
ಹಾಸನ: ಅರಸೀಕೆರೆ ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ಮನೆಯ ಒಳಗೆ ಪ್ರವೇಶಿಸಿದ ಕಳ್ಳರು, ₹ 1,47,500 ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.
ಗ್ರಾಮದ ಸೋಮಶೇಖರ ಅವರ ಪತ್ನಿ ಹಾಸನಕ್ಕೆ ಮದುವೆಗೆ ಹೋಗುವ ಸಮಯದಲ್ಲಿ ಸ್ವಲ್ಪ ಚಿನ್ನದ ಓಡವೆಗಳನ್ನು ಹಾಕಿಕೊಂಡು ಉಳಿದ ಒಡವೆಗಳನ್ನು ಬೀರುವಿನಲ್ಲಿಟ್ಟಿದ್ದರು. ಮನೆಗೆ ಬೀಗ ಹಾಕಿ ಕೀ ಅನ್ನು ಮನೆಯ ಮುಂದಿನ ಮೀಟರ್ ಬೋರ್ಡ್ ಮೇಲೆ ಇಟ್ಟು ಹಾಸನಕ್ಕೆ ಹೋಗಿದ್ದರು. ಸಂಜೆ ಬಂದು ಮನೆಯ ಬಾಗಿಲು ತೆರೆದು ನೋಡಿದಾಗ, ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿದೆ. ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತರಿಂದ ಸುಲಿಗೆ
ಹಾಸನ: ತಾಲ್ಲೂಕಿನ ಮೇದರಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರನ್ನು ನಗರದಲ್ಲಿ ಸುತ್ತುವರಿದ ಅಪರಿಚಿತ ವ್ಯಕ್ತಿಗಳು, ನಗದು, ಆಭರಣ ಸುಲಿಗೆ ಮಾಡಿ ಪರಾರಿಯಾಗಿದ್ದಾರೆ.
ಗ್ರಾಮದ ಸುದೀಪ ನಗರದ ತಣ್ಣೀರು ಹಳ್ಳದ ಕೆನರಾ ಬ್ಯಾಂಕ್ ಎಟಿಎಂನಿಂದ ಹಣ ತೆಗೆಯಲು ಹೋಗುತ್ತಿದ್ದರು. ಈ ವೇಳೆ ಸುತ್ತುವರಿದ ಮೂವರು ಅಪರಿಚಿತರು, ಸೈಕಲ್ ಚೈನ್ನಿಂದ ಸುದೀಪ್ ಮೇಲೆ ಹಲ್ಲೆ ಮಾಡಿದ್ದಾರೆ. ಜೇಬಿಗೆ ಕೈ ಹಾಕಿ ₹ 7,500 ನಗದು, ಬೈಕ್ನ ಕೀ, ಕತ್ತಿನಲ್ಲಿದ್ದ ಬೆಳ್ಳಿಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಹಾಸನದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.