ADVERTISEMENT

ಕೆರೆಗಳ ಒತ್ತುವರಿ ತೆರವಿಗೆ ಆಗ್ರಹ

‘ಹುಣಸಿನಕೆರೆ ಹಬ್ಬ’; ಹಾಸನ ನಗರದಲ್ಲಿ ಕೆರೆಗಳ ರಕ್ಷಣೆ ಕುರಿತು ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 17:09 IST
Last Updated 9 ಜನವರಿ 2021, 17:09 IST
ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ‘ಹುಣಸಿನಕೆರೆ ಹಬ್ಬದ ಜಾಗೃತಿ ಜಾಥಾ’ ನಡೆಯಿತು
ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ‘ಹುಣಸಿನಕೆರೆ ಹಬ್ಬದ ಜಾಗೃತಿ ಜಾಥಾ’ ನಡೆಯಿತು   

ಹಾಸನ: ‘ಕೆರೆಗಳು ಅಂತರ್ಜಲ ವೃದ್ಧಿಗೆ ಮೂಲ ಆಧಾರವಾಗಿದ್ದು, ಕೆರೆಗಳ ಸಂರಕ್ಷಣೆ, ಅಭಿವೃದ್ಧಿ ಮಾಡುವ ಕರ್ತವ್ಯವನ್ನು ನಾವು ಎಂದಿಗೂ ಮರೆಯಬಾರದು’ ಎಂದು ಹಾಸನ ಉಪ ವಿಭಾಗಾಧಿಕಾರಿಬಿ.ಎ. ಜಗದೀಶ್ ಸಲಹೆ ನೀಡಿದರು.

ನಗರದ ಹುಣಸಿನಕೆರೆ ರಸ್ತೆ, ಅಬ್ದುಲ್ ಕಲಾಂ ಉದ್ಯಾನದ ಆವರಣದಲ್ಲಿ ಹಸಿರುಭೂಮಿ ಪ್ರತಿಷ್ಠಾನದ ವತಿಯಿಂದ ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿ ಶನಿವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ‘ಹುಣಸಿನಕೆರೆ ಹಬ್ಬ’ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪರಿಸರ ರಕ್ಷಣೆ ಮಾಡುವುದು ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಅದರ ಅನ್ವಯ ಕೆರೆ, ಸರೋವರ, ನದಿಗಳ ಜೊತೆಗೆ ಪರಿಸರ ಸಂರಕ್ಷಣೆ ಮಾಡಬೇಕು. ಎಲ್ಲರೂ ತಮ್ಮ ಕರ್ತವ್ಯಗಳನ್ನು ಮರೆಯಬಾರದು’ ಎಂದು ಹೇಳಿದರು.

ADVERTISEMENT

ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ ಮಾತನಾಡಿ, ‘ಹಿಂದೆ ಕೆರೆಗಳು ಸಮೃದ್ಧವಾಗಿದ್ದವು. ಆದರೆ ಈಗ ಮನುಷ್ಯನ ಅತಿಯಾದಆಸೆಯಿಂದ ಕಣ್ಮರೆಯಾಗುತ್ತಿವೆ. ನಗರದಲ್ಲಿರುವ ಬಹಳಷ್ಟು ಕೆರೆ ಜಾಗವನ್ನು ಒತ್ತುವರಿ ಮಾಡಲಾಗಿದೆ. ಒತ್ತುವರಿಯನ್ನು ತೆರವುಗೊಳಿಸುವ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು. ಆ ಮೂಲಕವಾದರೂಕೆರೆಗಳನ್ನು ಉಳಿಸುವ ಕೆಲಸ ಮಾಡಬೇಕಾಗಿದೆ’ ಎಂದು
ಹೇಳಿದರು

‘ಕೆರೆಗಳು ಉಳಿಯಬೇಕಾದರೆ ಜನರಲ್ಲಿ ಜಾಗೃತಿ ಮೂಡಬೇಕು. ಕೆರೆಗಳು ನಮ್ಮ ಆಸ್ತಿ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಕೆರೆಗೆ ಕೊಳಚೆ ನೀರು ಬಿಡದಂತೆ, ಇತರೆ ತ್ಯಾಜ್ಯ ಸುರಿಯದಂತೆ ಜಾಗೃತಿ ಮೂಡಬೇಕು.
ಹುಣಸಿನಕೆರೆಗೆ ದೇಶದ ವಿವಿಧ ಭಾಗಗಳಿಂದ ಪಕ್ಷಿಗಳು ವಲಸೆ ಬಂದು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಕೆರೆ ಮತ್ತು ಸುತ್ತಮುತ್ತಲ ಪರಿಸರ ಸ್ವಚ್ಛವಾಗಿ ಇಡುವಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

‘ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಂಘ, ಸಂಸ್ಥೆಗಳು, ಹುಣಸಿನಕೆರೆ ನಿವಾಸಿಗಳು, ಕೆರೆ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡರು.

‘ನಮ್ಮ ಕೆರೆ ನಮ್ಮ ಆಸ್ತಿ’, ‘ಕೆರೆ ಸಂರಕ್ಷಿಸೋಣ’ ಎಂಬ ಘೋಷಣೆಯೊಂದಿಗೆ ನಗರದ ಎ.ಪಿ.ಜೆ. ಅಬ್ದುಲ್ ಕಲಾಂ ರಸ್ತೆ ಬಳಿಯ ಉದ್ಯಾನದಿಂದ ಪ್ರಾರಂಭವಾದ ಜಾಥಾವು ಶಿವರಾಮು ಮನೆ ವೃತ್ತ, ವಿಶ್ವನಾಥ ನಗರ ವೃತ್ತ, ಹೊಸ ಈದ್ಗಾ, ರಾಜಕುಮಾರ ನಗರ ಮೂಲಕ ಸಾಗಿ ಅಬ್ದುಲ್‌ ಕಲಾಂ ಪಾರ್ಕ್‌ನಲ್ಲಿ ಸಮಾರೋಪಗೊಂಡಿತು.

ಕಾರ್ಯಕ್ರಮದಲ್ಲಿ ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಮ್ಜಾದ್ ಖಾನ್, ಗೌರವಾಧ್ಯಕ್ಷ ರಾಮಚಂದ್ರ, ನಗರಸಭೆ ಸದಸ್ಯ ಮಹೇಶ್, ಸಮಿತಿಯ ಕಾರ್ಯದರ್ಶಿ ದೇವಿಕಾಮಧು, ಕಾರ್ಯಾಧ್ಯಕ್ಷ ರಾಮಣ್ಣ, ಉಪಾಧ್ಯಕ್ಷ ಸಯೈದ್ ಖಾನ್, ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ಗಿರಿಜಾಂಬಿಕಾ, ಸಂಗೀತ ನಿರ್ದೇಶಕ ರಾಜೀವೇಗೌಡ, ಬಿ.ಆರ್. ಉದಯಕುಮಾರ್, ಹಗರೆ ಅಹಮದ್, ಎಸ್.ಎಸ್. ಪಾಷಾ, ಶಿವಶಂಕರಪ್ಪ, ‘ಮುಂಜಾನೆ ಮಿತ್ರರು’ ತಂಡದ ವೆಂಕಟೇಗೌಡ, ರಾಮೇಗೌಡ, ಕೊಕ್ಕನಘಟ್ಟ ಚಂದನಾ ಹಾಗೂ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.