
ಹಳೇಬೀಡು: ಸಮೀಪದ ರಾಜನಶಿರಿಯೂರು ಗ್ರಾಮದಲ್ಲಿ ನೇಣು ಬಿಗಿದು ಆತ್ಮಹತ್ಯೆ ಪ್ರಯತ್ನಿಸಿದ್ದ ಮಹಿಳೆ, ಮಂಗಳವಾರ ಹಾಸನದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪತಿಯಿಂದ ಕೊಲೆಯಾಗಿದೆ ಎಂದು ಮಹಿಳೆಯ ತವರು ಮನೆಯವರು ಆರೋಪಿಸಿದ್ದಾರೆ.
ಚಂದನ(ಚೆನ್ನಮ್ಮ –30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ‘15 ವರ್ಷದ ಹಿಂದೆ ನನ್ನ ತಂಗಿ ಚಂದನಾಳನ್ನು ದೊಡ್ಡಬ್ಯಾಡಗೆರೆಯಿಂದ ರಾಜನಶಿರಿಯೂರು ಗ್ರಾಮದ ಮಧು ಎಂಬ ವ್ಯಕ್ತಿಗೆ ವಿವಾಹ ಮಾಡಿಕೊಟ್ಟಿದ್ದೇವು. ಆರಂಭದಿಂದಲೂ ಪತಿ ಕಿರುಕುಳ ಕೊಡುತ್ತಿದ್ದನು’ ಎಂದು ಮೃತ ಮಹಿಳೆಯ ಅಣ್ಣ ರಘು ಹೇಳಿದರು.
‘ಗಂಡನ ಹಿಂಸೆ ತಾಳಲಾರದೇ ತಂಗಿ ಹಲವಾರು ಬಾರಿ ಮನೆ ಬಂದಿದ್ದಳು. ಹಿಂದೊಮ್ಮೆ ವಿಷ ಸೇವಿಸಿ ಅತ್ಮಹತ್ಯೆ ಯತ್ನಿಸಿದ್ದಳು. ನಾಲ್ಕೈದು ಬಾರಿ ತಂದೆ– ತಾಯಿ, ಕುಟುಂಬದವರೆಲ್ಲರೂ ಸೇರಿ ಹೊಂದಾಣಿಕೆಯಿಂದ ಜೀವನ ನಡೆಸಲು ಹೇಳಿ ಕಳಿಸಿದ್ದೇವು. ಹಲವಾರು ಬಾರಿ ಮಾರಣಾಂತಿಕ ಹಲ್ಲೆ ನಡೆಸಿದ್ನು. ಚಂದನಾ ತವರು ಮನೆಗೆ ಪೋನ್ ಮಾಡಲು ಅವಕಾಶ ಇಲ್ಲದಂತೆ ಮಾಡಿ, ಈ ಬಾರಿಯೂ ತೀವ್ರ ಹಲ್ಲೆ ನಡೆಸಿದ್ದಾನೆ. ನಂತರ ನೇಣು ಬಿಗದುಕೊಂಡಂತೆ ಮಾಡಿದ್ದಾನೆ’ ಎಂದು ಆರೋಪಿಸಿದ ರಘು ದುಂಡು ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪರ್ವತಯ್ಯ ಮಾತನಾಡಿ, ‘ಪತಿ ಮಧು ಕಿರುಕುಳ ಕೊಡುವ ವಿಚಾರವಾಗಿ ಹಲವಾರು ಬಾರಿ ಚಂದನಾ ತವರಿಗೆ ಬಂದಿದ್ದಳು. ಗ್ರಾಮದವರೆಲ್ಲ ಸೇರಿ ಪಂಚಾಯಿತಿ ಮಾಡಿ ಗಂಡನ ಮನೆಗೆ ಕಳಿಸಿದ್ದೆವು. ಈ ಬಾರಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಚಂದನಾ ಸಾಯುತ್ತಾಳೆ ಎಂಬುದು ತಿಳಿದು, ನೇಣಿನ ಸ್ಥಿತಿಯಲ್ಲಿಟ್ಟು ಆಸ್ಪತ್ರೆಗೆ ಸೇರಿಸಿದ್ದಾನೆ. ಆರೋಪಿ ಮಧುಗೆ ಕಠಿಣ ಶಿಕ್ಷೆ ಆಗಬೇಕು’ ಎಂದರು.
ಚಂದನಾ ತಾಯಿ, ಸಹೋದರಿಯರು ಹಾಗೂ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸ್ ಬಂದೋಬಸ್ತ್ನಲ್ಲಿ ಅಂತ್ಯಕ್ರಿಯೆ ನಡೆಯಿತು. ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.