ADVERTISEMENT

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹ

ನಗರದ ಹೇಮಾವತಿ ಪ್ರತಿಮೆ ಎದುರು ಡಿವೈಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 13:26 IST
Last Updated 14 ಆಗಸ್ಟ್ 2021, 13:26 IST
ಹಾಸನದ ಹೇಮಾವತಿ ಪ್ರತಿಮೆ ಎದುರು ಡಿವೈಎಫ್‌ಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ಹಾಸನದ ಹೇಮಾವತಿ ಪ್ರತಿಮೆ ಎದುರು ಡಿವೈಎಫ್‌ಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು   

ಹಾಸನ: ಯುವಜನರಿಗೆ ಉದ್ಯೋಗ ಸೃಷ್ಟಿಸುವುದು, ಸರೋಜಿನಿ ಮಹಿಷಿ ವರದಿ ಜಾರಿ ಸೇರಿದಂತೆ ವಿವಿಧ
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿವೈಎಫ್ಐ ವತಿಯಿಂದ ಶನಿವಾರ ನಗರದ ಹೇಮಾವತಿ ಪ್ರತಿಮೆ ಎದುರು
ಪ್ರತಿಭಟನೆ ನಡೆಸಲಾಯಿತು.

ವಿಶ್ವವಿದ್ಯಾಲಯಗಳಿಂದ ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪದವಿ ಪಡೆದು ವಿದ್ಯಾರ್ಥಿಗಳು
ಹೊರಬರುತ್ತಿದ್ದಾರೆ. ಆದರೆ, ಪದವಿಗೆ ತಕ್ಕ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಸರ್ಕಾರಗಳ ತಪ್ಪು
ನೀತಿಗಳಿಂದ ಇರುವ ಉದ್ಯೋಗ ಸಹ ನಾಶ ಹೊಂದುತ್ತಿವೆ ಎಂದು ಆರೋಪಿಸಿದರು.

ಬ್ಯಾಂಕ್‌ಗಳವಿಲೀನ, ಸಾರ್ವಜನಿಕ ರಂಗದ ಉದ್ಯಮಗಳ ಮಾರಾಟ, ಬಂಡವಾಳ ಹಿಂತೆಗೆತ, ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಹುದ್ದೆ ಭರ್ತಿ ಆಗದಿರುವುದು, ಗುತ್ತಿಗೆ, ಹೊರಗುತ್ತಿಗೆ ಪದ್ಧತಿಗಳು, ಕಾರ್ಮಿಕ
ಕಾಯ್ದೆಯ ತಿದ್ದುಪಡಿಗಳು, ಒಟ್ಟಾರೆ ಸರ್ಕಾರದ ನೀತಿಗಳು ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ ಎಂದು
ಬೇಸರ ವ್ಯಕ್ತಪಡಿಸಿದರು.

ADVERTISEMENT

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ ಮಾತನಾಡಿ, ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಬಲ್ಲ ಉದ್ಯಮಗಳು ಸ್ಥಾಪನೆಯಾಗುತ್ತಿಲ್ಲ. ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ಹಲವು ಕಂಪನಿಗಳುಉದ್ಯೋಗಿಗಳನ್ನು ಹೊರದಬ್ಬುತ್ತಿವೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚುಉದ್ಯೋಗಗಳು ಭರ್ತಿ ಮಾಡಿಲ್ಲ. ಹಲವು ಉದ್ಯಮಗಳು ಗುತ್ತಿಗೆ, ಹೊರಗುತ್ತಿಗೆ ಪದ್ದತಿಯಡಿಉದ್ಯೋಗದ ಹೆಸರಿನಲ್ಲಿ ಯುವಜನರನ್ನು ಅರೆ ಜೀತ ಪದ್ದತಿಯಡಿ ದುಡಿಸಿಕೊಳ್ಳುತ್ತಿವೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಬೆಂಗಳೂರು, ಮೈಸೂರು, ಮಂಗಳೂರು ಮಹಾ ನಗರಗಳಲ್ಲಿರುವ ಕಾರ್ಖಾನೆಗಳು, ಕಂಪನಿಗಳು ಉದ್ಯೋಗವನ್ನು ಹೊರಗಿನವರಿಗೆ ನೀಡುತ್ತಿವೆ. ಇದರಿಂದ ರಾಜ್ಯದ ವಿದ್ಯಾವಂತ ಯುವ ಜನರಿಗೆ ಭವಿಷ್ಯವೇ ಇಲ್ಲದಂತಾಗಿದೆ ಎಂದರು.

ಸರ್ಕಾರ ಆಯಾ ಜಿಲ್ಲೆಗಳ ಕೃಷಿ, ವಾಣಿಜ್ಯ ಬೆಳೆಗಳು, ಪ್ರಾಕೃತಿಕ ಸಂಪತ್ತು, ಸಂಪನ್ಮೂಲಗಳಿಗೆ ಅನುಗುಣವಾಗಿ‌ ಉದ್ಯೋಗ ಸೃಷ್ಟಿಸ ಬಲ್ಲ ಕೈಗಾರಿಕೆ, ಉದ್ಯಮ ಸ್ಥಾಪಿಸಬೇಕು. ಸ್ಥಳೀಯರಿಗೆ ಆದ್ಯತೆ ನೀಡಬೇಕು. ಅದಕ್ಕಾಗಿ ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ಕಾಯ್ದೆಯೊಂದನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಯುವ ಜನರ ವಿದ್ಯಾರ್ಹತೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ವ ಉದ್ಯೋಗ, ಕಿರು ಉದ್ಯಮ ಸ್ಥಾಪಿಸಲು
ಯೋಜನೆಗಳನ್ನು ಸರ್ಕಾರ ರೂಪಿಸಬೇಕು. ಹಾಸನ ಜಿಲ್ಲೆಯ ತೆಂಗು, ಕಾಫಿ, ಆಲೂಗಡ್ಡೆ, ಮತ್ತಿತರ ಪ್ರಧಾನ ವಾಣಿಜ್ಯ ಬೆಳೆಗಳು, ಕೃಷಿಗೆ ಪೂರಕವಾದ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಸಿ.ಕೆ. ಪ್ರಸನ್ನ ಕುಮಾರ್, ಸುಂದರ್,
ಕೆ.ಪಿ.ಆರ್.ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಚ್.ಆರ್.ನವೀನ್ ಕುಮಾರ್‌, ಸಿಐಟಿಯು ಮುಖಂಡ
ಅರವಿಂದ್, ಬಿಜಿವಿಎಸ್ ಗೋಪಾಲಕೃಷ್ಣ, ಎಸ್ಎಫ್ಐ ನ ರಮೇಶ್, ವಿವೇಕ್, ಡಿಎಸ್ಎಸ್ ಮುಖಂಡರಾದ
ಲಿಂಗರಾಜು, ಸಂದೇಶ್ ಮತ್ತು ಡಿವೈಎಫ್ಐ ನ ಚಂದ್ರು ತಟ್ಟೆಕೆರೆ, ರಘು, ಹೊಯ್ಸಳ, ಕೃಷ್ಣಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.