ADVERTISEMENT

ಅಂತಿಮ ನಿರ್ಧಾರ ಜನರಿಗೆ ಸೇರಿದ್ದು: ಸಂಸದ ಡಿ.ವಿ. ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 7:34 IST
Last Updated 10 ಮಾರ್ಚ್ 2023, 7:34 IST
ಬಿಜೆಪಿ ಪ್ರಚಾರ ಯಾತ್ರೆಯಲ್ಲಿ ಡಿ.ವಿ ಸದಾನಂದ ಗೌಡ
ಬಿಜೆಪಿ ಪ್ರಚಾರ ಯಾತ್ರೆಯಲ್ಲಿ ಡಿ.ವಿ ಸದಾನಂದ ಗೌಡ    

ಹಾಸನ: ನಾವು ನಮ್ಮ ಸಾಧನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ಕಾಂಗ್ರೆಸ್‌–ಜೆಡಿಎಸ್‌ ಪಕ್ಷಗಳು ತಮ್ಮ ಕಾರ್ಯಕ್ರಮಗಳನ್ನು ಜನರ ಮುಂದಿಡುವ ಕೆಲಸ ಮಾಡಲಿ. ಅಂತಿಮವಾಗಿ ಜನರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಂಸದ ಡಿ.ವಿ. ಸದಾನಂದಗೌಡ ಹೇಳಿದರು.

ಹೊಳೆನರಸೀಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಅನಗತ್ಯ ಟೀಕೆ, ಟಿಪ್ಪಣೆಗಳನ್ನು ಮಾಡುವುದರಲ್ಲಿ ಅರ್ಥವಿಲ್ಲ. ಜನರಿಗೆ ಬೇಕಾಗಿರುವ ಸೌಲಭ್ಯಗಳ ಬಗ್ಗೆ ಮಾತನಾಡಿ ಎಂದರು.

ದೇವೇಗೌಡರು ಪ್ರಧಾನಿ ಆದವರು. ಕುಮಾರಸ್ವಾಮಿ ಮುಖ್ಯಮಂತ್ರಿ ಆದವರು. ಸಿದ್ದರಾಮಯ್ಯ 13 ಬಜೆಟ್‌ಗಳನ್ನು ಮಂಡಿಸಿದವರು. ನಮ್ಮಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಈಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ಎಲ್ಲ ಪಕ್ಷಗಳು ತಮ್ಮ ಅವಧಿಯಲ್ಲಿ ಏನು ಕಾರ್ಯಕ್ರಮ ಕೊಟ್ಟಿವೆ. ಅದರಿಂದ ಜನರಿಗೆ ಏನು ಅನುಕೂಲ ಆಗಿದೆ ಎನ್ನುವುದನ್ನು ಹೇಳಿಕೊಳ್ಳಲಿ ಎಂದು ತಿಳಿಸಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಂತರ ಬಿಜೆಪಿ ಚುನಾವಣೆ ನೀತಿ ಅಳವಡಿಸಿಕೊಂಡಿದೆ. ಇಲ್ಲಿಯವರೆಗೆ ಭರವಸೆಗಳ ಆಧಾರದಲ್ಲಿ ಚುನಾವಣೆ ನಡೆಯುತ್ತಿತ್ತು. ಆದರೆ ಈಗ ಜನರ ಸಮಸ್ಯೆಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಿದ್ದೇವೆ ಎನ್ನುವ ರಿಪೋರ್ಟ್‌ ಕಾರ್ಡ್‌ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಇದನ್ನು ಪರಿಗಣಿಸಿ, ಜನರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.