ಹಾಸನ: ಮಹಿಳೆ ಇಂದು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಸಮಾಜಕ್ಕೆ ತನ್ನದೇ ಕೊಡುಗೆ ನೀಡುತ್ತಿದ್ದಾಳೆ
ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಅಭಿಪ್ರಾಯಪಟ್ಟರು.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ 150ಕ್ಕೂ ಹೆಚ್ಚು ಮಹಿಳಾ ಸಂಘಟನೆಗಳಿಂದ ಶುಕ್ರವಾರ ಏರ್ಪಡಿಸಿದ್ದ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆ ಬೆಳೆದಂತೆ ಸಾಕಷ್ಟು ಬದಲಾವಣೆಗಳು ಆಗುತ್ತಿದೆ. ಮಹಿಳಾ ದಿನಾಚರಣೆ ಮಾರ್ಚ್ ತಿಂಗಳಲ್ಲಿ
ಮಾತ್ರವಲ್ಲದೆ ನಿತ್ಯವೂ ಜಾರಿಯಲ್ಲಿರಬೇಕು. ಧಾರವಾಹಿಗಳಲ್ಲಿ ಮಹಿಳೆಯರನ್ನು ವಿಲನ್ ರೀತಿ ತೋರಿಸುತ್ತಿದ್ದಾರೆ. ಆದರೆ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ದೊಡ್ಡದು. ಉಳಿಸಿದಹಣವನ್ನು ಸಹ ಮಕ್ಕಳ ವಿದ್ಯಾಭ್ಯಾಸ ಹಾಗೂ ಇತ್ಯಾದಿಗಳಿಗೆ ಬಳಸುತ್ತಾಳೆ. ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸ ಮಾಡುವ ಮಹಿಳೆಯರು, ಪುರುಷನಷ್ಟೇ ಸಮಾನವಾಗಿ ಕೆಲಸ ಮಾಡಿದರೂ ಕೂಲಿಯಲ್ಲಿ ಇಂದಿಗೂ ತಾರತಮ್ಯಇದೆ. ಇದು ಹೋಗಬೇಕು ಎಂದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅನೇಕ ಮಹಿಳೆಯರು ಗೆಲುವು ಸಾಧಿಸಿದ್ದಾರೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಮತ್ತೊಬ್ಬರ ಮೇಲೆ ಅವಲಂಬಿತರಾಗದೆ ಸ್ವಂತ ನಿರ್ಧಾರ ಕೈಗೊಂಡು, ಉತ್ತಮ ಆಡಳಿತ ನೀಡಿ ಎಂದು ಕಿವಿಮಾತು ಹೇಳಿದರು.
ಇದು ರಾಜಕೀಯ ಪ್ರೇರಿತ ಕಾರ್ಯಕ್ರಮ ಅಲ್ಲ. ಹಿಂದೆ ಹೊಳೆನರಸೀಪುರದಲ್ಲಿ ಈ ರೀತಿಯ ಅನೇಕ
ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದರು.ಭವಾನಿ ರೇವಣ್ಣ ಅವರನ್ನು ಪುಷ್ಪವೃಷ್ಟಿ ಮೂಲಕ ಸನ್ಮಾನಿಸಲಾಯಿತು. ಬೆಳಗ್ಗೆಯಿಂದ ಮಹಿಳೆಯರಿಗಾಗಿ ಭಜನೆ, ರಂಗೋಲಿ ಸ್ಪರ್ಧೆ ಹಾಗೂ ಔತಣ ಕೂಟ ಆಯೋಜಿಸಲಾಗಿತ್ತು.
ಹಾಸ್ಯ ಕಲಾವಿದ ಮಹೇಶ್ ಕುಮಾರ್ ಮಾತನಾಡಿದರು. ಮಾಜಿ ಶಾಸಕ ದಿ. ಎಚ್.ಎಸ್. ಪ್ರಕಾಶ್ ಅವರ ಪತ್ನಿ ಲಲಿತಾ ಪ್ರಕಾಶ್, ಜಯಲಕ್ಷ್ಮಿ, ಮಹಾಲಕ್ಷ್ಮಿ ದೊಡ್ಡಯ್ಯ, ಲೀಲಾವತಿ, ರಬಿನಾ, ನೇತ್ರಾವತಿ ಗಿರೀಶ್, ಪದ್ಮ ಶಿವನಂಜಪ್ಪ, ಪ್ರೇಮಮ್ಮ, ಭಾನುಮತಿ, ಜಯಲಕ್ಷ್ಮಿ ಮುನಿವೆಂಕಟೇಗೌಡ, ಪದ್ಮ ಶರ್ಮ, ಶೋಭಾ, ಭಾನುಮತಿ, ವಾಣಿ ನಾಗೇಂದ್ರ, ಶೈಲಜಾ, ಅಶ್ವಿನಿ ಮಹೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.