ADVERTISEMENT

ಯಾವ ಖಾತೆ ಕೊಟ್ಟರೂ ಜೀವ ತುಂಬುವೆ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 14:01 IST
Last Updated 26 ಜನವರಿ 2021, 14:01 IST
ಗೋಪಾಲಯ್ಯ
ಗೋಪಾಲಯ್ಯ   

ಹಾಸನ: ಅಬಕಾರಿ ಖಾತೆ ನೀಡಿರುವುದರಿಂದ ಯಾವುದೇ ಅಸಮಾಧಾನ ಇಲ್ಲ. ಯಾವ ಖಾತೆ ಕೊಟ್ಟರೂ
ಅದಕ್ಕೆ ಜೀವ ತುಂಬುವ ಕೆಲಸ ಮಾಡುವೆ ಎಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಕೆಲವರು ಇಂಥದೇ ಖಾತೆ ಬೇಕು ಅಂತ ಕೇಳುತ್ತಾರೆ. ಒಂದೇ ಖಾತೆ ಎಲ್ಲರಿಗೂ ಕೊಡಲು ಆಗುವುದೇ?. ಆಹಾರ
ಇಲಾಖೆಯಲ್ಲಿ ಕೆಲಸ ಮಾಡಿದಂತೆ ಅಬಕಾರಿ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವೆ. ಸೋರಿಕೆ ತಡೆಗಟ್ಟಿ,ಸರ್ಕಾರಕ್ಕೆ ಆದಾಯ ತರಲಾಗುವುದು. ಬುಧವಾರ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುವುದು. ಅಧಿವೇಶನಬಳಿಕ ಪ್ರತಿ ವಲಯಕ್ಕೂ ಭೇಟಿ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿಎಲ್‌ 7 ಪರವಾನಗಿಯನ್ನು ಮನಬಂದಂತೆ ಹಂಚಿಕೆ ಮಾಡಲಾಗಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ
ಬಗ್ಗೆ ಮರು ಪರಿಶೀಲನೆ ಮಾಡಲಾಗುವುದು. ಎಂ.ಆರ್‌.ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ
ಮಾಡುತ್ತಿರುವ ಬಗ್ಗೆಯೂ ಪರಿಶೀಲಿಸಲಾಗುವುದು ಎಂದರು.

ಗಾಂಜಾ, ಡಗ್ಸ್‌ ಸೇವನೆ ಮತ್ತು ಪೂರೈಕೆಯಿಂದ ಸಮಸ್ಯೆಯಾಗುತ್ತಿದೆ. ದುಶ್ಚಟಕ್ಕೆ ಬಲಿಯಾಗಿ ಯುವ ಜನರು
ತಮ್ಮ ಜೀವನ ಕಳೆದುಕೊಂಡಿದ್ದಾರೆ. ಡ್ರಗ್ಸ್‌ ದಂಧೆ ಮಟ್ಟ ಹಾಕಲಾಗುವುದು ಎಂದರು.

ADVERTISEMENT

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎತ್ತಿನಹೊಳೆ ಯೋಜನೆ ಎಂಜಿನಿಯರ್‌ಗಳ ಸಭೆ ನಡೆಸಿದ್ದು, ತ್ವರಿತವಾಗಿಕಾಮಗಾರಿ ಪೂರ್ಣಗೊಳಿಸುವಂತೆ ಹೇಳಿದ್ದಾರೆ. ಕಾಡಾನೆ ಹಾವಳಿಗೆ ಸಂಬಂಧಿಸಿದಂತೆ ಅರಣ್ಯ ಸಚಿವರು ಬೆಂಗಳೂರಿನಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸುವರು. ಸಾಧ್ಯವಾದರೆ ಸಕಲೇಶಪುರ ಭಾಗದಲ್ಲಿ ಸಭೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೋವಿಡ್‌ನಿಂದಾಗಿ ಹಾಸನ ಮಾತ್ರವಲ್ಲ ಎಲ್ಲ ಕಡೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅಭಿವೃದ್ಧಿ ವಿಷಯದಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ. ಜಿಲ್ಲೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಜತೆ ಚರ್ಚಿಸಿದ್ದಾರೆ. ಅಧಿಕಾರಿಗಳ ವರದಿ ಆಧರಿಸಿ ಅತಿವೃಷ್ಟಿ ನಷ್ಟಕ್ಕೆ ಪರಿಹಾರ ನೀಡಲಾಗಿದೆ. ಇದರಲ್ಲಿ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ಆರ್‌. ಗಿರೀಶ್‌, ಜಿಲ್ಲಾ ಪಂಚಾಯಿತಿ ಸಿಇಒ ಡಿ.ಭಾರತಿ, ಶಾಸಕ ಪ್ರೀತಂ ಜೆ.ಗೌಡ ಹಾಗೂ ವಿವಿಧ
ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.