ್ತಿಲ್ಲ. ಈ ಕುರಿತು ಶಾಸಕರ ಗಮನಕ್ಕೂ ತಂದಿದ್ದೇವೆ.
ಉಮೇಶ್ ತರಿಗಳಲೆ ಗ್ರಾಮದ ರೈತ
ನಾನು ಸಚಿವನಾಗಿದ್ದಾಗ ಈ ಭಾಗದ ಕಾಡಿನಂಚಿಗೆ ಟ್ರಂಚ್ ಸೌರ ವಿದ್ಯುತ್‌ ತಂತಿಯ ಬೇಲಿ ಮಾಡಿಸಿ ಆನೆಗಳ ಹಾವಳಿ ನಿಯಂತ್ರಿಸಲಾಗಿತ್ತು. ಶಾಶ್ವತ ಪರಿಹಾರದ ಕುರಿತು ಈಗಾಗಲೇ ಚರ್ಚಿಸಿದ್ದು ಕ್ರಮ ಕೈಗೊಳ್ಳಲಾಗುವುದು.
ಎ.ಮಂಜು ಶಾಸಕ
ಹಿಂದೆ ಅಳವಡಿಸಿದ್ದ ಸೌರ ವಿದ್ಯುತ್ ತಂತಿ ಕಿತ್ತು ಹೋಗಿದ್ದು ಆನೆಗಳು ಸುಲಭವಾಗಿ ಕಾಡಿನಿಂದ ಹೊರಗೆ ಬರುತ್ತಿವೆ. ಹೊಸದಾಗಿ ಸೌರ ವಿದ್ಯುತ್‌ ಬೇಲಿ ಅಳವಡಿಸಲು ಟೆಂಡರ್ ಕರೆದಿದ್ದು ಕೆಲವೇ ದಿನಗಳಲ್ಲಿ ಬೇಲಿ ಅಳವಡಿಸಲಾಗುವುದು.
ಯಶ್ಮಾ ಮಾಚಮ್ಮ ವಲಯ ಅರಣ್ಯಾಧಿಕಾರಿ ಅರಕಲಗೂಡು
ಸಿಗದ ಪರಿಹಾರ: ರೈತರಿಗೆ ಸಂಕಷ್ಟ
2 ವರ್ಷಗಳ ಹಿಂದೆ ಮರಿಯಾನಗರದ ಬಳಿ ಆನೆಗಳು ಒಬ್ಬರನ್ನು ತುಳಿದು ಸಾಯಿಸಿದ್ದು ಕಳೆದೆರಡು ತಿಂಗಳ ಹಿಂದೆ ತರಿಗಳಲೆ ಗ್ರಾಮದ ಕಾಡಂಚಿನಲ್ಲಿರುವ ಮನೆಯ ಬಳಿ ಕಟ್ಟಿದ್ದ ಹಸುವಿಗೆ ಆನೆಯು ಕೋರೆಯಿಂದ ತಿವಿದಿತ್ತು. ಚಿಕಿತ್ಸೆ ಫಲಕಾರಿಯಾದೇ ಹಸು ಮೃತಪಟ್ಟಿತ್ತು. ಅರ್ಜಿ ಸಲ್ಲಿಸಿದ್ದು ಇದುವರೆಗೂ ಪರಿಹಾರವೂ ಸಿಕ್ಕಿಲ್ಲ ಎನ್ನುತ್ತಾರೆ ಭಾಗ್ಯಮ್ಮ. ಕಾಡಿನಂಚಿನಲ್ಲಿ ಅತಿ ಹೆಚ್ಚು ಆನೆಗಳ ದಾಳಿಗೆ ತುತ್ತಾಗುತ್ತಿರುವ ಪ್ರದೇಶದ 152 ಮತ್ತು 153 ರ ಸರ್ವೆ ನಂಬರ್‌ಗಳ ಜಮೀನು ದಾಖಲೆಗಳಲ್ಲಿ ಸರ್ಕಾರಿ ಗೋಮಾಳ ಎಂದು ನಮೂದಾಗಿದೆ. ಆದರೆ ಅನೇಕ ವರ್ಷಗಳಿಂದ ರೈತರು ಇಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದು ಅವರಿಗೆ ಇದುವರೆಗೆ ಸಾಗುವಳಿ ಪತ್ರ ದೊರೆತಿಲ್ಲ. ಹೀಗಾಗಿ ಆನೆಗಳು ಎಷ್ಟೇ ನಷ್ಟ ಉಂಟು ಮಾಡಿದರೂ ಸರ್ಕಾರದಿಂದ ಪರಿಹಾರವೂ ದೊರೆಯುತ್ತಿಲ್ಲ. ವ್ಯವಸಾಯಕ್ಕೆ ಮಾಡಿದ್ದ ಶ್ರಮ ಮತ್ತು ಖರ್ಚು ಮಾಡಿದ ಹಣವು ವ್ಯರ್ಥವಾಗುತ್ತಿದೆ.
ಟ್ರಂಚ್‌ಗೆ ಮಣ್ಣು ತುಂಬಿ ಬರುವ ಆನೆಗಳು
ಆನೆಗಳು ಕಾಡಿನಿಂದ ಹೊರಗೆ ಬರದಂತೆ ಕೆಲ ವರ್ಷಗಳ ಹಿಂದೆ ಸೌರ ವಿದ್ಯುತ್‌ ಬೇಲಿ ಅಳವಡಿಸಿದ್ದು ಈ ಭಾಗದಲ್ಲಿ ಆನೆಗಳ ಹಾವಳಿ ತಗ್ಗಿತ್ತು. ಕಳೆದೆರಡು ವರ್ಷಗಳಿಂದ ಸೌರ ವಿದ್ಯುತ್‌ ಬೇಲಿಯೂ ಇಲ್ಲವಾಗಿದ್ದು ಆನೆಗಳು ನಿರಾಂತಂಕವಾಗಿ ಕಾಡಿನಿಂದ ಹೊರಬರುತ್ತಿವೆ ಎನ್ನುತ್ತಾರೆ ಸ್ಥಳೀಯರು. ಕಾಡಿನಂಚಿನಲ್ಲಿ 15 ರಿಂದ 20 ಅಡಿಯ ಟ್ರಂಚ್ ತೆಗೆದಿದ್ದು ಟ್ರಂಚ್‍ಗಳಿಗೆ ಮಣ್ಣು ಮುಚ್ಚಿ ದಾರಿ ಮಾಡಿಕೊಂಡು ಆನೆಗಳು ಬರುತ್ತಿವೆ. ಟ್ರಂಚ್ ಉದ್ದಕ್ಕೂ ನೋಡಿದರೆ ಅಲ್ಲೊಂದು ಇಲ್ಲೊಂದು ಸೌರ ವಿದ್ಯುತ್‌ ತಂತಿ ಅಳವಡಿಸಿದ್ದ ಕಂಬಗಳು ಕಾಣುತ್ತಿದ್ದು ತಂತಿ ಕಣ್ಮರೆಯಾಗಿದೆ. ಸೌರ ಬ್ಯಾಟರಿ ಮತ್ತು ಪ್ಯಾನಲ್ ಅನಾಥವಾಗಿ ಬಿದ್ದಿದ್ದು ಅದನ್ನು ಸರಿಪಡಿಸುವುದು ಹೋಗಲಿ ಕನಿಷ್ಠ ಪಕ್ಷ ಎತ್ತಿಡುವ ಕೆಲಸವನ್ನು ಅರಣ್ಯ ಇಲಾಖೆಯವರು ಮಾಡಿಲ್ಲ. ಉಳಿದಿರುವ ಕಂಬಗಳನ್ನು ರೈತರು ತಮ್ಮ ಪಂಪ್‍ಸೆಟ್‌ಗೆ ವಿದ್ಯುತ್ ತಂತಿ ಎಳೆಯಲು ಬಳಸಿಕೊಂಡಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಬೆಳೆಯನ್ನು ಉಳಿಸಿಕೊಳ್ಳಲು ಕೆಲವೇ ರೈತರು ಸ್ವಂತ ಖರ್ಚಿನಲ್ಲಿ ಸೌರ ವಿದ್ಯುತ್‌ ತಂತಿಯನ್ನು ಜಮೀನಿನ ಸುತ್ತ ಅಳವಡಿಸಿದ್ದು ಆ ರೈತರು ಮಾತ್ರ ಬೆಳೆ ಉಳಿಸಿಕೊಂಡಿದ್ದಾರೆ. ಉಳಿದೆಲ್ಲ ರೈತರು ಕೃಷಿ ಮಾಡಲು ವ್ಯಯಿಸಿದ್ದ ಲಕ್ಷಾಂತರ ರೂಪಾಯಿಯೂ ಇಲ್ಲದೇ ಬೆಳೆಯೂ ಇಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.