ಹಾಸನ: ರಾಜ್ಯ ರೈತ ಸಂಘ ಮತ್ತು ಮಾನವ ಹಕ್ಕುಗಳ ಸಮಿತಿ ಸದಸ್ಯರ ದೂರಿನ ಮೇರೆಗೆನಗರದ ಗೋದಾಮವೊಂದರ ಮೇಲೆ ಪೊಲೀಸರು ಹಾಗೂ ಕೃಷಿ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ್ದ ಎರಡು ಸಾವಿರಕ್ಕೂ ಅಧಿಕ ರಸಗೊಬ್ಬರದ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊಳೆನರಸೀಪುರ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಮಂಜುನಾಥ್ ಟ್ರಾವಲ್ ಹಾಗೂ ಎಚ್.ಟಿ.ಎ. ಗ್ರೂಪ್ ಮಾಲೀಕ ಕೀರಿಟ್ ಅವರಿಗೆ ಸೇರಿದ ಗೋದಾಮಿನಲ್ಲಿ ರೈತರಿಗೆ ಸಬ್ಸಿಡಿ ನೀಡಿದ್ದ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು.
ಈ ವಿಚಾರವನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಅವರು ಪೊಲೀಸರ ಗಮನಕ್ಕೆ ತಂದಿದ್ದರು. ದಾಳಿ ವೇಳೆ ಮಾಲೀಕ ಕೀರಿಟ್ ಇರಲಿಲ್ಲ. ಹಾಗಾಗಿ ಕೃಷಿ ಅಧಿಕಾರಿಗಳು ಗೋದಾಮಿಗೆ ಬೀಗ ಜಡಿದರು.
‘ರಸಗೊಬ್ಬರ ದಾಸ್ತಾನು ಸಂಬಂಧ ದಾಖಲೆ ನೀಡುವಂತೆ ಗೋದಾಮು ಮಾಲೀಕರಿಗೆ ನೋಟಿಸ್ ಕಳುಹಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಹರೀಶ್ ತಿಳಿಸಿದರು.
‘ರಸಗೊಬ್ಬರ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಕೆಲವು ಕೃಷಿ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ರಸಗೊಬ್ಬರ ದಾಸ್ತಾನು ಮಾಡಿರುವ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಜೆ.ಎಸ್.ಸುರೇಶ್ ಆಗ್ರಹಿಸಿದ್ದಾರೆ.
ದಾಳಿಯಲ್ಲಿ ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ಸಿಪಿಐ ಸತ್ಯನಾರಾಯಣ್, ಜಂಟಿ ಕೃಷಿ ನಿರ್ದೇಶಕ ಮಧುಸೂಧನ್, ರೈತ ಸಂಘದ ಅಧ್ಯಕ್ಷ ಎಂ.ಟಿ. ಗಿರೀಶ್ ಗೌಡ, ಮುಖಂಡರಾದ ಪುನೀತ್, ಕೃಷ್ಣೇಗೌಡ, ಪಾಂಡು, ವಕೀಲ ಪ್ರದೀಪ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.