ADVERTISEMENT

ಹಾಸನ | ಜಿಲ್ಲೆಯಲ್ಲಿ ಶೇ 99.5 ‘ಗ್ಯಾರಂಟಿ’ ಜಾರಿ: ದಿನೇಶ್ ಗೂಳಿಗೌಡ

ಗ್ಯಾರಂಟಿ ಯೋಜನೆಗಾಗಿ ಹಾಸನ ಜಿಲ್ಲೆಗೆ ₹3,105 ಕೋಟಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 1:53 IST
Last Updated 2 ಸೆಪ್ಟೆಂಬರ್ 2025, 1:53 IST
ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಅಧಿಕಾರಿಗಳಿಂದ ಮಾಹಿತಿ ಪಡೆದರು. 
ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಅಧಿಕಾರಿಗಳಿಂದ ಮಾಹಿತಿ ಪಡೆದರು.    

ಹಾಸನ: ‘ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಹಾಸನ ಜಿಲ್ಲೆಗೆ ₹3,105.78 ಕೋಟಿ ಬಿಡುಗಡೆ ಆಗಿದ್ದು, ಶೇ 99.5ರಷ್ಟು ಅನುಷ್ಠಾನಗೊಂಡಿರುವುದು ಶ್ಲಾಘನೀಯ‘ ಎಂದು ಶಾಸಕ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಘಟಕದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಾಸನ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲ ಕುಟುಂಬಗಳಿಗೆ ಆರ್ಥಿಕ ಚೈತನ್ಯ ತುಂಬುವುದರ ಜೊತೆಗೆ ರಾಜ್ಯದ ಆರ್ಥಿಕ ಪುನಶ್ಚೇತನಕ್ಕೂ ಸಹಕಾರಿಯಾಗಿದೆ’ ಎಂದರು.

‘ನೋಟು ಅಮಾನ್ಯ, ಅವೈಜ್ಞಾನಿಕ ಜಿಎಸ್‌ಟಿ ನೀತಿ, ಕೋವಿಡ್‌–19 ಸಮಯದಲ್ಲಿನ ಲಾಕ್‌ಡೌನ್‌ನಿಂದ ಜನರು ಆರ್ಥಿಕವಾಗಿ ಸಾಕಷ್ಟು ಸಂಕಷ್ಟಕ್ಕೆ ತುತ್ತಾಗಿದ್ದರು. ಜನರಲ್ಲಿ ಕೊಳ್ಳುವ ಶಕ್ತಿ ಕುಸಿದ ಪರಿಣಾಮ ಆರ್ಥಿಕ ಸ್ಥಿತಿ ಕುಸಿತ ಕಂಡಿತ್ತು. ಗ್ರಾಮೀಣ ಜನತೆ ಹಾಗೂ ಮಧ್ಯಮ ವರ್ಗದವರಲ್ಲಿ ಖರೀದಿ ಸಾಮರ್ಥ್ಯ ವೃದ್ಧಿಯಾದರೆ, ರಾಜ್ಯ, ದೇಶದ ಆರ್ಥಿಕತೆ ಸರಿದೂಗಲಿದೆ ಎಂಬುದನ್ನು ಅರಿತ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿ ಜಾರಿಗೆ ತರುವುದರ ಜೊತೆಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ’ ಎಂದರು.

ADVERTISEMENT

‘ಯಾವುದೇ ಮದ್ಯವರ್ತಿಗಳ ಹಾವಳಿಯಿಲ್ಲದೇ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ನೇರವಾಗಿ ತಲುಪುತ್ತಿರುವ ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮ ಪಂಚ ಗ್ಯಾರಂಟಿ. ಯೋಜನೆ ವಿರೋಧಿಸುವವರು ಬೆರಳೆಣಿಕೆಯಷ್ಟು. ಆದರೆ ಸ್ವಾಗತಿಸಿ ಆಶೀರ್ವದಿಸುತ್ತಿರುವವರು ಲಕ್ಷಾಂತರ ಮಂದಿ’ ಎಂದರು.

ಇಷ್ಟು ದೊಡ್ಡ ಅನುದಾನವನ್ನು ಹಾಸನ ಜಿಲ್ಲೆಗೆ ನೀಡಿದ್ದಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರನ್ನು ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದಿಸಿದರು.

‘ಹಾಸನದ ಶೇ 99.50 ರಷ್ಟು ನಾಗರಿಕರು ಗ್ಯಾರಂಟಿ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯೋಜನೆಗಳು ಹೀಗೆಯೇ ಮುಂದುವರಿಯಲಿ ಎಂದು ಹೇಳುತ್ತಿದ್ದಾರೆಯೇ ಹೊರತು, ಈ ಯೋಜನೆ ಸ್ಥಗಿತಗೊಳಿಸಿ ಎಂಬ ಮಾತು ಎಲ್ಲೂ ಕೇಳಿಬರುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ’ ಎಂದು ಹೇಳಿದರು.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಎಚ್.ಪಿ.ಶ್ರೀಧರ್ ಗೌಡ, ಧರ್ಮಶೇಖರ, ಆನಂದಮೂರ್ತಿ ಜೆ.ಬಿ., ಶಿವಕುಮಾರ್, ಸದಸ್ಯರಾದ ಕಮಲಮ್ಮ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕೃಷ್ಣಮೂರ್ತಿ, ವಾರ್ತಾಧಿಕಾರಿ ಮೀನಾಕ್ಷಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳು ಉಪಸ್ಥಿತರಿದ್ದರು.

ಗೃಹಲಕ್ಷ್ಮಿ ಹಣವನ್ನು ಸಾಲದ ಕಂತಿಗೆ ಬ್ಯಾಂಕ್‌ಗಳು ಕಡಿತ ಮಾಡುತ್ತಿಲ್ಲ. ಕಡಿತವಾದರೂ 2–3 ದಿನದಲ್ಲಿ ಆ ಹಣ ಖಾತೆಗೆ ವಾಪಸ್ ಆಗುತ್ತಿದೆ. ಫಲಾನುಭವಿಗಳು ಆತಂಕ ಪಡುವ ಅಗತ್ಯವಿಲ್ಲ.
ಲತಾ ಸರಸ್ವತಿ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ
ಜಿಲ್ಲೆಯ 264 ಪಂಚಾಯತಿ ಕಚೇರಿಗಳಲ್ಲಿ ದೊಡ್ಡ ಬ್ಯಾನರ್ ಅಳವಡಿಸಿ ಯುವನಿಧಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ.
ಬಿ.ಆರ್‌. ಪೂರ್ಣಿಮಾ ಜಿ.ಪಂ. ಸಿಇಒ

ದೇವರ ದರ್ಶನ:

‘ಶಕ್ತಿ ಯೋಜನೆಯಿಂದ ಗ್ರಾಮೀಣ ಜನತೆ ಪುಣ್ಯಕ್ಷೇತ್ರಗಳ ದರ್ಶನ ಮಾಡಲು ಸಹಕಾರಿಯಾಗಿದೆ’ ಎಂದು ಗ್ಯಾರಂಟಿ ಸಮಿತಿ ಸದಸ್ಯರು ಹೇಳಿದರು. ‘ಕಳೆದ ಬಾರಿ ಬೀದರ್‌ನಿಂದ ಚಾಮರಾಜನಗರದವರೆಗಿನ ಮಹಿಳೆಯರು ಶಕ್ತಿ ಯೋಜನೆ ಮೂಲಕ ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ. 20 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದು ಇದರಲ್ಲಿ ಮಹಿಳೆಯರದ್ದು ಸಿಂಹಪಾಲು. ದೇವರ ಹುಂಡಿಯಲ್ಲಿ ₹ 14 ಕೋಟಿ ಸಂಗ್ರಹವಾಗಿದ್ದು ದಾಖಲೆ’ ಎಂದು ಹೇಳಿದರು. ‘ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 429023 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ₹ 407.05 ಕೋಟಿ ವರ್ಗಾಯಿಸಲಾಗಿದೆ. ಫೆಬ್ರುವರಿಯಿಂದ ₹ 170ರ ಬದಲಿಗೆ ಐದು ಕೆ.ಜಿ. ವಿತರಣೆ ಮಾಡಲಾಗುತ್ತಿದೆ. ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ 6367 ಫಲಾನುಭವಿಗಳಿಗೆ ₹ 15.78 ಕೋಟಿ ವರ್ಗಾವಣೆ ಮಾಡಲಾಗಿದೆ. ಕಾಲೇಜುಗಳಲ್ಲಿ ಯೋಜನೆ ಕುರಿತು ಪ್ರಚಾರ ಮಾಡಿ ನೋಂದಣಿ ಅಭಿಯಾನ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ವಿವರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.