
ಹಾಸನ: ವಿವಿಧ ಇಲಾಖೆಗಳಲ್ಲಿನ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರಿತ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಕಾಯಂಮೇತರ ನೌಕರರ ಒಕ್ಕೂಟದ ನೇತೃತ್ವದಲ್ಲಿ ನೌಕರರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಒಕ್ಕೂಟದ ರಾಜ್ಯ ಘಟಕದ ಕಾರ್ಯದರ್ಶಿ ಕಾಂತರಾಜು ಮಾತನಾಡಿ, ಸರ್ಕಾರದ ಉದಾರೀಕರಣ ನೀತಿಗಳ ಪರಿಣಾಮವಾಗಿ ಕಾಯಂ ನೇಮಕಾತಿಗಳನ್ನು ಕಡಿತಗೊಳಿಸಿ, ಗುತ್ತಿಗೆ, ದಿನಗೂಲಿ, ಫಿಕ್ಸ್ಡ್ ಟರ್ಮ್ ಸೇರಿದಂತೆ ವಿವಿಧ ಹೆಸರಿನಲ್ಲಿ ವಿದ್ಯಾವಂತರನ್ನು ನೇಮಿಸುತ್ತಿದೆ ಎಂದು ಆರೋಪಿಸಿದರು.
ಸರಾಸರಿ ಶೇ 75ರಷ್ಟು ಸರ್ಕಾರಿ ಕಾರ್ಯಭಾರವನ್ನು ಕಾಯಂಯೇತರ ನೌಕರರೇ ನಿರ್ವಹಿಸುತ್ತಿದ್ದರೂ, ಅವರಿಗೆ ಸಮರ್ಪಕ ವೇತನ ಹಾಗೂ ಸೇವಾ ಭದ್ರತೆ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2025 ರ ನ. 21ರಿಂದ ಜಾರಿಯಾದ ಕಾರ್ಮಿಕ ಸಂಹಿತೆಗಳು ಸಮಾನ ಕೆಲಸಕ್ಕೆ ಸಮಾನ ವೇತನ ತತ್ವವನ್ನು ಖಾತರಿ ಪಡಿಸದೇ ತಳಮಟ್ಟದ ಕೂಲಿಯನ್ನು ನಿಗದಿ ಮಾಡಿರುವುದರಿಂದ ನೌಕರರಿಗೆ ಅನ್ಯಾಯವಾಗುತ್ತಿದೆ. ಕಾಯಂಯೇತರ ನೌಕರರನ್ನು ಅನುಭವದ ಆಧಾರದ ಮೇಲೆ ಕಾಯಂ ಮಾಡಬೇಕು, ಕನಿಷ್ಠ ವೇತನ ಅಧಿಸೂಚನೆಯನ್ನು ಜಾರಿಗೆ ತರಬೇಕು, ಹೊರಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ನೇರ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಹಾಗೂ ಸೇವಾ ಜ್ಯೇಷ್ಠತೆ ಆಧಾರದಲ್ಲಿ ಮೀಸಲು ಒದಗಿಸಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಸ್.ವಿ. ಪ್ರಕಾಶ್, ಆಶಾ, ಅಣ್ಣಯ್ಯ, ಅಣ್ಣೇಗೌಡ, ಶಬಾನ ಬಾನು ಸೇರಿದಂತೆ ನೌಕರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.