ಹಾಸನ: ಹಾಸನಾಂಬ ದರ್ಶನ ಹಾಗೂ ಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ ಶುಕ್ರವಾರ 4 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭೇಟಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.
ಹಾಸನಾಂಬ ದೇವಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಸಾಗರೋಪಾದಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಜನರು ಬಂದಿದ್ದಾರೆ. ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ ಎಂದರು.
₹ 1ಸಾವಿರ, ₹ 300 ದರದ ವಿಶೇಷ ದರ್ಶನದ ಸಾಲುಗಳು ಸೇರಿದಂತೆ ಎಲ್ಲಾ ಸರತಿ ಸಾಲುಗಳು ಸಂಪೂರ್ಣ ಭರ್ತಿಯಾಗಿವೆ. ನಾಲ್ಕು ದಿನಗಳ ಹಿಂದೆ ನಾನೇ ಧರ್ಮ ದರ್ಶನದ ಸಾಲಿನಲ್ಲಿ ಬಂದು ಮೂರು ಗಂಟೆಯ ನಂತರ ದರ್ಶನ ಪಡೆದಿದ್ದೇನೆ. ಆದರೆ ಈಗ ದರ್ಶನಕ್ಕೆ ಸಮಯ ಹೆಚ್ಚಾಗುತ್ತಿದೆ. ಕೆಲವು ಭಕ್ತರು ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ ಎಂದರು.
ಬೆಳಿಗ್ಗೆ 7 ಗಂಟೆಗೆ ಸರತಿ ಸಾಲಿನಲ್ಲಿ ನಿಂತವರು ಸಂಜೆ 4 ಗಂಟೆಗೆ ದೇವಿ ದರ್ಶನ ಪಡೆದು ಹೊರ ಬಂದಿದ್ದಾರೆ. ಗರ್ಭಗುಡಿ ಬಳಿ ನೂಕುತ್ತಿದ್ದಾರೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಂದು ನಿಮಿಷಕ್ಕೆ 120-150 ಭಕ್ತಾದಿಗಳಿಗೆ ದರ್ಶನ ಒದಗಿಸಬೇಕು. ಇಲ್ಲವಾದಲ್ಲಿ ಲಕ್ಷಾಂತರ ಜನ ದರ್ಶನ ಪಡೆಯಲು ಆಗುವುದಿಲ್ಲ ಎಂದು ತಿಳಿಸಿದರು.
ಭಕ್ತರು ತಾಳ್ಮೆ ಹಾಗೂ ಶಾಂತಿಯಿಂದ ಸಹಕರಿಸಬೇಕು. ಭಕ್ತರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಒಂದೆರಡು ಸೆಕೆಂಡ್ನಲ್ಲಿ ಮಾತ್ರ ದೇವಿ ದರ್ಶನ ಪಡೆಯಬಹುದು ಎಂದರು.
₹ 1ಸಾವಿರ, ₹ 300 ವಿಶೇಷ ದರ್ಶನದ ಟಿಕೆಟ್ ತೆಗೆದುಕೊಂಡು ದೇವಿ ದರ್ಶನಕ್ಕೆ ಬಂದವರೂ ಅಸಮಾಧಾನ ಹೊರಹಾಕಿದ್ದಾರೆ. ಕೆಲವರಿಗೆ ಅನುಕೂಲವಾಗಲಿ ಎಂದು ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆಯೇ ಹೊರತು, ಹಣ ಮಾಡಲು ಅಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಗಳನ್ನು ಮಾಡಲಾಗಿದೆ. 2–3 ಪಟ್ಟಿಗಿಂತ ಹೆಚ್ಚು ಭಕ್ತರು ಬಂದಿದ್ದಾರೆ. ಭಕ್ತಾದಿಗಳ ಸುರಕ್ಷತೆಯೇ ನಮ್ಮ ಗುರಿಯಾಗಿದೆ. ದೇವಿ ದರ್ಶನಕ್ಕೆ ಭಕ್ತಾದಿಗಳು ಮೊದಲೇ ಮಾನಸಿಕವಾಗಿ ಸಿದ್ದರಾಗಿರಬೇಕು. ಎಷ್ಟು ಸಮಯಕ್ಕೆ ದರ್ಶನ ಆಗುತ್ತದೆ ಎಂಬುದನ್ನು ಎಲ್ಲ ಸಾಲುಗಳಲ್ಲಿ ಈಗಾಗಲೇ ಬೋರ್ಡ್ ಹಾಕಿದ್ದೇವೆ. ದರ್ಶನ ಸಮಯ ಎಂದು ಬೋರ್ಡ್ ಕೂಡ ಅಳವಡಿಸಲಾಗಿದೆ ಎಂದರು.
ಧರ್ಮ ದರ್ಶನದ ಸಾಲಿನಲ್ಲಿ ಬರುತ್ತಿರುವವರಿಗೆ 7 ರಿಂದ 8 ಗಂಟೆ, ₹ 1ಸಾವಿರ ಸಾಲಿನಲ್ಲಿ ಬರುತ್ತಿರುವವರಿಗೆ 3 ರಿಂದ 4 ಗಂಟೆ, ₹ 300 ಸಾಲಿನಲ್ಲಿ ಬರುತ್ತಿರುವವರಿಗೆ 6 ರಿಂದ 7 ಗಂಟೆ ಸಮಯ ಆಗುತ್ತಿದೆ ಎಂದರು.
ದರ್ಶನಕ್ಕೆ ಬರುವವರು ಪೂರ್ವ ತಯಾರಿ ಮಾಡಿಕೊಂಡು ಬಂದು ತಾಯಿ ಆಶೀರ್ವಾದ ಪಡೆದುಕೊಳ್ಳಬೇಕು. ಮೊದಲು ತಾಳ್ಮೆ ಇರಬೇಕು. ಮೊಬೈಲ್ ಬಳಸಬಾರದು. ಮಕ್ಕಳನ್ನು ಮೇಲೆತ್ತಿಕೊಂಡು ಬರಬೇಕು. ದರ್ಶನದ ದ್ವಾರಕ್ಕೆ ಬಂದ ವೇಳೆಯಲ್ಲಿ ದೇವಿ ಕಡೆಗೆ ನೋಡಿ ದರ್ಶನ ಪಡೆಯಬೇಕು ಎಂದು ತಿಳಿಸಿದರು.
₹ 1ಸಾವಿರ, ₹ 300 ವಿಶೇಷ ದರ್ಶನದ ಟಿಕೆಟ್ ಮಾರಾಟ, ಲಾಡು ಪ್ರಸಾದ ಮಾರಾಟದಿಂದ ಶುಕ್ರವಾರ ಮಧ್ಯಾಹ್ನ 2 ಗಂಟೆಯವರೆಗೆ ₹ 10.5 ಕೋಟಿ ಆದಾಯ ಸಂಗ್ರಹವಾಗಿದೆ. ಇಲ್ಲಿಯವರೆಗೂ 15.30 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದು ತಿಳಿಸಿದರು.
ತಯಾರಾಗಿ ಬನ್ನಿ– ಸಚಿವ ಕೃಷ್ಣ ಬೈರೇಗೌಡ: ಧರ್ಮದರ್ಶನಕ್ಕೆ ಸರಾಸರಿ 6–9 ಗಂಟೆ ತಗಲುತ್ತಿದ್ದು, ₹ 300 ಟಿಕೆಟ್ ವಿಶೇಷ ದರ್ಶನದ ಸಾಲಿನಲ್ಲಿ 4–6 ಗಂಟೆ ತಗುಲುತ್ತಿದೆ. ₹ 1 ಸಾವಿರ ಟಿಕೆಟ್ನವರಿಗೆ ಒಂದು ಗಂಟೆಯಿಂದ ಎರಡೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಮುಂದಿನ ಎಲ್ಲ ದಿನಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ದರ್ಶನಕ್ಕೆ ಬರುವ ಜನರು ಸರದಿ ಸಾಲಿನಲ್ಲಿ ಹೆಚ್ಚಿನ ಸಮಯ ನಿಲ್ಲಬೇಕಾಗಿದೆ. ಪ್ರತಿ ನಿಮಿಷಕ್ಕೆ ಸುಮಾರು 150 ಮಂದಿ ದರ್ಶನ ಪಡೆಯುತ್ತಿದ್ದಾರೆ. ಜನರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ದೇವಿ ದರ್ಶನಕ್ಕೆ ನಾಲ್ಕು ದಿನ ಬಾಕಿ ಇದೆ. ಮುಂದಿನ ದಿನಗಳಲ್ಲಿ ಒಂದು ದಿನಕ್ಕೆ ಭಕ್ತಾದಿಗಳ ಸಂಖ್ಯೆ ಐದು ಲಕ್ಷ ಮೀರಬಹುದು ಎಂದು ಅಂದಾಜಿಸಲಾಗಿದೆ.ಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ
ಮಳೆಯ ನಡುವೆಯೂ ಸಮಸ್ಯೆ ಆಲಿಸಿದ ಸಂಸದ ಹಾಸನಾಂಬ ದರ್ಶನಕ್ಕೆ ಜನರ ಸಂಖ್ಯೆ ಹೆಚ್ಚುತ್ತಿದ್ದು ಸಂಸದ ಶ್ರೇಯಸ್ ಪಟೇಲ್ ಮಳೆ ನಡುವೆಯೂ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರ ಸಮಸ್ಯೆ ಆಲಿಸಿದರು. ಜನಸಂಖ್ಯೆ ಹೆಚ್ಚಿದ್ದು ಸರತಿ ಸಾಲಿನಲ್ಲಿ ಶಾಂತ ರೀತಿಯಲ್ಲಿ ವರ್ತಿಸಬೇಕು ಎಂದು ಮನವಿ ಮಾಡಿದರು. ಸಾಲಿನಲ್ಲಿ ನಿಂತಿರುವ ಪೋಷಕರು ತಮ್ಮ ಮಕ್ಕಳು ಹಾಗೂ ವೃದ್ಧರ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದ ಅವರು ಇದೇ ವೇಳೆ ಮಕ್ಕಳಿಗೆ ತಿನಿಸುಗಳನ್ನು ವಿತರಿಸಿದರು. ಗುರುವಾರ ರಾತ್ರಿ ಹಾಗೂ ಶುಕ್ರವಾರ ಆಗಾಗ್ಗೆ ಮಳೆ ಸುರಿದಿದ್ದು ಮಳೆಯ ನಡುವೆಯೂ ದರ್ಶನಕ್ಕೆ ಬರುವ ಜನರ ಉತ್ಸಾಹ ಕಡಿಮೆ ಆಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.