ADVERTISEMENT

ಹಾಸನ: ಅಕ್ರಮ ಮದ್ಯಕ್ಕೆ ಬೆಂಕಿ

ಮದ್ಯ ಮಾರಾಟ ತಡೆಗೆ ಮುಂದಾದ ಯುವಕರು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 17:03 IST
Last Updated 22 ಡಿಸೆಂಬರ್ 2021, 17:03 IST

ಹಾಸನ: ಸಕಲೇಶಪುರ ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಬೇಡರಜಗಲಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಮುಂದಾಗಿರುವ ಯುವಕರು, ಗ್ರಾಮಕ್ಕೆ ತಲುಪಿದ್ದ ಮದ್ಯ ವಶಕ್ಕೆ ಪಡೆದು ನಡು ರಸ್ತೆಯಲ್ಲಿಯೇ ಬೆಂಕಿ ಹಚ್ಚಿದ್ದಾರೆ.

ಎರಡು ವಾರಗಳ ಹಿಂದೆ ಗ್ರಾಮದ ಮಹಿಳೆಯೊಬ್ಬರು ಮದ್ಯ ಚಟದಿಂದ ಮೃತಪಟ್ಟಿದ್ದರು.ಇದರಿಂದ ಎಚ್ಚೆತ್ತ ಗ್ರಾಮದ ಯುವಕರು ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ನಿರ್ಧರಿಸಿ, ಮದ್ಯ ಮಾರಾಟ ಮಾಡುತ್ತಿದ್ದ ಬೈರಯ್ಯ ಹಾಗೂ ಮುತ್ತಣ್ಣ ಅವರನ್ನು ಕರೆಸಿ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದರು.

ಆದರೂ ಮಂಗಳವಾರ ರಾತ್ರಿ ಸಕಲೇಶಪುರ ಟೋಲ್‌ ಗೇಟ್‌ನ ಬಾರ್‌ ಒಂದರಿಂದ ಬೈಕ್‌ನಲ್ಲಿ ಮದ್ಯದ ಬಾಕ್ಸ್‌ನ್ನು ಮುತ್ತಣ್ಣ ಅವರ ಮನೆಗೆ ತಲುಪಿಸಿ ಹಿಂದಿರುತ್ತಿದ್ದ. ವಿಷಯ ತಿಳಿದ ಯುವಕರು ಆತನನ್ನು ಅಡ್ಡಗಟ್ಟಿ ಮದ್ಯದ ಪಾಕೆಟ್‌ಗಳನ್ನು ವಶಪಡಿಸಿಕೊಂಡು ರಸ್ತೆಯಲ್ಲಿಯೇ ಬೆಂಕಿ ಹಚ್ಚಿದರು.

ADVERTISEMENT

‘ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರೇ ವಾಸವಿದ್ದು, ಸುಲಭವಾಗಿ ಮದ್ಯ ಸಿಗುತ್ತಿರುವುದರಿಂದ ಅನೇಕರು ಕುಡಿತದ ಚಟಕ್ಕೆ ಬಲಿಯಾಗಿ ಬದುಕು ಹಾಗೂ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸುತ್ತಿಲ್ಲ. ಗ್ರಾಮದಲ್ಲಿಮದ್ಯ ಮಾರಾಟ ನಿಲ್ಲಿಸಿದರೂ ಪಕ್ಕದ ಊರುಗಳಿಗೆ ಹೋಗಿ ಮದ್ಯ ಸೇವಿಸಿ ಬರುತ್ತಿದ್ದಾರೆ. ಕಲ್ಲನಕೋಡಿ ನಂದೀಶ್, ಸುಳ್ಳಕ್ಕಿ ಗ್ರಾಮದ ಮಿಲ್ ವಿಜಯ್ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಬಾರ್‌ಗಳಿಂದಲೇ ಅಕ್ರಮವಾಗಿ‌ ಮದ್ಯ ಸರಬರಾಜಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕ್ರಮಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.