
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಹಾಸನದಲ್ಲಿ ಶನಿವಾರ ಪತ್ರ ಚಳವಳಿ ನಡೆಸಿದರು
ಹಾಸನ: ವೃಂದ ಮತ್ತು ನೇಮಕಾತಿ ನಿಯಮವನ್ನು 2017ರ ಹಿಂದಿನ ಶಿಕ್ಷಕರಿಗೆ ಅನ್ವಯಿಸಬಾರದು. ನಿಯಮ ರದ್ದು ಮಾಡಬೇಕು ಎಂಬ ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಸನ ಜಿಲ್ಲಾ ಘಟಕದ ಪದಾಧಿಕಾರಿಗಳು, ಶಿಕ್ಷಕರು ಶನಿವಾರ ನಗರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪತ್ರ ಚಳವಳಿ ನಡೆಸಿದರು.
ಶಿಕ್ಷಕರ ಸಂಘದ ಪದಾಧಿಕಾರಿಗಳು, ಪ್ರತಿ ಶಿಕ್ಷಕರಿಗೆ ಆಕ್ಷೇಪಣೆ ಪ್ರತಿ ನೀಡಿದರು. 200ಕ್ಕೂ ಹೆಚ್ಚು ಶಿಕ್ಷಕರು ನೀಡಿದ ಆಕ್ಷೇಪಣೆಗಳನ್ನು ಅಂಚೆ ಮೂಲಕ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ, ‘ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ ನಾಯಕರಹಳ್ಳಿ, ನಾವು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕ ಆಗುವಾಗ, ಒಂದರಿಂದ ಏಳನೇ ತರಗತಿಯವರೆಗೆ ಎಂದು ನೇಮಿಸಲಾಯಿತು. ಅದರೆ ಈ ನಿಯಮಾವಳಿ ನಮ್ಮನ್ನು ಒಂದರಿಂದ ಐದನೇ ತರಗತಿ ವರ್ಗ ಎಂದು ಹಿಂಬಡ್ತಿ ನೀಡಿರುವುದು ದುರದೃಷ್ಟಕರ. ಇದರ ಜೊತೆಗೆ ಟಿಇಟಿ ಪರೀಕ್ಷೆ ಕಡ್ಡಾಯ ಮಾಡಿರುವುದನ್ನು ಪುನರ್ ಪರಿಶೀಲಿಸುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸುಪ್ರೀಂ ಕೋರ್ಟ್ಗೆ ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿದೆ’ ಎಂದರು.
‘ಉಳಿದ ಅಕ್ಷೇಪಣೆ ಪತ್ರಗಳನ್ನು ಶಿಕ್ಷಕರಿಗೆ ನೀಡಲಾಗುವುದು. ಅವುಗಳನ್ನು ಅ.29 ರಂದು ಸರ್ಕಾರಕ್ಕೆ ಕಳುಹಿಸಲಾಗುವುದು. ತಾಲ್ಲೂಕು ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಅಯಾ ತಾಲ್ಲೂಕಿನ ಶಿಕ್ಷಕರಿಂದ ಅಕ್ಷೇಪಣೆ ಪಡೆದು ಸಲ್ಲಿಸಲು ಸೂಚನೆ ನೀಡಲಾಗಿದೆ’ ಎಂದು ಹೇಳಿದರು.
ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಚ್.ಅಣ್ಣೇಗೌಡ, ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಬಿ.ಕೆ.ರವೀಂದ್ರ, ನಿರ್ದೇಶಕರಾದ ಗೌಡ ಲೋಹಿತ್ ಜವರಪ್ಪ, ಉಪಾಧ್ಯಕ್ಷರಾದ ಗುಡುಗನಹಳ್ಳಿ ಮಂಜುನಾಥ, ಎಚ್.ಆರ್.ಶೇಖರ್, ನಾಯಕರಹಳ್ಳಿ ಮಂಜೇಗೌಡ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.